ಮೂಡುಬಿದರೆ:ಜುಲೈ13: ಊರಿನ ಸ್ವಾಸ್ಥ್ಯಕ್ಕಾಗಿ ಸಂಘಗಳು ಇರಬೇಕೇ ಹೊರತು ಸ್ವಾರ್ಥಕ್ಕಾಗಿ ಹುಟ್ಟಿಕೊಳ್ಳಬಾರದು. ಆಡಂಭರಕ್ಕೆಂದು ಕೆಲವೊಂದು ಸಂಘಸಂಸ್ಥೆಗಳು ಸೃಷ್ಟಿಯಾಗುತ್ತಿವೆ. ಚಟುವಟಿಕೆ ಶೂನ್ಯವಾಗಿರುತ್ತದೆ. ಆದರೆ ಯಕ್ಷಗಾನ ಕಲಾಪ್ರಕಾರದ ಬೇರೆ ಬೇರೆ ಆಯಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಂತಾವರ ಯಕ್ಷದೇಗುಲವು ಯುವಜನರಲ್ಲಿ ಕಲಾಸಕ್ತಿಯನ್ನು ಮೂಡಿಸುವ ಕೆಲಸಮಾಡುತ್ತಿದೆ ಎಂದು ಶ್ರೀ ಕ್ಷೇತ್ರ ಕಾಂತಾವರದ ಧರ್ಮದರ್ಶಿ ಡಾ.ಬಿ.ಜೀವಂಧರ ಬಲ್ಲಾಳ್ ಹೇಳಿದರು.
ಯಕ್ಷದೇಗುಲ ಕಾಂತಾವರದ ವತಿಯಿಂದ ಶ್ರೀ ಕ್ಷೇತ್ರದಲ್ಲಿ ಭಾನುವಾರ ನಡೆದ ಯಕ್ಷಗಾನ ಬಯಲಾಟ ಹಾಗೂ ತಾಳಮದ್ದಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯಮಿಗಳಾದ ಉದಯ ಶೆಟ್ಟಿ, ಗ್ರಾ.ಪಂ.ಅಧ್ಯಕ್ಷ ಜಯ ಎಸ್. ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸುಮತಿ ಬಲ್ಲಾಳ್, ನಿವೃತ್ತ ಪ್ರಾಚಾರ್ಯ ಪ್ರೊ. ವಿ. ಪದ್ಮನಾಭ ಗೌಡ, ಉದ್ಯಮಿ ಶ್ರೀಪತಿ ಭಟ್ ಭಾಗವಹಿಸಿದರು. ಕಾರ್ಯದರ್ಶಿ ಮಹಾವೀರ ಪಾಂಡಿ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಪತಿ ರಾವ್ ವಂದಿಸಿದರು.
ಬಳಿಕ ಬಾಲಕಲಾವಿದರಿಂದ ಷಣ್ಮುಖ ವಿಜಯ ಯಕ್ಷಗಾನ ಬಯಲಾಟ ಹಾಗೂ ಪ್ರಸಿದ್ಧ ಅರ್ಥದಾರಿಗಳಿಂದ ಭೀಷ್ಮವಿಜಯ ತಾಳಮದ್ದಳೆ ನಡೆಯಿತು.
..

