1. ಮೂಲ್ಕಿ ಬಳಿಯ ಪಾವಂಜೆಯಲ್ಲಿ ಕೊಲೆಯಾದ ಅವಿನಾಶ್ ಹಾಗೂ ಆತನ ಹತ್ಯೆಗೆ ಕಾರಣಳಾದ ಸುಷ್ಮಾ.

ಸುದ್ದಿ 9ಮೂಲ್ಕಿ; ಎಸ್ಎಮ್ಎಸ್ನಿಂದ ಬಯಲಾದ ಕೊಲೆ ರಹಸ್ಯ..?
ಕಳೆದ ನಾಲ್ಕು ವರ್ಷದಿಂದ ಪ್ರೇಮಿಸಿದವಳಿಂದಲೇ ಹತನಾದ ಯುವಕನ ಕೊಲೆ ರಹಸ್ಯವನ್ನು ಭೇಧಿಸಲು ನೆರವಾದುದು ಕೇವಲ ಒಂದು ಮೊಬೈಲ್ ಎಸ್ಎಮ್ಎಸ್ ಎಂಬುದು ಮೂಲ್ಕಿಯಲ್ಲಿ ಮಂಗಳವಾರ ಬೆಳಕಿಗೆ ಬಂದ ತ್ರಿಕೋನ ಪ್ರೇಮ ಪ್ರಕರಣದ ಪ್ರಾಥಮಿಕ ತನಿಖೆಗೆ ಸಹಕಾರಿಯಾಗಿದ್ದನ್ನು ಪೊಲೀಸರು ಹೇಳಿಕೊಂಡಿದ್ದಾರೆ.
ಕಾರ್ಕಳದ ಬೋಳ ಕೆಂದೊಟ್ಟು ಪದವು ನಿವಾಸಿ ವಿದ್ಯಾನಂದ ಸುವರ್ಣರ ಹಿರಿಯ ಮಗ ಅವಿನಾಶ್ ಪೂಜಾರಿ (21) ಪಾವಂಜೆಯಲ್ಲಿ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗುವಾಗಲೇ ಮೃತಪಟ್ಟಿದ್ದನು. ಆರಂಭದಲ್ಲಿ ಇದು ಅಪಘಾತ ಎಂದೇ ನಿರ್ಧರಿಸಿದ್ದ ಮೂಲ್ಕಿ ಪೊಲೀಸರು ಆತನ ಮೊಬೈಲ್ನ್ನು ಪರಿಶೀಲಿಸುವಾಗ ಯುವತಿಯೊಬ್ಬಳಿಗೆ ಎಸ್ಎಮ್ಎಸ್ ಮಾಡಿದ ಬಗ್ಗೆ ತಿಳಿದು ಬಂದಿತು ಅದರ ಹಿಂದಿನ ಜಾಡನ್ನು ಅರಿಸಿಕೊಂಡಾಗ ಅವಿನಾಶ್ನನ್ನು ವ್ಯವಸ್ಥಿತ ರೀತಿಯಲ್ಲಿ ಕೊಲೆ ಮಾಡಲಾಗಿದೆ ಎಂಬ ಸತ್ಯಾಂಶ ಹೊರ ಬಂದಾಗ ಅದರಲ್ಲಿ ಯುವತಿಯೋರ್ವಳು ಶಾಮಿಲಾಗಿದ್ದಾಳೆ ಎಂಬ ಮಾಹಿತಿಯಂತೆ ತನಿಖೆಯನ್ನು ಕ್ಷಿಪ್ರಗತಿಯಲ್ಲಿ ಮಾಡಿದರು.
ಮೂಲ್ಕಿ ಕೊಳಚಿಕಂಬಳದ ಪಡ್ಡಾಯಿಬೈಲಿನ ಮಾಬೆನ್ ಎಂಬುವರ ಪುತ್ರಿ ಸುಷ್ಮಾ ಪ್ರೆಸಿಲ್ಲಾ (21) ಈ ಹತ್ಯೆಯ ರುವಾರಿ ಎಂದು ಪೊಲೀಸರಿಗೆ ತಿಳಿದು ಈ ಕೊಲೆ ಕೃತ್ಯದಲ್ಲಿ ನೇರವಾಗಿ ಭಾಗಿಯಾದ ತಿಪಟೂರು ಮೂಲದ ಮಂಗಳೂರಿನ ಮುಳಿಹಿತ್ಲುವಿನಲ್ಲಿ ವಾಸವಾಗಿರುವ ಹರೀಶ್ (20) ಎಂಬಾತನನ್ನು ಸಹ ಪೊಲೀಸರು ಬಂಧಿಸಲು ಯಶಸ್ಸಾದರು.
ಕೊಲೆಯಾದ ಅವಿನಾಶ್ ಸುಷ್ಮಾಳು ಕೆಲಸ ಮಾಡುತ್ತಿದ್ದ ಮಂಗಳೂರು ಮಾರ್ಗನ್ಸ್ ಗೇಟ್ನಲ್ಲಿ ಕಾಲ್ಸೆಂಟರಿನಲ್ಲಿ ಸೋಮವಾರ ರಾದ್ದಾಂತ ಮಾಡಿದ್ದರಿಂದ ಆಕೆಯನ್ನು ಕಚೇರಿಯ ಮುಖ್ಯಸ್ಥರು ತರಾಟೆಗೆ ತೆಗೆದುಕೊಂಡರಲ್ಲದೇ ಆಕೆಯ ಮೊಬೈಲ್ನಲ್ಲಿ ಅವಿನಾಶ್ನ ಎಸ್ಎಮ್ಎಸ್ಗಳಿದ್ದನ್ನು ಪರಿಶೀಲಿಸಿ ನಿಯಮದಂತೆ ಕೆಲಸದಿಂದ ಏಕಾಏಕಿ ತೆಗೆದು ಹಾಕಿದ್ದರು. ಸೋಮವಾರ ಮಧ್ಯರಾತ್ರಿಯೇ ಹೊರಬಿದ್ದ ಆಕೆ ಕೃದ್ಧಳಾಗಿ ಹರೀಶ್ಗೆ ಮೊಬೈಲ್ ಮೂಲಕ ನಡೆದ ಘಟನೆಯನ್ನು ಹೇಳಿಕೊಂಡು ಅವಿನಾಶ್ಗೆ ತಕ್ಕಶಾಸ್ತಿ ಮಾಡಲು ಸೂಚನೆ ನೀಡಿದ್ದರಿಂದಲೇ ಹರೀಶ್ ಈ ಕೊಲೆ ಕೃತ್ಯ ಮಾಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.
ಹರೀಶ್ ಈ ಕೊಲೆ ಮಾಡುವ ಮೊದಲು ರಾತ್ರಿಯಿಡೀ ಸುರತ್ಕಲ್ ಬಸ್ ನಿಲ್ದಾಣದಲ್ಲಿ ಮಲಗಿ ಸುಷ್ಮಾಳ ಆದೇಶದಂತೆ ಅವಿನಾಶ್ ಪಾವಂಜೆ ಬಳಿ ಮುಂಜಾನೆ ಕಾದು ನಿಂತಿರುವಾಗಲೇ ಸುಮೋವನ್ನು ಬೈಕಿನ ಮೇಲೆ ಚಲಾಯಿಸಿ ಹತ್ಯೆ ಮಾಡಿ ಅತ್ತಾವರದ ಸ್ನೇಹಿತನ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದನು. ಹತ್ಯೆಯಾದ ನಂತರ ಇವರಿಬ್ಬರು ಪರಾರಿಯಾಗುವ ಸಂಚನ್ನು ರೂಪಿಸಿದ್ದರು. ಈ ಹತ್ಯೆಯಾದ ನಂತರ ಹರೀಶ್ನಿಂದ ಪಡೆದ ಮೊಬೈಲ್ ಸಿಮ್ನ್ನು ಸುಷ್ಮಾ ನಾಶಪಡಿಸಲು ಪ್ರಯತ್ನಿಸಿದ್ದು ಅದೀಗ ಪೊಲೀಸರು ತಮ್ಮ ವಶಕ್ಕೆ ಪಡೆಯಲು ಯಶಸ್ಸಾದರಲ್ಲದೇ ಅದರಲ್ಲಿನ ಎಸ್ಎಮ್ಎಸ್ ದಾಖಲೆಗಳೇ ಈಗ ಈ ಪ್ರಕರಣದ ಮಹತ್ವದ ಸಾಕ್ಷಿಯಾಗಲಿದೆ ಎಂದು ತನಿಖೆ ನಡೆಸುತ್ತಿರುವ ಪೊಲೀಸರು ಹೇಳುತ್ತಾರೆ.
ಈ ನಡುವೆ ಹತ್ಯೆಯ ರುವಾರಿ ಸುಷ್ಮಾಳ ಹಿರಿಯ ಸಹೋದರಿಗೆ ಏಪ್ರಿಲ್ 24ರಂದು ಮದುವೆ ನಡೆಯಲಿದ್ದು ಅದರ ಮೇಲೆ ಕರಿಛಾಯೆ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬುಧವಾರ ಮೂಲ್ಕಿ ಪೊಲೀಸರು ಆರೋಪಿಗಳಾದ ಸುಷ್ಮಾ ಹಾಗೂ ಹರೀಶ್ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಅವರಿಗೆ 15ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹತನಾದ ಅವಿನಾಶ್ನ ಮೃತದೇಹವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬೋಳದ ಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ
.
2. ಅವಿನಾಶ್ನನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾದ ಹರೀಶ್
ಚಿತ್ರ ವರದಿ.ನರೇಂದ್ರ ಕೆರೆಕಾಡು
