ಬಂಟ್ವಾಳ:ಧಾರ್ಮಿಕ ಕೇಂದ್ರಗಳು ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಒಗ್ಗೂಡಿಸುವ ಮೂಲಕ ಪರಸ್ಪರ ದ್ವೇಷ-ಅಸೂಯೆಗೆ ಅವಕಾಶ ನೀಡಬಾರದು. ಆ ಮೂಲಕ ಒಟ್ಟು ಸಾಮಾಜಿಕ ಮತ್ತು ಧಾರ್ಮಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಇದರಿಂದಾಗಿ ಎಲ್ಲರಿಂದ ಪ್ರೀತಿಸಲ್ಪಡುವ ವ್ಯಕ್ತಿಯೂ ದೇವರಿಗೆ ಮತ್ತಷ್ಟು ಹತ್ತಿರವಾಗುತ್ತಾನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ತಾಲ್ಲೂಕಿನ ಕಡೇಶಿವಾಲಯ ಗ್ರಾಮದ ಅಮೈ-ಮಾಡದಾರು ಶ್ರೀ ಪಿಲಿಚಾಮುಂಡಿ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಶನಿವಾರ ನಡೆದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಪ್ರತೀ ವರ್ಷ ಮಕ್ಕಳ ಹುಟ್ಟುಹಬ್ಬಕ್ಕೆ ಒಂದು ಗಿಡ ನೆಡುವ ಪರಿಪಾಠ ಬೆಳೆಸುವ ಮೂಲಕ ಮಕ್ಕಳು ದೀಪ ನಂದಿಸುವ ಬದಲಾಗಿ ದೀಪ ಹಚ್ಚಿ ಬೆಳಗುವ ಬಗ್ಗೆ ಸಂಸ್ಕಾರ ನೀಡಬೇಕು ಎಂದರು.
ಪಯ್ಯನೂರು ಜ್ಯೊತಿಷಿ ಎ.ವಿ. ಮಾಧವ ಪೊದುವಾಳ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲೀಲೇಶ್ ಆರ್. ಶೆಟ್ಟಿ ಪಾಂಡಿಬೆಟ್ಟು, ಆಡಳಿತ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಸಾಂತಪ್ಪ ಪೂಜಾರಿ, ಪುತ್ತೂರು ವಲಯ ಅರಣ್ಯಾಧಿಕಾರಿ ಬಿ.ಎನ್.ಹರೀಶ ಗೌಡ, ವಿಜಯಾ ಬ್ಯಾಂಕ್ನ ನಿವೃತ್ತ ಮೆನೇಜರ್ ಶಿವರಾಮ ಶೆಟ್ಟಿ ಅಮೈ ಮತ್ತಿತರರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಬಿ. ರಾಮದಾಸ ರೈ ಬಾವಗುತ್ತು ಸ್ವಾಗತಿಸಿ, ಅಜಿತ್ ರೈ ಸಿದ್ದಕಟ್ಟೆ ವಂದಿಸಿದರು. ತೀರ್ಥಪ್ರಸಾದ್ ಅನಂತಾಡಿ ಮತ್ತು ಮಲ್ಲಿಕಾ ಅಜಿತ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
