ಬಂಟ್ವಾಳ:ತಾಲ್ಲೂಕಿನ ಹಲವೆಡೆ ಕಳೆದ ಮಂಗಳವಾರ ರಾತ್ರಿ ಮತ್ತು ಗುರುವಾರ ಸಂಜೆ ಸುರಿದ ಸಿಡಿಲು ಮಳೆಗೆ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಬಳಿ ಕೆಸರಿನ ಕೊಚ್ಚೆ ಉಂಟಾಗಿದ್ದರೆ, ಕೆಲವೆಡೆ ಸಿಡಿಲು ಬಡಿದು ಮನೆಗೆ ಹಾನಿ ಉಂಟಾಗಿದೆ.
ಅಮ್ಟೂರು ಗ್ರಾಮದ ನೆತ್ತಿಕಲ್ಲು ನಿವಾಸಿ ಬಾಲಕೃಷ್ಣ ಎಂಬವರ ಮನೆಗೆ ಮಂಗಳವಾರ ರಾತ್ರಿ ಸಿಡಿಲು ಬಡಿದು ಮನೆಯ ವಿದ್ಯುತ್ ಉಪಕರಣಗಳು ಹಾನಿಯಾಗಿ ಸುಮಾರು ರೂ 50 ಸಾವಿರ ಮೌಲ್ಯದ ಸೊತ್ತು ನಷ್ಟವಾಗಿದೆ.
ಇದೇ ಗ್ರಾಮದ ಹೊಗೆಗದ್ದೆ ನಿವಾಸಿ ದೇವಕಿ ಎಂಬವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯಲ್ಲಿ ಟಿ.ವಿ., ಗ್ರೈಂಡರ್, ವಿದ್ಯುತ್ ಸಂಪರ್ಕ ಹಾನಿಯಾಗಿ ಸುಮಾರು ರೂ 50 ಸಾವಿರ ಮೊತ್ತದ ನಷ್ಟ ಉಂಟಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ಅಧಿಕಾರಿ ಎ.ಪಿ.ಭಟ್ ತಿಳಿಸಿದ್ದಾರೆ.
ಬಿ.ಮೂಡ ಗ್ರಾಮದ ನಂದರಬೆಟ್ಟು ಎಂಬಲ್ಲಿ ಸ್ಥಳೀಯ ನಿವಾಸಿ ಶ್ರೀಧರ ಶೆಟ್ಟಿ ಎಂಬವರ ಮನೆಗೆ ಮರದ ಕೊಂಬೆಯೊಂದು ಮುರಿದು ಬಿದ್ದು ಮನೆ ಮಾಡಿನ ಹೆಂಚು ಮತ್ತು ಗೋಡೆಗೆ ಹಾನಿಯಾಗಿದೆ. ಮನೆ ಮೇಲ್ಛಾವಣಿ ಸಂಪೂರ್ಣ ಕುಸಿದಿದೆ. ಇದರಿಂದ ಸುಮಾರು ರೂ 25 ಸಾವಿರ ನಷ್ಟ ಉಂಟಾಗಿದೆ. ಗ್ರಾಮಕರಣಿಕ ರಾಜ್ಕುಮಾರ್ ಮತ್ತು ಸಹಾಯಕ ಸದಾಶಿವ ಮನೆಗೆ ಭೇಟಿ ನೀಡಿ ಕಂದಾಯ ಇಲಾಖೆಗೆ ವರದಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.


