ಸಕಲೇಶ್ಪುರ: ಒಂಟಿ ಮನೆಯನ್ನು ಕೇಂದ್ರವಾಗಿರಿಸಿ ಹಾಗೂ ಹೆದ್ದಾರಿಗಳಲ್ಲಿ ಸಾಗುವ ವಾಹನಗಳನ್ನು ಬೆನ್ನತ್ತಿ ದರೋಡೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಸಕಲೇಶ್ಪುರದ ಪೊಲೀಸರು ಒಟ್ಟು ಆರು ಆರೋಪಿಗಳನ್ನು ಬಂಧಿಸಿದ್ದು, ಅವುಗಳಲ್ಲಿ ಮೂರು ಮಂದಿ ಬಂಟ್ವಾಳ ತಾಲೂಕಿನವರು ಎಂದು ತಿಳಿದುಬಂದಿದೆ.

ಬಂಧಿತರಿಂದ ಮಾರಕಾಯುಧ ಸಹಿತ ಹಲವಾರು ಸೊತ್ತುಗಳನ್ನು ಬಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಸಕಲೇಶ್ಪುರದ ಕೌಡಳ್ಳಿ ಗ್ರಾಮದ ಮನ್ಸೂರು(28), ಶಿವಮೊಗ್ಗದ ಟಿಪ್ಪು ಬಡಾವಣೆಯ ಇಷರ್ಾದ್(20), ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಮುಹಮ್ಮದ್ ಬಶೀರ್(28) ಹಾಗೂ ಮುಹಮ್ಮದ್ ರಫೀಕ್, ಬಿ.ಸಿ.ರೋಡ್ನ ಮುಹಮ್ಮದ್ ಆಶ್ಫಕ್(24) ಮತ್ತು ಬಂಟ್ವಾಳದ ಕರಿಯಂಗಳ ಗ್ರಾಮದ ಬಡಕಬೈಲು ಮಹಮ್ಮದ್ ಉಸ್ಮಾನ್(25) ಬಂಧಿತ ಆರೋಪಿಗಳು.
ಕೆಲದಿನಗಳ ಹಿಂದೆ ಸಕಲೇಶ್ಪುರದ ಅಜಾದ್ ರಸ್ತೆಯಲ್ಲಿ ತಮ್ಮ ಕಾರಿನಲ್ಲಿ ಮಾರಕಾಯುಧಗಳನ್ನು ಹಿಡಿದುಕೊಂಡು ಸಂಚರಿಸುತ್ತಿದ್ದಾಗ ಪೊಲೀಸರು ಅನುಮಾನದ ಮೇರೆಗೆ ಬಂಧಿಸಿ ವಿಚಾರಣೆ ನಡೆಸಿದಾಗ ಹೆದ್ದಾರಿ ದರೋಡೆ ಪ್ರಕರಣ ಬೆಳಕಿಗೆ ಬಂದಿತ್ತು. ಆರೋಪಿಗಳಿಂದ ಕತ್ತಿ, ಖಾರದ ಪುಡಿ, ನಕಲಿ ಬೀಗದ ಕೈ, ಗ್ರೌಡ್, ಮಂಕಿ ಕ್ಯಾಪ್, ಸ್ಕ್ರೂ ಡ್ರೈವರ್ ವಶಪಡಿಸಿಕೊಳ್ಳಲಾಗಿದೆ
