ಸುದ್ದಿ9 ಮೂಡುಬಿದರೆ: ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ಅನ್ನು ಚತುಷ್ಪಥ ಪರಿವರ್ತಿಸುವ ಬಗ್ಗೆ ಜನಪ್ರತಿನಿಧಿಗಳ ನೀಡುತ್ತಿರುವ ಗೊಂದಲದ ಹೇಳಿಕೆಗಳನ್ನು ನಿಲ್ಲಿಸಿ, 30 ದಿನಗಳೊಳಗೆ ಕಾರ್ಯಪ್ರವೃತ್ತರಾಗದಿದಲ್ಲಿ ನಾಗರಿಕರು, ಹಲವು ಸಂಘಸಂಸ್ಥೆಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ನಾಗರಿಕ ಹಿತರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ಮಿಜಾರು-ಬಡಗ ಎಡಪದವು ನಾಗರಿಕ ಹಿತರಕ್ಷಣಾ ವೇದಿಕೆಯ ಉಪಾಧ್ಯಕ್ಷ ಸುಧಾಕರ ಪೂಂಜಾ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ, ಮಂಗಳೂರು-ಮೂಡುಬಿದರೆ ಚತುಷ್ಪಥ ಹಾಗೂ ಮೂಡುಬಿದರೆ -ಕಾರ್ಕಳ ಹೆದ್ದಾರಿಯನ್ನು ದ್ವಿಪಥಗೊಳಿಸುವ ಪ್ರಸ್ತಾಪ ಕೇವಲ ಪರಿಶೀಲನೆಯಲ್ಲೇ ಉಂಟು. ಪೊಲೀಸ್ ಇಲಾಖೆ ನೀಡುವ ಮಾಹಿತಿ ಪ್ರಕಾರ ಈ ಹೆದ್ದಾರಿಯಲ್ಲಿ ಅತೀ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿದೆ. ಆದರೆ ಯೋಜನೆ ಅನುಷ್ಠಾನಗೊಳಿಸುವಲ್ಲಿ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಯೋಜನೆ ಮಂಜೂರಾಗುವಲ್ಲಿ ಎಡವುತ್ತಿದೆ.
ಮಂಗಳೂರು ವಿಧಾನಸಭಾ ಕ್ಷೇತ್ರ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ, ಮೂಡುಬಿದರೆ ಕ್ಷೇತ್ರ, ಕಾರ್ಕಳ ವಿಧಾನ ಸಭಾ ಕ್ಷೇತ್ರ, ಮಂಗಳೂರು ಲೋಕಸಭಾ ಕ್ಷೇತ್ರ ಹಾಗೂ ಉಡುಪಿ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ ಈ ರಸ್ತೆಯ ಬಗ್ಗೆ ಈ ಹಿಂದೆ, ಅಂದಿನ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ.ಜೆ.ಪಾಲೇಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಮೂಡುಬಿದರೆ ಶಾಸಕ ಕೆ.ಅಭಯಚಂದ್ರ ಸಾಕಷ್ಟು ಬಾರಿ ಗೊಂದಲ ಹೇಳಿಕೆಗಳನ್ನು ನೀಡಿದ್ದಾರೆ. ನಾಗರಿಕರಿಗೆ ಬೇಕಾದದ್ದು ಜನಪ್ರತಿನಿಧಿಗಳ ಹೇಳಿಕೆಯಲ್ಲ. ಯೋಜನೆಗಳ ಅನುಷ್ಠಾನ. ಬಹುವರ್ಷಗಳ ಈ ಬೇಡಿಕೆ ಈಡೇರುವ ಲಕ್ಷಣ ಕಂಡುಬಾರದಿದಲ್ಲಿ ನಾಗರಿಕರು, ಬಸ್ಸು ಮಾಲೀಕರ ಸಂಘ, ಆಟೋ ಚಾಲಕರ ಸಂಘದವರ ಸಹಕಾರದೊಂದಿಗೆ ನಂತೂರಿನಿಂದ ಕಾರ್ಕಳದವರೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ವೇದಿಕೆಯ ಗೌರವಾಧ್ಯಕ್ಷ, ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಹಮೀದ್ ಪಕ್ಕಲಡ್ಕ, ಅಧ್ಯಕ್ಷ ಸುದರ್ಶನ ಪೂಂಜಾ, ಕಾರ್ಯದರ್ಶಿ ಉಮೇಶ್ ರಾವ್ ಸುದ್ದಿಗೋಷ್ಠಿಯಲ್ಲಿದ್ದರು.

By suddi9

Leave a Reply

Your email address will not be published. Required fields are marked *