ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ಮಹಾಲಕ್ಷ್ಮೀ ದೇವರ ಬ್ರಹ್ಮಕುಂಭಾಬಿಷೇಕದ ಪ್ರಯುಕ್ತ ಫ್ರೆ.22 ರಂದು ಭಾನುವಾರ ಜರಗುವ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಯ ಬಗ್ಗೆ ಸಮಾಲೋಚನಾ ಸಭೆಯು ಫ್ರೆ. 8 ರಂದು ಭಾನುವಾರ ಸಂಜೆ ಬಿ.ಸಿ.ರೋಡು ಶ್ರೀ ರಕ್ತೇಶ್ವರೀ ದೇವಸ್ಥಾನದಲ್ಲಿ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಿತು.
ಪೂಜ್ಯ ಸ್ವಾಮೀಜಿಯವರು ಕಾರ್ಯಕ್ರಮದ ಯಶಸ್ಸಿಗಾಗಿ ಭಾಗವಹಿಸಿದ ಎಲ್ಲಾ ಸಂಘ-ಸಂಸ್ಥೆಗಳ ಮತ್ತು ಭಜನಾ ಮಂಡಳಿಗಳ ಮುಖಂಡರುಗಳು ಹಾಗೂ ಸದಸ್ಯರನ್ನು ಉದ್ದೇಶಿಸಿ, ಭಕ್ತಾದಿಗಳು ಅರ್ಪಣಾ ಭಾವದಿಂದ ಭಾಗವಹಿಸಿ ಕೃತಾರ್ಥರಾಗುವಂತೆ ವಿನಂತಿಸಿ ಆಶೀರ್ವಚನ ನೀಡಿದರು.
ಸಭೆಯಲ್ಲಿ ಶ್ರೀ ರಕ್ತೇಶ್ವರೀ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಗೋಪಾಲ ಸುವರ್ಣ, ಬಂಟ್ವಾಳ ತಾಲೂಕು ಬಿಲ್ಲವರ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಸೇಸಪ್ಪ ಕೋಟ್ಯಾನ್ ಪಚಿನಡ್ಕ , ಪ್ರಮುಖರಾದ ಸದಾನಂದ ಮಲ್ಲಿ, ಜಯರಾಮ ಸಾಮಾನಿ, ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಕೆ. ದಯಾನಂದ ಬೆಳ್ಳೂರು, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷರಾದ ಕೇಶವ ಮಾಸ್ತರ್ ಮಾರ್ನಬೈಲು, ನ್ಯಾಯವಾದಿ ರಾಜಾರಾಮ ನಾಯಕ್, ದೇವಪ್ಪ ಕುಲಾಲ್ ಪಂಜಿಕಲ್ಲು, ಕ್ಷೇತ್ರದ ಟ್ರಸ್ಟಿ ಎಸ್. ಚಂದ್ರಶೇಖರ್, ಪುಷ್ಪರಾಜ ಶೆಟ್ಟಿ ಉಪಸ್ಥಿತರಿದ್ದರು. ಧಾರ್ಮಿಕ ಮುಖಂಡರಾದ ಕೈಯ್ಯೂರು ನಾರಾಯಣ ಭಟ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಿ. ಎಂ. ಕುಲಾಲ್, ಲಯನ್ ಸತ್ಯನಾರಾಯಣ ರಾವ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕ್ಷೇತ್ರದ ಟ್ರಸ್ಟಿ ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಮಚ್ಛೇಂದ್ರ ಸಾಲಿಯಾನ್ ಸ್ವಾಗತಿಸಿ, ದಾಮೋದರ ಬಿ. ಎಂ. ಪ್ರಸ್ತಾವನೆ ಗೈದರು. ಉಮೇಶ್ ಪಿ.ಕೆ. ಧನ್ಯವಾದ ಸಮರ್ಪಿಸಿದರು.

