ಮೂಡುಬಿದರೆ: ಯಕ್ಷಗಾನ ಇತಿಹಾಸದಲ್ಲೇ ಹಿರಿಯ ಕಲಾವಿದನಿಗೆ ಅಭಿಮಾನಿ ಬಳಗವೊಂದು ಕಟ್ಟಿಸಿದ ಭವನದ ಸಮರ್ಪಣೆಗೆ ನೂಯಿ ಗ್ರಾಮದಲ್ಲಿರುವ ಬಲಿಪ ನಾರಾಯಣ ಭಾಗವತರ ನಿವಾಸ ಭಾನುವಾರ ಸಾಕ್ಷಿಯಾಯಿತು.
ಬಲಿಪ ಭಾಗವತ 75 ಅಭಿನಂದನಾ ಸಮಿತಿ ನಿರ್ಮಿಸಿದ 14 ಲಕ್ಷ ರೂ.ವೆಚ್ಚದ ಬಲಿಪ ಅಮೃತ ಭವನವನ್ನು ಮೀನುಗಾರಿಕ ಸಚಿವ ಕೆ.ಅಭಯಚಂದ್ರ ಜೈನ್ ಬಲಿಪರಿಗೆ ಹಸ್ತಾಂತರಿಸುವ ಮೂಲಕ ಸಮರ್ಪಿಸಲಾಯಿತು.


ಬಲಿಪ ನಾರಾಯಣ ಭಾಗವತ, ಪತ್ನಿ ಜಯಲಕ್ಷ್ಮೀ ಅವರನ್ನು ಸಮಿತಿ ವತಿಯಿಂದ ಹಾಗೂ ಉಡುಪಿ ಕಲಾರಂಗದ ವತಿಯಿಂದ ಸನ್ಮಾನಿಸಲಾಯಿತು. ಕಟ್ಟಡದ ವಿನ್ಯಾಸಗಾರ ರಾಧಕೃಷ್ಣ ಬೋರ್ಕರ್ ಅವರನ್ನು ಗೌರವಿಸಲಾಯಿತು.
ಗೌರವಕ್ಕೆ ಉತ್ತರಿಸಿದ ಪ್ರಸಂಗಕರ್ತ ಬಲಿಪ ನಾರಾಯಣ ಭಾಗವತ, ಕಟೀಲು ಮೇಳದ ಯಜಮಾನರುಗಳ ಮೂರು ತಲೆಮಾರುಗಳನ್ನು ಯಕ್ಷಗಾನದ ಅಭಿಮಾನಿಗಳನ್ನು ಪ್ರೇಕ್ಷಕರನ್ನು ಕಂಡಿದ್ದೇನೆ. ಇಂದು ಸಮರ್ಪಿಸಿದ ಭವನ ನನಗಲ್ಲ. ಅದು ಇಡೀ ಯಕ್ಷಗಾನ ಕಲೆಗೆ ಸಂದ ಗೌರವ ಎಂದರು.
ಸಮಿತಿ ಸಂಚಾಲಕ ಡಾ.ಪ್ರಭಾಕರ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿ, ದೊಡ್ಡ ಕಲಾವಿದನೆಂಬ ಹಮ್ಮಿಲ್ಲದ ಮುಗ್ದ ಕಲಾವಿದ ಬಲಿಪರು. ಬಲಿಪ ಶೈಲಿಯನ್ನು ಉಳಿಸಿಕೊಂಡ ಬಂದ ಕೀರ್ತಿ ಇವರಿಗಿದೆ ಎಂದರು.
ಶ್ರೀಕ್ಷೇತ್ರ ಕಟೀಲಿನ ಅರ್ಚಕ ಲಕ್ಷ್ಮೀ ನಾರಾಯಣ ಅಸ್ರಣ್ಣ, ಕಟೀಲು ಯಕ್ಷಗಾನ ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ಕರಾವಳಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್ ಮುಖ್ಯ ಅತಿಥಿಯಾಗಿದ್ದರು. ಬಲಿಪ ನಾರಾಯಣ ಭಾಗವತ ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಅಧ್ಯಕ್ಷ ಶ್ರೀಪತಿ ಭಟ್, ,ಸಂಚಾಲಕ ಶ್ರೀರಾಮ ಭಟ್, ಡಾ.ಶ್ರೀಪತಿ ಭಟ್ ಕಜಂಪಾಡಿ ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ಶ್ರೀಪತಿ ಭಟ್ ಸ್ವಾಗತಿಸಿದರು. ಡಾ. ರಾಧಕೃಷ್ಣ ಭಟ್ ವಂದಿಸಿದರು. ಡಾ. ನಾಗವೇಣಿ ಮಂಚಿ ಕಾರ್ಯಕ್ರಮ ನಿರೂಪಿಸಿದರು.
