ಪುತ್ತೂರು: ರಾಜಕೀಯೇತರವಾಗಿ ಹಿಂದೂಗಳನ್ನು ಸಂಘಟಿಸಿ ಸಂಸ್ಕಾರ ನೀಡುವ ಮೂಲಕ ನೈಜ ಹಿಂದುತ್ವದ ಪ್ರತಿಪಾದನೆಯ ಆಶಯದೊಂದಿಗೆ ಪುತ್ತೂರಿನಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮನಾಥ ಶೆಟ್ಟಿ ಮತ್ತು ಪರಿವಾರ ಸಂಘಟನೆಯ ಲ್ಲಿ ಈ ಹಿಂದೆ ಸಕ್ರಿಯವಾಗಿದ್ದು ಈಗ ಕಾಂಗ್ರೆಸ್ನಲ್ಲಿ ಮುಂದಾಳತ್ವ ವಹಿಸಿರುವ ರವಿಪ್ರಸಾದ ಶೆಟ್ಟಿ ಬಿಎಚ್ಪಿಗೆ ರೂಪು ನೀಡಿದ್ದಾರೆ.

ಹಿಂದುತ್ವದ ಪ್ರತಿಪಾದನೆಯಲ್ಲಿ ಹಿಂದೂ ಧರ್ಮದ ನೈಜ ಆಶಯಗಳಿಗೆ ಧಕ್ಕೆಯಾಗುತ್ತಿದೆ. ಹಿಂದುಗಳನ್ನು ಸಂಘಟಿಸಿ ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಹಿಂದೂಧರ್ಮವನ್ನು ಲೋಕಾ ಸಮಸ್ತಾ ಸುಖೀನೋ ಭವಂತು ಎಂಬ ಘೋಷವಾಕ್ಯದಡಿ ಒಗ್ಗೂಡಿಸಲಾಗುತ್ತದೆ ಎಂದು ಸಂಘಟಕರು ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.
ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮಿಜಿ ಅವರು ಮಾತನಾಡಿ ಹಿಂದೂ ಧರ್ಮವು ಯಾವುಧೇ ವ್ಯಕ್ತಿಯ ವೈಯಕ್ತಿಕ ಸೊತ್ತಲ್ಲ, ಸರ್ವರ ಆಸ್ತಿ. ಬೊಬ್ಬೆ ಹೊಡೆಯುವುದರಿಂದ , ವಿಜ್ರಂಭಣೆಯ ಮೂಲಕ ಧರ್ಮದ ಉದ್ಧಾರ ಸಾಧ್ಯವಿಲ್ಲ, ಬದಲಿಗೆ ಅದು ಅಶಾಂತಿಗೆ ಕಾರಣವಾಗುತ್ತಿದೆ ಎಂದರು. ಆಧ್ಯಾತ್ಮಿಕ ಮತ್ತು ಲೌಖಿಕ ವಿದ್ಯೆಯ ಕೊರತೆಯಿಂದಾಗಿ ಗಲಭೆಗಳು ಸೃಷ್ಟಿಯಾಗುತ್ತಿದ್ದು. ಅದನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ಹಿಂದುತ್ವದ ನೈಜ ವಿಚಾರಧಾರೆಗಳನ್ನು ಸರ್ವರಿಗೂ ತಲುಪಿಸುವ ನಿಟ್ಟಿನಲ್ಲಿ ಎಲ್ಲಾ ಹಿಂದೂಗಳಿಗೆ ಧಾರ್ಮಿಕ ಮತ್ತು ಲೌಖಿಕ ಶಿಕ್ಷಣ ನೀಡುವ ಪ್ರಯತ್ನ ನಡೆಯಬೇಕು ಎಂದವರು ಹೇಳಿದರು.
ಭಾರತೀಯ ಹಿಂದೂ ಪರಿಷತ್ ಸಂಚಾಲಕ ಸತೀಶ್ ನಾೈಕ್ ಸ್ವಾಗತಿಸಿದರು. ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಕಿಲ್ಲೆ ಮೈದಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀ ವಿಷ್ಣು ಸಹಸ್ರನಾಮಯಾಗ ನಡೆಯಿತು.
ಹಿಂದೂ ಸಂಘಟನೆಗಳಿಗೆ ಪ್ರತಿಯಾಗಿ ಕಾಂಗ್ರೆಸ್ ಬ್ರಾಂಡ್ ಎಂಬರ್ಥದಲ್ಲಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಗೆ ಕಾರಣವಾದ ‘ಭಾರತೀಯ ಹಿಂದೂ ಪರಿಷತ್’ ಮಕರ ಸಂಕ್ರಾಂತಿ ದಿನವಾದ ಬುಧವಾರ ಜನ್ಮ ತಳೆದಿದೆ. ವಿಷ್ಣು ಸಹಸ್ರನಾಮ ಯಾಗ,ಯತಿ ದ್ವಯರ ಉಪಸ್ಥಿತಿಯಲ್ಲಿ ವಿಧ್ಯುಕ್ತವಾಗಿ ಚಾಲನೆ ಸಿಕ್ಕಿದೆ, ಆದರೆ, ಸ್ಥಳೀಯರನ್ನು ಹೊರತುಪಡಿಸಿದರೆ ದೊಡ್ಡ ಕಾಂಗ್ರೆಸ್ ನಾಯಕರ್ಯಾರೂ ಭಾಗವಹಿಸಿಲ್ಲ.

