ಮಂಗಳೂರು: ನಿವೃತ್ತ ಎಎಸ್ ಐ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ನಾರಾಯಣ ಮಣಿಯಾಣಿ ಅವರು ತೊಕ್ಕೊಟ್ಟು ಖಾಸಗಿ ಲಾಡ್ಜಿನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ನಿಗೂಢವಾಗಿದೆ.
ತೊಕ್ಕೊಟ್ಟು ವೃಂದಾವನ ಲಾಡ್ಜಿಗೆ ನಿನ್ನೆ ಸಂಜೆ ವೇಳೆ ತೆರಳಿದ್ದ ನಾರಾಯಣ ಮಣಿಯಾಣಿ ರೂಂ ನಂ. 285 ಅನ್ನು ಬಾಡಿಗೆ ಪಡೆದಿದ್ದರು. ಅಲ್ಲಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ಮಂಗಳೂರಿನಿಂದ ಕೊಲ್ಯದ ಮನೆಗೆ ತಮ್ಮ ಚಾಲಕನೊಂದಿಗೆ ಕಾರಿನಲ್ಲಿ ಬಂದಿದ್ದ ಅವರು ತೊಕ್ಕೊಟ್ಟು ಸಮೀಪ ಇಳಿದು, ಚಾಲಕನನ್ನು ರಾತ್ರಿ 10.00 ಗಂಟೆಗೆ ಸಿಗುವಂತೆ ತಿಳಿಸಿದ್ದರು.

ಅದರಂತೆ ರಾತ್ರಿ ಚಾಲಕ ತೊಕ್ಕೊಟ್ಟುವಿಗೆ ಬಂದು ನಾರಾಯಣ ಮಣಿಯಾಣಿ ಅವರಿಗೆ ಕರೆ ಮಾಡಿದರೂ `ನಾಟ್ ರೀಚೆಬಲ್ ‘ ಬರುತಿತ್ತು. ಸ್ಥಳೀಯವಾಗಿ ಹುಡುಕಾಡಿದರೂ ಎಲ್ಲೂ ಸಿಗದೇ ಇದ್ದಾಗ, ವೃಂದಾವನ ಲಾಡ್ಜಿಗೆ ತೆರಳಿರುವ ವಿಚಾರ ಅಲ್ಲಿನ ಸಿಬ್ಬಂದಿಯಿಂದ ಚಾಲಕಗೆ ತಿಳಿದುಬಂದಿದೆ. ಕೂಡಲೇ ಚಾಲಕ ಮಣಿಯಾಣಿ ಅವರ ಮಗನಿಗೂ ವಿಚಾರ ತಿಳಿಸಿದ್ದು, ಹಿರಿ ಮಗ ಬಂದು ಲಾಡ್ಜಿನಲ್ಲಿರುವ ರೂಮಿನ ಬಾಗಿಲು ಬಡಿದರೂ ತೆರಯೆದೇ ಇದ್ದಾಗ ಸಂಶಯಗೊಂಡು ಬಾಗಿಲನ್ನು ಒಡೆದು ನೋಡಿದಾಗ ಫ್ಯಾನಿಗೆ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಹೊಸತಾಗಿ ಖರೀದಿಸಿದ ಕತ್ತರಿ, ರೋಪನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹದ ಬಳಿ ಎರಡು ಖಾಲಿ ಕಾಗದಗಳು ಸಿಕ್ಕಿವೆ. ಆದರೆ ಯಾವುದೇ ಡೆತ್ನೋಟ್ ಕಂಡುಬಂದಿಲ್ಲ. ಇದರಿಂದ ಸಾವಿನ ಕಾರಣ ನಿಗೂಢವಾಗಿಯೇ ಉಳಿದಿದೆ. ವಾರದಿಂದ ಖಿನ್ನತೆಗೆ ಒಳಗಾಗಿದ್ದರು. ಚಿಟ್ ಫಂಡ್, ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ನಾರಾಯಣ ಮಣಿಯಾಣಿ ಟೂರಿಸ್ಟ್ ವಾಹನಗಳನ್ನು ಇಟ್ಟುಕೊಂಡು, ತಮ್ಮನ್ನು ಹಲವು ವ್ಯವಹಾರಗಳಲ್ಲೂ ತೊಡಗಿಸಿಕೊಂಡಿದ್ದರು. ಕಳೆದ ಒಂದು ವಾರದಿಂದ ಖಿನ್ನತೆಯಿಂದ ಇದ್ದ ಅವರು ಖಿನ್ನತೆಯ ಕಾರಣವನ್ನು ಯಾರಲ್ಲಿಯೂ ತಿಳಿಸಿರಲಿಲ್ಲ.
80 ರ ದಶಕದಲ್ಲಿ ಜಿಲ್ಲೆಯ ಜನರನ್ನು ತನ್ನ ಕೃತ್ಯಗಳಿಂದ ಭಯಭೀತಗೊಳಿಸಿದ್ದ ಹಲವು ವಿಕೃತ ಕೊಲೆ, ದರೋಡೆ ಪ್ರಕರಣದ ಆರೋಪಿ ರಿಪ್ಪರ್ ಚಂದ್ರನ್ ಪತ್ತೆಯಲ್ಲಿ, ಬಹುದೊಡ್ಡ ಗೂಡುಜಾಲು ದರೋಡೆ ಪ್ರಕರಣ ಸಹಿತ ಪೊಲೀಸ್ ಸೇವೆಯಲ್ಲಿ 800ಕ್ಕೂ ಅಧಿಕ ಅಪರಾಧ ಪ್ರಕರಣಗಳ ಪತ್ತೆ. 20 ಕೋ. ರೂ.ಗಳಿಗೂ ಹೆಚ್ಚಿನ ಮೌಲ್ಯದ ಸೊತ್ತುಗಳ ವಶ,ಹಲವು ಶಸ್ತ್ರಾಸ್ತ್ರಗಳು ಹಾಗೂ ದೇಶದ ಆಥರ್ಿಕತೆಯನ್ನು ಬುಡಮೇಲುಗೊಳಿಸುವ ಹಲವು ಖೋಟಾ ನೋಟು(30ಲಕ್ಷರೂ.ಮುಖಬೆಲೆ ಇರುವ ಖೋಟಾ ನೋಟುಗಳು ಮತ್ತು 5 ಖೋಟಾ ನೋಟು ತಯಾರಿಸುವ ಯಂತ್ರಗಳು) ಪ್ರಕರಣಗಳನ್ನು ಬಯಲಿಗೆಳೆಯುವ ಮೂಲಕ ಮೇಲಾಧಿಕಾರಿಗಳಿಗೆ ಸಾಥ್ ನೀಡಿದ್ದರು. ಮೂರು ತಿಂಗಳ ಹಿಂದೆಯಷ್ಟೇ ಸೆಪ್ಟಂಬರ್ ತಿಂಗಳಿನಲ್ಲಿ ಕುರಲ್ ಮೀಡಿಯಾ ಪ್ರೈವೇಟ್ ಸಂಸ್ಥೆಯ ಡೈಲಿ 10 ನ್ಯೂಸ್ ಚಾನೆಲ್ ಆರಂಭಿಸಿ ಮಾಧ್ಯಮ ಲೋಕದಲ್ಲೂ ಕಾಲಿರಿಸಿದ್ದರು
