ಪಡುಬಿದ್ರಿ: ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಗದಗ ಮೂಲದ ಯುವತಿಯರಿಬ್ಬರು ಕೆಲದಿನಗಳ ನಾಪತ್ತೆಯಾಗಿದ್ದು ಅವರು ತಮ್ಮ ಪ್ರೇಮಿಗಳ ಜೊತೆ ಪರಾರಿಯಾಗಿರಬೇಕೆಂದು ಶಂಕೆ ವ್ಯಕ್ತಪಡಿಸಲಾಗಿದೆ.
ಕಾಣೆಯಾದ ಯುವತಿಯರನ್ನು ಗದಗ ನಿವಾಸಿ ಮಾನಪ್ಪ ಬಡಿಗೇರ ಎಂಬವರ ಮಗಳು ದ್ರಾಕ್ಷಾಯಿಣಿ(16) ಮತ್ತು ಶಂಕರಮ್ಮ ಎಂಬವರ ಮಗಳು ಕಾವೇರಿ(16) ಎಂದು ಹೆಸರಿಸಲಾಗಿದೆ. ಇವರು ಹೆತ್ತವರ ಜೊತೆ ಪಡುಬಿದ್ರಿಯ ಲೇಬರಿ ಕಾಲನಿಯಲ್ಲಿ ವಾಸವಾಗಿದ್ದರು. ಕಳೆದ ನವೆಂಬರ್ ಮೂವತ್ತರಂದು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯ ಕಾಡಿನಲ್ಲಿ ನಡೆದ ಸಂತೆಗೆ ದ್ರಾಕ್ಷಾಯಿಣಿಯ ತಾಯಿಯ ಜೊತೆ ಆಗಮಿಸಿದ್ದ ಇಬ್ಬರು ಯುವತಿಯರು ನಂತರ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಇವರನ್ನು ಸಂಬಂಧಿಕರ ಮನೆಯಲ್ಲಿ ಹಾಗೂ ಇತರೆಲ್ಲಾ ಕಡೆ ಹುಡುಕಾಡಿದಾಗ ನೆರೆಮನೆಯ ರುದ್ರಪ್ಪ ಮತ್ತು ಬಸವರಾಜ್ ಕೂಡಾ ನಾಪತ್ತೆಯಾಗಿರುವುದು ತಿಳಿದುಬಂದಿದೆ. ಹಾಗಾಗಿ ಹುಡುಗಿಯರ ಮನೆಯವರು ತಮ್ಮ ಮಕ್ಕಳು ಆ ಯುವಕರ ಜೊತೆ ತೆರಳಿರಬಹುದು ಎಂಬ ಸಂಶಯ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮೂಲ್ಕಿ ಪೊಲೀಸ್ ಠಾಣೆ ಅಥವಾ ಮಂಗಳೂರು ಕಂಟ್ರೋಲ್ ರೂಂ ಸಂಪರ್ಕಿಸಬೇಕೆಂದು ಸೂಚಿಸಲಾಗಿದೆ.


