ಉಳಾಯಿಬೆಟ್ಟು ಕಿರು ಸೇತುವೆಯಲ್ಲಿ ವಾಹನ ಸಂಚಾರ ಆರಂಭ
ಗುರುಪುರ : ಉಳಾಯಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳಾಯಿಬೆಟ್ಟು ಸಾಲೆ ಮೇಲ್ಮೆನೆ ಎಂಬಲ್ಲಿ ಫಲ್ಗುಣಿ ನದಿಯ ತೊರೆಗೆ ಅಡ್ಡಲಾಗಿ ಸುಮಾರು ೫ ಕೋ. ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಿರು ಸೇತುವೆ ಲೋಕಾರ್ಪಣೆ ವಿಳಂಬದಿಂದ ಉಳಾಯಿಬೆಟ್ಟು-ಪೆರ್ಮಂಕಿ ಮೂಲಕ ಮಂಗಳೂರಿಗೆ ಅಥವಾ ಮಲ್ಲೂರು-ಬೆಂಜನಪದವು ಆಗಿ ಬಿ. ಸಿ ರೋಡಿನತ್ತ ಸಾಗುವ ಪ್ರಯಾಣಿಕರು ಮತ್ತು ವಾಹನಿಗರು ನಾನಾ ರೀತಿಯ ತೊಂದರೆ ಅನುಭವಿಸುವಂತಾಗಿದೆ.
ಕೆಸರಲ್ಲಿ ಹೂತ ವಾಹನಗಳು :

ಹಳೆ ಸೇತುವೆ ನೆಲಸಮಗೊಳಿಸಿದ ಬಳಿಕ ಉಳಾಯಿಬೆಟ್ಟಿನಲ್ಲಿ ಗದ್ದೆಗಳ ಮೂಲಕ ನಿರ್ಮಿಸಲಾದ ತಾತ್ಕಾಲಿಕ ಮಣ್ಣಿನ ರಸ್ತೆಯು ನಿನ್ನೆ-ಮೊನ್ನೆ ಸುರಿದ ಮಳೆಗೆ ಹೇಳ ಹೆಸರಿಲ್ಲದಂತಾಗಿದೆ. ಕೆಸರು ತುಂಬಿದ ಈ ರಸ್ತೆಯಲ್ಲಿ ಮುಂದೆ ಸಾಗಲು ಪ್ರಯತ್ನಿಸಿದ ಪೊಲೀಸ್ ಕಾರು ಸಹಿತ ಹಲವು ರಿಕ್ಷಾ-ಟೆಂಪೋಗಳು ಕೆಸರಲ್ಲಿ ಹೂತು ಹೋಗಿವೆ.
ಮಣ್ಣಿನ ರಸ್ತೆ ಬಂದ್ :

ಜುಲೈ ಪ್ರಥಮ ವಾರದಲ್ಲಿ ಕಿರು ಸೇತುವೆ ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ೨೦೨೫ರಲ್ಲಿ ಸೇತುವೆ ಕಾಮಗಾರಿ ಆರಂಭಗೊAಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಅಂದರೆ, ಗಡುವು ಮೀರಿ ಮುಂದುವರಿದಿದೆ. ಹಾಗಾಗಿ ಮಳೆಗಾಲಕ್ಕೆ ಮುಂಚೆ ಸೇತುವೆ ಲೋಕಾರ್ಪಣೆಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

೨೦೨೪ರಲ್ಲಿ ದ.ಕ. ಜಿಲ್ಲಾಧಿಕಾರಿಯವರ ಆದೇಶದಂತೆ ಜಿಲ್ಲೆಯ ಶಿಥಿಲಗೊಂಡಿದೆ ಎನ್ನಲಾದ ಪರಾರಿ-ಉಳಾಯಿಬೆಟ್ಟು, ಅಡ್ಡೂರು-ಪೊಳಲಿ ಸೇತುವೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಪೊಳಲಿ ಸೇತುವೆಯಲ್ಲಿ ಒಂದಷ್ಟು ಸಮಯ ಪ್ಯಾಚ್ವರ್ಕ್ ಕಾಮಗಾರಿ ನಡೆದ ಬಳಿಕ ಸೇತುವೆ ಮುಕ್ತಗೊಂಡಿದ್ದರೆ, ಉಳಾಯಿಬೆಟ್ಟು-ಪರಾರಿ ಕಿರು ಸೇತುವೆಯಲ್ಲಿ ಯಾವುದೇ ಕಾಮಗಾರಿ ನಡೆಯದೆ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಇದಾದ ಕೆಲವು ಸಮಯದ ಮೇಲೆ ಇಲ್ಲಿ ಲೋಕೋಪಯೋಗಿ ಇಲಾಖೆಯು(ಪಿಡಬ್ಲ್ಯೂಡಿ), ಭಂಡರ್ಕರ್ ಕನ್ಸ್ಟçಕ್ಷನ್ ಕಂಪೆನಿಯ ಮೂಲಕ ಹೊಸ ಕಿರು ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿತ್ತು. ಪ್ರಸಕ್ತ ಮಳೆಗಾಲಕ್ಕೆ ಮುಂಚೆ ಸೇತುವೆ ನಿರ್ಮಾಣವಾಗಬೇಕಿತ್ತು.

ಸೇತುವೆ ನಿರ್ಮಾಣದ ಸಂದರ್ಭದಲ್ಲಿ, ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಸ್ಥಳೀಯ ಗದ್ದೆ ಪ್ರದೇಶದಲ್ಲಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸಲಾಗಿತ್ತು. ಇದರಲ್ಲಿ ಸರ್ಕಾರಿ ಬಸ್ಗಳ ಸಹಿತ ಇತರ ವಾಹನಗಳು ಸಂಚರಿಸುತ್ತಿದ್ದವು. ಇತ್ತೀಚೆಗೆ ಸುರಿದ ಮಳೆಗೆ ಮಣ್ಣಿನ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದರೆ, ಹೊಸ ಸೇತುವೆಯ ಎರಡೂ ಕಡೆಯಲ್ಲಿ ಕೆಸರು ಮಣ್ಣು ತುಂಬಿ ಹೋಗಿತ್ತು. ಪರಿಣಾಮ ಎರಡೂ ಕಡೆಯಲ್ಲಿ ವಾಹನ ಸಂಚಾರ ಭಾಗಶಃ ಸ್ಥಗಿತಗೊಂಡಿತ್ತು. ದ್ವಿಚಕ್ರ ವಾಹನಿಗರು ಹರಸಾಹಸಪಟ್ಟು ಹೊಸ ಕಿರು ಸೇತುವೆಯ ಮೇಲೆಯೇ ಸಂಚರಿಸುತ್ತಿದ್ದರು.
ಪೆರ್ಮಂಕಿ-ಉಳಾಯಿಬೆಟ್ಟು-ಮಂಗಳೂರು ಭಾಗದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದರೂ, ಲೋಕೋಪಯೋಗಿ ಇಲಾಖೆ ಮಾತ್ರ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದೆ, ಸೇತುವೆಯ ಲೋಕಾರ್ಪಣೆಗೆ ದಿನಾಂಕ ನಿಗದಿಪಡಿಸುವ ಗೋಜಿನಲ್ಲಿದೆ ಎಂದು ಸ್ಥಳೀಯರು ದೂರಿದ್ದಾರೆ. ಅಚ್ಚರಿಯೆಂದರೆ ಜೂ. ೨೫ ಮತ್ತು ೨೬ರಂದು ಧಾರಾಕಾರ ಮಳೆ ಸುರಿಯುತ್ತಲೇ ಕೆಲವು ವಾಹನಗಳು ಕೆಸರಲ್ಲಿ ಹೂತು ಹೋಗಿವೆ. ತಕ್ಷಣ ಎಚ್ಚೆತ್ತುಕೊಂಡ ಪಿಡಬ್ಲ್ಯೂಡಿ, ಹೊಸ ಕಿರು ಸೇತುವೆಯ ಎರಡೂ ಪಾರ್ಶ್ವದಲ್ಲಿ ಜಲ್ಲಿಕಲ್ಲು ತುಂಬಿಸಿ ವಾಹನ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆಗೆ ಸೂಚಿಸಿದೆ ಎನ್ನಲಾಗಿದೆ. ಶೇ. ೧೦ರಷ್ಟು ಕಾಮಗಾರಿ ಬಾಕಿ ಉಳಿದಿರುವ ಕಿರು ಸೇತುವೆಯ ಎರಡೂ ಕಡೆಯಲ್ಲಿ ಕಾಂಕ್ರೀಟೀಕರಣದ ಬದಲಿಗೆ ಜಲ್ಲಿಕಲ್ಲು ತುಂಬಿಸಲಾಗಿದ್ದು, ಜೂ. ೧೬ರಿಂದ ಸರ್ಕಾರಿ ಬಸ್ ಸಹಿತ ಇತರ ವಾಹನ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಧಾರಾಕಾರ ಮಳೆಯಾದರೆ ಈ ವ್ಯವಸ್ಥೆ ಸಾಕಷ್ಟು ಅಪಾಯಕಾರಿಯಾಗಿದೆ
