ನವದೆಹಲಿ: ಹೆಚ್ಚಿನ ಭಾರತೀಯರ ಇಚ್ಛೆಯಂತೆ ಬಾಬ್ರಿ ಮಸೀದಿ ಇರುವ ಸ್ಥಳದಲ್ಲೇ ರಾಮ ಮಂದಿರವನ್ನು ನಿರ್ಮಿಸಬೇಕು ಎನ್ನುವುದರ ಮೂಲಕ ಉತ್ತರಪ್ರದೇಶದ ರಾಜ್ಯಪಾಲರಾದ ರಾಮಾ ನಾಯ್ಕ ಹೇಳಿರುವುದು ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗಿದೆ.
ಅಯೋಧ್ಯೆಯ ಫೈಜಾಬಾದ್ನಲ್ಲಿ ಅವಧ್ ವಿಶ್ವವಿದ್ಯಾಲಯದ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದ ಅವರು “ಸಾಧ್ಯವಾದಷ್ಟು ಬೇಗ ರಾಮ ಮಂದಿರವನ್ನು ನಿರ್ಮಿಸಬೇಕು. ಇದು ಹೆಚ್ಚಿನ ಭಾರತೀಯರ ಬಹುದಿನಗಳ ಬಯಕೆ. ಇದನ್ನು ಪೂರೈಸಲೇಬೇಕು” ಎಂದು ಒತ್ತಾಯಿಸಿದರು.
ಕೊನೆಯ ತಿಂಗಳು, ವಿಎಚ್ಪಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅಯೋಧ್ಯೆಗೆ ಭೇಟಿ ನೀಡಿದ್ದ, ನಾಯ್ಕ “ಈ ವಿವಾದಾತ್ಮಕ ಸಮಸ್ಯೆ ಐದು ವರ್ಷಗಳೊಳಗೆ ಪರಿಹಾರ ಕಾಣಲಿದೆ. ಇದನ್ನು ಶಾಂತಿಯುತವಾಗಿ ನಿರ್ವಹಿಸಲು ಪ್ರಧಾನಿ ನರೇಂದ್ರ ಮೋದಿ ಕಾರ್ಯತತ್ಪರರಾಗಿದ್ದಾರೆ” ಎಂದು ಹೇಳಿದ್ದರು.
ಬಿಜೆಪಿಯ ಮಾಜಿ ಸಂಸದರಾಗಿದ್ದ ರಾಮಾ ನಾಯ್ಕ ಕಳೆದ ಜುಲೈ ತಿಂಗಳಲ್ಲಿ ಉತ್ತರ ಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ರಾಮಾ ನಾಯ್ಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಾಬ್ರಿ ಮಸೀದಿ ವ್ಯಾಜ್ಯದ ಮುಖ್ಯ ಹೋರಾಟಗಾರ ಹಸೀಮ್ ಅನ್ಸಾರಿ “ಈ ಕುರಿತು ಸಂಧಾನ ಮಾಡಿಕೊಳ್ಳಲು ನಾವು ತಯಾರಿದ್ದೇವೆ. ಆದರೆ ಮಾತುಕತೆಗೆ ಮೊದಲು ಬಾಬ್ರಿ ಮಸೀದಿ ಕೆಡವಿದ ಪ್ರಕರಣದಲ್ಲಿ ಭಾಗಿಯಾದವರಿಗೆ ಶಿಕ್ಷೆ ನೀಡುವ ಕುರಿತು ಸರಕಾರ ಖಚಿತ ಪಡಿಸಬೇಕು” ಎಂದು ಈ ಮೊದಲೇ ಹೇಳಿದ್ದೇನೆ ಎಂದಿದ್ದಾರೆ.


