ಕೈಕಂಬ : ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸುತ್ತಿದ್ದ ಖಾಸಗಿ ಬಸ್ಸೊಂದು ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ದುರ್ಘಟನೆ ಗುರುಪುರಕ್ಕೆ ಹತ್ತಿರದ ಅಣೆಬಳಿಯಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.

ಮೃತಟಪಟ್ಟ ಬೈಕ್ ಸವಾರ ಸಂತೋಷ್ ಪೂಜಾರಿ(೩೪) ಕರಿಯಂಗಳ ಗ್ರಾಮದ ನಿವಾಸಿಯಾಗಿದ್ದು, ಗುರುಪುರ ವ್ಯವಸಾಯ ಸಹಕಾರಿ ಬ್ಯಾಂಕ್‌ನ(ನಿ) ವಾಮಂಜೂರು ಶಾಖೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗಿಯಾಗಿದ್ದ. ತನ್ನ ಬೈಕ್‌ನಲ್ಲಿ ಮನೆಯಿಂದ ವಾಮಂಜೂರಿಗೆ ಕೆಲಸಕ್ಕೆ ಹೋಗುತ್ತಿದ್ದಾಗ ಗುರುಪುರದ ಬಳಿ ಮಂಗಳೂರಿನತ್ತ ಸಾಗುತ್ತಿದ್ದ ಬಸ್, ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.

ಬಸ್‌ನಡಿಗೆ ಬೈಕ್ ಬಿದ್ದಿದ್ದು, ಸವಾರ ರಸ್ತೆಯಿಂದ ದೂರ ಎಸೆಯಲ್ಪಟ್ಟಿದ್ದಾನೆ. ಗಂಭೀರ ಗಾಯಗೊಂಡಿದ್ದ ಆತನನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದ ಬಳಿಕ ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಸಾವನ್ನಪ್ಪಿದ್ದಾರೆ.

ಕರಿಯಂಗಳದ ದಿವಂಗತ ಅಣ್ಣಿ ಪೂಜಾರಿಯವರ ಮೂವರು ಮಕ್ಕಳಲ್ಲಿ ಹಿರಿಯವನಾದ ಈತ, ವಿವಾಹಿತನಾಗಿದ್ದು ಪತ್ನಿ ಮತ್ತು ಚಿಕ್ಕ ಮಗು ಇದೆ. ಕೆಲವು ಸಮಯದ ಹಿಂದೆಯಷ್ಟೇ ಗುರುಪುರ ವ್ಯವಸಾಯ ಸಹಕಾರಿ ಬ್ಯಾಂಕ್ ಕೆಲಸಕ್ಕೆ ಸೇರಿದ್ದ. ಅಚ್ಚರಿಯ ಸಂಗತಿಯೆಂದರೆ, ಗುರುಪುರ ವ್ಯವಸಾಯ ಸಹಕಾರಿ ಬ್ಯಾಂಕ್‌ನ ಪ್ರಧಾನ ಕಚೇರಿಯ ಎದುರಿರುವ ಹಂಪ್ಸ್ ಬಳಿಯೇ ಈ ಅಪಘಾತ ಸಂಭವಿಸಿದೆ.

ಹಂಪ್ಸ್ನಲ್ಲಿ ನಿಧಾನಗತಿಯಲ್ಲಿ ಚಲಿಸುತ್ತಿದ್ದಾಗ ಬೈಕ್‌ಗೆ ಹಿಂದಿನಿಂದ ಅತಿ ವೇಗವಾಗಿ ಬಂದ ಬಸ್ ಡಿಕ್ಕಿಯಾಗಿದೆ. ನಿಯಂತ್ರಣ ತಪ್ಪಿದ ಬಸ್, ಶಾಲಾ ಬಸ್‌ಗೂ ಡಿಕ್ಕಿ ಹೊಡೆದಿದೆ.

ಅಪಘಾತ ಸಂಭವಿಸಿದ ಬಳಿಕ ರಾ.ಹೆ. ೧೬೯ ಗುರುಪುರ ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಭಾರೀ ಜನರೂ ಸೇರಿದ್ದರು. ಹೆದ್ದಾರಿ ವಾಹನ ಸಂಚಾರ ಸುಗಮಗೊಳಿಸಿದ ಬಜ್ಪೆ ಪೊಲೀಸರು, ಪ್ರಕರಣ ದಾಖಲಿಸಿ ಬಸ್ ಹಾಗೂ ಬೈಕ್‌ನ್ನು ಠಾಣೆಗೆ ಕೊಂಡೊಯ್ದಿದ್ದಾರೆ.

By suddi9

Leave a Reply

Your email address will not be published. Required fields are marked *