ಮುಂಬಯಿ : ಊರಿನ ಶಾಲೆ ಆ ಊರಿನ ಪ್ರಗತಿಯ ಮಣಿ ಮುಕುಟ. ನಮ್ಮೂರ ಶಾಲೆ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಆದರೆ ಅದರ ಆರೋಗ್ಯ ಅಷ್ಟಾಗಿ ಚೆನ್ನಾಗಿಲ್ಲ. ಶಿಥಿಲಾವಸ್ಥೆಯಲ್ಲಿ ದೀನವಾಗಿ ಕಣ್ಣು ಬಿಟ್ಟು ನಮ್ಮೆಡೆಗೇ ಇಣುಕುತ್ತಿರುವ ನಮ್ಮ ಕರುಳ ಕುಡಿಯಂತಹ ಆ ಶಾಲೆಯನ್ನು ನೋಡುವಾಗ ಕರುಳು ಕಿತ್ತು ಬರುತ್ತದೆ. ೫೦ ವರ್ಷದ ಹೊಸ್ತಿಲಲ್ಲಿರುವ ನಮ್ಮೂರ ಯುವಕ ಮಂಡಲದ ಯುವ ಮನಸುಗಳು ರಮೇಶ್ ಎಸ್.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಮ್ಮೂರ ಮಹಾವೀರ ಹಿರಿಯ ಪ್ರಾಥಮಿಕ ಶಾಲೆ ಪಡು ಮಾರ್ನಾಡು, ಅಮಣೊಟ್ಟು, ಬಾಕ್ಯಾರು ಶಾಲೆಯನ್ನು ನವೀಕರಿಸುವ ಜವಾಬ್ದಾರಿಯನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ ಎಂದು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮೋಹನ್ ಮಾರ್ನಾಡ್ ತಿಳಿಸಿದರು.
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ ನಿಮಿತ್ತ ತಮ್ಮೂರ ಮಹಾವೀರ ಶಾಲಾ ನವೀಕರಣಕ್ಕೆ ಸಜ್ಜಾಗಿದ್ದು ಆ ನಿಮಿತ್ತ ಮುಂಬಯಿನಲ್ಲಿನ ಸಭೆಯನ್ನುದ್ದೇಶಿಸಿ ಮೋಹನ್ ಮಾರ್ನಾಡ್ ತಿಳಿಸಿದರು.
ಇದೇ ಶಾಲೆಯಲ್ಲಿ ಆಡಾಡಿ ಓಡಾಡಿ ವಿದ್ಯೆ ಬುದ್ಧಿಯನ್ನುಂಡ ಅದೆಷ್ಟೋ ಶ್ರೀಮಂತ ಮನಸುಗಳು ಹಾಗೂ ಊರ ಶಾಲೆಯ ಮಹತ್ವವನ್ನರಿತ ಇತರ ಸಮಾನ ಮನಸ್ಕರು ವಿಶ್ವದೆಲ್ಲೆಡೆ ಹರಡಿರುವ ನಿಮ್ಮೆಲ್ಲರ ಸಹಕಾರ ಸಹಾಯ ಯಾಚಿಸುವ ಘನ ಕಾರ್ಯವನ್ನು ಹೊರನಾಡಿನಲ್ಲಿರುವ ನಮ್ಮ ಹೆಗಲಿಗೇರಿಸಿಕೊಂಡಿದ್ದೇವೆ ಆದ್ದರಿಂದ ಶಿಕ್ಷಣಪ್ರೇಮಿಗಳು, ಹಳೆ ವಿದ್ಯಾಥಿüðಗಳು ತನು ಮನ ಧನದ ಸಹಕಾರದೊಂದಿಗೆ ಅಂದಾಜು ೧೦ ಲಕ್ಷ ವೆಚ್ಚದ ಶಾಲಾ ದುರಸ್ತಿ ಕಾರ್ಯದಲ್ಲಿ ನಮ್ಮ ಹೆಗಲಿಗೆ ಹೆಗಲಾಗಿ ನಿಲ್ಲಬೇಕೆಂದು ಮೋಹನ್ ಮಾರ್ನಾಡ್ ಈ ಮೂಲಕ ಬಿನ್ನವಿಸಿಕೊಂಡಿದ್ದಾರೆ.
ಇದೇ ಮೇ.೨೨ರಂದು ಭಾನುವಾರ ನಡೆಯಲಿರುವ ಸ್ವರ್ಣ ಮಹೋತ್ಸವದ ಸಮಾರಂಭದಲ್ಲೂ ಎಲ್ಲರೂ ಉಪಸ್ಥಿತರಿರಬೇಕಾಗಿ ಯುವಕ ಮಂಡಲ ಇದರ ಕೋಶಾಧಿಕಾರಿ ದೀಪಕ್ ಎಸ್.ಕುಡ್ದ ಶೆಟ್ಟಿ, ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ರಾಘು ಸಿ.ಪೂಜಾರಿ, ಅಧ್ಯಕ್ಷ ಮೋಹನ್ ಮಾರ್ನಾಡ್ (೯೮೨೧೦೫೪೪ ೨೬) ಈ ಮೂಲಕ ವಿನಂತಿಸಿದ್ದಾರೆ.
ಈ ಶಾಲೆಯ ಹಳೆ ವಿದ್ಯಾರ್ಥಿಗಳು ತಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುವರೆಂಬ ಭರವಸೆಯಿಂದ ವಿನಂತಿಸಲಾಗಿದೆ. ಶಿಲಾ ಫಲಕದಲ್ಲಿ ಬರೆಯಬೇಕಾದ ಹೆಸರನ್ನೂ ನಮೂದಿಸಿ. ಶಾಲಾ ಹಿತೈಷಿಗಳೂ ಸಾಧ್ಯವಾಗಿಸಿ ತಮ್ಮ ಧನ ಸಹಾಯವನ್ನು ಯುವಕ ಮಂಡಲ (ರಿ.) ಪಡುಮರ್ನಾಡ್ ಖಾತೆ ಸಂಖ್ಯೆ 520101043908191, IFSC Code: UBIN0901679, Union Bank of India, Alangar Moodbidri ಇದಕ್ಕೆ ಕಳುಹಿಸಿ ಸಹಕರಿಸುವಂತೆ ಮಾರ್ನಾಡು ಪಣರೊಟ್ಟು ಮಾರ್ನಾಡ್ ಬ್ರದರ್ಸ್ ಹಾಗೂ ಮುಂಬಯಿ ಸಂಚಾಲಕ ವಾಸುದೇವ ಶೆಟ್ಟಿ ಮಾರ್ನಾಡ್ (೯೧ ೯೯೨೦೫ ೭೨೭೧೩) ಹಾಗೂ ಸುರೇಂದ್ರ ಶೆಟ್ಟಿ ಮಾರ್ನಾಡ್ ಮತ್ತಿತರ ಪದಾಧಿಕಾರಿಗಳು, ಸದಸ್ಯರು ಈ ಮೂಲಕ ವಿನಂತಿಸಿದ್ದಾರೆ.
