ಮಂಗಳೂರು: ಮಹಿಳಾ ಉದ್ಯಮ ಶೀಲತಾ ಕಾರ್ಯಕ್ರಮವನ್ನು, ಸ್ಪಂದನ ಸಮಾಜ ಸೇವಾ ಸಂಸ್ಥೆ, ಜೆಪ್ಪು, ಮಂಗಳೂರು ಇಲ್ಲಿ ಬೆಳಿಗ್ಗೆ ೧೦.೩೦ ಗಂಟೆಗೆ ಹಮ್ಮಿಕೊಳ್ಳಲಾಯಿತು. ಎಫ್.ಟಿ.ಆರ್.ಎಸ್ ಸಂಸ್ಥೆ ಬೆಂಗಳೂರು ಇದರ ನಿರ್ದೇಶಕರಾದ ಶ್ರೀ ಫೆಲಿಕ್ಸ್ ಡಿಸೋಜಾರವರು ತಮ್ಮ ಪ್ರಾಸ್ತವಿಕ ಭಾಷಣದಲ್ಲಿ ಮಹಿಳೆಯರು ಸ್ವ-ಉದ್ಯಮವನ್ನು ನಡೆಸಲು ಪ್ರೇರೆಪಿಸಿದರು. ಸುಮಾರು ೨೦೮ ಮಹಿಳೆಯರಿಗೆ ೩ ದಿನದ ಉದ್ಯಮ ಶೀಲತಾ ತರಬೇತಿಯನ್ನು ಕೊಟ್ಟು ರೂಪಾಯಿ ೧೨,೦೦೦/- ಸಹಾಯಧನವನ್ನು ನೀಡಲಾಗಿತ್ತು.
ಸಹೋದಯ, ಸ್ಪಂದನ, ಧರ್ಮ ಜ್ಯೋತಿ ಹಾಗೂ ಜೀವನ್ಧಾರಾ ಸಂಸ್ಥೆಗಳು ಮಂಗಳೂರು ನಗರದಲ್ಲಿ ನಡೆಸುವ ಸ್ವಸಹಾಯ ಸಂಘಗಳ ಮಹಿಳೆಯರು ಇದರ ಪ್ರಯೋಜನವನ್ನು ಪಡೆದರು. ಎಫ್.ಟಿ.ಆರ್.ಎಸ್ ಸಂಸ್ಥೆ ಬೆಂಗಳೂರು ಪ್ರಸ್ತುತ ವರ್ಷದಲ್ಲಿ ಕರ್ನಾಟಕದ ವಿವಿದ ನಗರಗಳಲ್ಲಿ ೧,೪೦೦ ಮಹಿಳೆಯರಿಗೆ ತರಬೇತಿ ಕೊಟ್ಟು ಸಹಾಯ ಧನವನ್ನು ನೀಡಿದೆ.
ಎಫ್.ಟಿ.ಆರ್.ಎಸ್ ಸಂಸ್ಥೆಯ ಮಂಗಳೂರು ಕಾರ್ಯಕ್ರಮದ ಸಂಯೋಜಕಿ ಶ್ರೀಮತಿ ಕ್ಲಾರಾ ಡಿಕುನ್ಹಾರವರು ವಿವಿದ ಕಡೆ ನಡೆಸಿದ ಉದ್ಯಮಶೀಲತಾ ತರಬೇತಿಯ ವರದಿಯನ್ನು ನೀಡಿದರು. ಧರ್ಮ ಜ್ಯೋತಿ ಸಂಸ್ಥೆಯ ಸಿಬ್ಬಂದಿ ಶ್ರೀ ಸೂರ್ಯನಾರಾಯಣ, ಸೆಲೆಸ್ತಿನ್ ಕ್ರಾಸ್ತಾ, ಅನಿತಾ ಕುಲಾಸೊ, ಶೋಬಾ ಹಾಗೂ ಹರಿಣಿಯವರು ಉದ್ಯಮಶೀಲತಾ ತರಬೇತಿಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.
ಎಫ್.ಟಿ.ಆರ್.ಎಸ್ ಸಂಸ್ಥೆಯ ಯೋಜನಾಧಿಕಾರಿಯಾದ ಶ್ರೀ ಜಿಮ್ಮಿ ಮ್ಯಾಥ್ಯುರವರು ಸಂಸ್ಥೆಗೆ ಧನಸಹಾಯ ಮಾಡಿದ ಸಿಟಿ ಬ್ಯಾಂಕ್ ಹಾಗೂ ಚೈಲ್ಡ್ ಫಂಡ್ ಸಂಸ್ಥೆಗಳಿಗೆ ಧನ್ಯವಾದವಿತ್ತು ಮಹಿಳೆಯರು ತಮಗೆ ದೊರೆತ ತರಬೇತಿಯ ಸಂಪೂರ್ಣ ಪ್ರಯೋಜನ ಪಡೆಯಲು ಮಹಿಳೆಯರನ್ನು ಪ್ರೇರೇಪಿಸಿದರು. ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತ್ಯದ ಮುಖ್ಯಸ್ಥೆ ಭಗಿನಿ ಸಿಸಿಲಿಯಾ ಮೆಂಡೊನ್ಸಾರವರು ಧನ ಸಹಾಯ ಮಾಡಿದ ಸಂಸ್ಥೆಯನ್ನು ಶ್ಲಾಘಿಸಿದರು.
ಮಾಜಿ ಮೇಯರ್ ಹಾಗೂ ಸಮಾಜ ಸೇವಕಿ ಶ್ರೀಮತಿ ಜೆಸಿಂತಾ ಆಲ್ಫೆçಡ್ರವರು ಮಹಿಳೆಯರು ಸ್ವ-ಉದ್ಯೋಗ ಕೈಗೊಂಡು ಸ್ವಾವಲಂಬಿಗಳಾಗಿ ಜೀವಿಸಲು ಕರೆ ನೀಡಿದರು. ಈಕೊಲಿಂಕ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಥೋಮಸ್ ಸ್ಕಾರಿಯರವರು ಮಂಗಳೂರಿನ ಯಶಸ್ವಿ ಉದ್ಯಮಿಗಳ ಬಗ್ಗೆ ವಿವರಣೆ ಕೊಟ್ಟು ಮಹಿಳೆಯರೂ ಕೂಡ ಸಾಧನೆ ಮಾಡಬಹುದು ಎಂದು ಉತ್ತೇಜಿಸಿದರು.
ಇನ್ಫೆಂಟ್ ಮೇರಿ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸಿಲ್ವಿಯಾ ಫೆರ್ನಾಂಡಿಸ್ರವರು ಮಹಿಳೆಯರ ಸ್ವಾವಲಂಭಿ ಬದುಕಿನತ್ತ ಮುನ್ನಡೆಯಲು ಕರೆ ನೀಡಿದರು. ೧೨,೦೦೦/- ರೂಪಾಯಿಯ ಚೆಕ್ಕನ್ನು ಮಹಿಳೆಯರಿಗೆ ಸಾಂಕೇತಿಕ ರೂಪದಲ್ಲಿ ನೀಡಲಾಯಿತು. ಸ್ಪಂದನ ಸಂಸ್ಥೆಯ ಆಡಳಿತಾಧಿಕಾರಿ ಭಗಿನಿ ಹೆಲೆನ್ ಫೆರ್ನಾಂಡಿಸ್ರವರು ವೇದಿಕೆಯ ಮೇಲೆ ಉಪಸ್ತಿತರಿದ್ದರು. ಈ ಸಂಸ್ಥೆಯ ಸಿಬ್ಬಂದಿ ವರ್ಗದವರು ಪ್ರಾರ್ಥನೆಯನ್ನು ನೆರವೇರಿಸಿದರು.
ಶ್ರೀ ವಿಕ್ಟರ್ ವಾಸ್ರವರು ಸ್ವಾಗತಿಸಿದರು. ಭಗಿನಿ ಅನ್ನಮರಿಯಾರವರು ಧನ್ಯವಾದವಿತ್ತರು. ಶ್ರೀಮತಿ ರೀನಾ ಡಿಸೋಜಾರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸುಮಾರು ೨೫೦ ಮಂದಿ ಮಹಿಳೆಯರು ಹಾಗೂ ಕಾರ್ಯಕರ್ತೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಭಾಗವಹಿಸಿದ ಎಲ್ಲರಿಗೂ ಲಘು ಉಪಹಾರವನ್ನು ನೀಡಲಾಯಿತು. ಸುಮಾರು ಮಧ್ಯಾಹ್ನದ ೧೨ ಗಂಟೆಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
