ಮುಂಬಯಿ : ವಿಶ್ವಸುಖೀ ಆಗಲಿ ಎಂದು ಹಾರೈಸುವ ಹಿಂದೂ ಧರ್ಮದಲ್ಲಿ ಜನಿಸಿದ್ದು ನಮ್ಮ ಸೌಭಾಗ್ಯ. ಅದಕ್ಕೆ ಶಕ್ತಿ ನೀಡುವ ಕೇಂದ್ರವಾದ ಈ ಆಶ್ರಮಕ್ಕೆ ಪ್ರತಿಯೊಬ್ಬರೂ ಸಹಾಯಹಸ್ತ ನೀಡಿದಾಗ ಸಮಾಜದ ಆಧಾರಸ್ತಂಭ ಎಲ್ಲರೂ ಆಗುತ್ತಾರೆ ಎಂಬ ಭಾವದಿಂದ ನಾವು ತೊಡಗಿಸಿಕೊಳ್ಳೋಣ ಎಂದು ಕೇಂದ್ರ ಪ್ರವಾಸೋಧ್ಯಮ ಮತ್ತು ಬಂದರು ಖಾತೆ ಹಾಗೂ ನೌಕಾಯಾನ ಮತ್ತು ಜಲಸಾರಿಗೆ ಇಲಾಖೆಯ ರಾಜ್ಯ ಸಚಿವ ಶ್ರೀಪಾದ ಯಸ್ಸೋ ನಾಯಕ್ ತಿಳಿಸಿದರು.
ಕಾಸರಗೋಡು ಉಪ್ಪಳ ಇಲ್ಲಿನ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಪ್ರತಿಷ್ಠಾ ವರ್ಧಂತಿ ಕಾರ್ಯಕ್ರಮ ಕಳೆದ ಮಂಗಳವಾರ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿದ್ದು ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಸಚಿವ ಶ್ರೀಪಾದ ಮಾತನಾಡಿದರು.
ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಶಿಲಾಫಲಕ ಅನಾವರಣ ಮಾಡುವ ಮೂಲಕ ಉದ್ಘಾಟಿಸಿದರು. ಇದೇ ವೇಳೆ ಮುಂಬಯಿ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು (ಕನ್ಯಾನ) ಇವರು ನಿತ್ಯಾನಂದ ಶ್ರೀಗುರುದೇವರ ಭಾವಚಿತ್ರ ಅನಾವರಣಗೊಳಿಸಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಈ ಆಶ್ರಮದಿಂದ ಸಮಾಜಕ್ಕೆ ಇನ್ನಷ್ಟು ಒಳಿತಾಗಲಿ. ಶ್ರೀ ಸ್ವಾಮೀಜಿಯವರ ಮಾತು ಜಗತ್ತಿಗೇ ಮಾರ್ಗದರ್ಶನ ನೀಡುವಂತಾಗಲಿ ಎಂದು ಹಾರೈಸಿದರು.
ಶ್ರೀಮಠದ ಶ್ರೀಯೋಗಾನಂದ ಸರಸ್ವತೀಶ್ರೀಗಳು ಆಶೀರ್ವಚನ ನೀಡಿ, ಕಾರ್ಯಕರ್ತರ ಆಹೋರಾತ್ರಿಯ ಶ್ರಮವನ್ನು ಶ್ರೀಗುರುಗಳಿಗೆ ಸಮರ್ಪಿಸಿ ಈ ಆಶ್ರಮ ಬೆಳೆಯಲು ಕಾರಣಕರ್ತರಾಗಿದ್ದಾರೆ. ಸಮಸ್ತ ಸಮಾಜಕ್ಕೆ ಒಳ್ಳೆಯ ದಾರಿಯನ್ನು ತೋರಿಸಿಕೊಟ್ಟು ಸಮಾಜ ಬೆಳೆಯಲಿ ಎಂದು ಹಾರೈಸಿದರು.
ದಿವ್ಯ ಉಪಸ್ಥಿತರಿದ್ದ ಬ್ರಹ್ಮಶ್ರೀ ಅನಂತಪದ್ಮನಾಭ ಆಸ್ರಣ್ಣ ಕಟೀಲು ಮಾತನಾಡಿ, ಗಾಯತ್ರೀ ದೇವಿಯ ಅನುಗ್ರಹ, ನಿತ್ಯಾನಂದ ಗುರುಗಳ ಪರಮಸಾನ್ನಿಧ್ಯ ಇರುವ ಇಲ್ಲಿ ಧರ್ಮಮಾರ್ಗದಲ್ಲಿ ನಾವು ನಡೆದು ಜೀವನದಲ್ಲಿ ಕುಂದುಕೊರತೆಗಳಿಲ್ಲದಂತೆ ಜೀವನ ಸಾಗಿಸೋಣ ಎಂದು ಹಾರೈಸಿದರು.
ಬ್ರಹ್ಮಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣ ಕಟೀಲು, ಕೇರಳ ಧರ್ಮಾಚಾರ್ಯ ಸಭಾದ ರಾಜ್ಯ ಪ್ರಧಾನ ಸಂಚಾಲಕ ಬ್ರಹ್ಮಶ್ರೀ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿ ಉಪಸ್ಥಿತರಿದ್ದು ಮಠದ ವಿಶ್ವಸ್ಥ ಕೆ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರನ್ನು ಧಾರ್ಮಿಕ ಸಹಭಾಗಿತ್ವ, ಸಮಾಜ ಸೇವೆಗಳ ಸುದೀರ್ಘ ತತ್ಪರತೆಗಾಗಿ ಗಣ್ಯರ ಉಪಸ್ಥಿತಿಯಲ್ಲಿ ಕೊಂಡೆವೂರು ಶ್ರೀಗಳು ಗೌರವಿಸಿದರು.
ಸ್ಪಾನ್ ಪ್ರಿಂಟ್ಸ್ ಬೆಂಗಳೂರು ಇದರ ಕೆ.ನಾರಾಯಣ, ಡಾ| ಎಂ.ಮೋಹನ ಆಳ್ವ ಮೂಡಬಿದ್ರೆ, ನಾರಾಯಣ ಹೆಗ್ಡೆ ಕೋಡಿಬೈಲು, ಉದ್ಯಮಿ ಮಹಾಬಲೇಶ್ವರ ಭಟ್ ಎಡಕ್ಕಾನ, ಹರಿನಾಥ ಭಂಡಾರಿ ಮುಳಿಂಜ, ಡಾ| ಆಶಾಜ್ಯೋತಿ ರೈ ಮಂಗಳೂರು ಅತಿಥಿ ಅಭ್ಯಾಗತರುಗಳಾಗಿದ್ದ್ದರು.
ದಿವ್ಯಾ ಕಾರಂತ ಪ್ರಾರ್ಥಿಸಿದರು. ಕರ್ನಾಟಕ ವಿಧಾನ ಪರಿಷತ್ತು ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ ಸ್ವಾಗತಿಸಿದರು. ದಿನಕರ ಹೊಸಂಗಡಿ ಮತ್ತು ಅಶೋಕ ಬಾಡೂರು ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಿಕೆ ಮೀರಾ ಆಳ್ವ ಬೇಕೂರು ವಂದಿಸಿದರು.
