ಮುಂಬಯಿ : ಪಂಜೆ, ಕಿಞ್ಞಣ್ಣ ರೈಗಳ ಸಾಹಿತ್ಯಗಳನ್ನು ಓದಿ ಬೆಳದ ನಾವು ಈಗ ಹೊಸಚೆಂತನೆಯ ಕವಿಗಳನ್ನು ಗಮನಿಸುತ್ತಿದ್ದೇವೆ. ರಾತ್ರಿ ಈ ಶುದ್ಧ ಬೆಳದಿಂಗಳಿನಲ್ಲಿ ತ್ಯಾಗಮೂರ್ತಿ ಭಾಹುಬಲಿಯ ಸನ್ನಿಧಿಯಲ್ಲಿ ಈ ಬೆಳದಿಂಗಳ ಕಾರ್ಯಕ್ರಮ ಅವಿಸ್ಮರಣೀಯ ಎಂದು ರಾಜ್ಯೋತ್ಸವ ಪುರಸ್ಕೃತ ಹಿರಿಯ ನ್ಯಾಯವಾದಿ ಎಂ.ಕೆ.ವಿಜಯಕುಮಾರ್ ಹೇಳಿದರು.
ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಸಹಕಾರದೊಂದಿಗೆ ಬುಧವಾರ ಕಾರ್ಕಳ ಬೆಟ್ಟದ ರಥೋತ್ಸವದ ಬಳಿಕ ಆಯೋಜಿಸಿದ್ದ ಅಖಿಲಭಾರತ ಬೆಳದಿಂಗಳ ಕವಿಸಮ್ಮೇಳನವನ್ನು ಬೆಟ್ಟದ ಬಾಹುಬಲಿ ಸ್ವಾಮಿಯ ಪಾರಂಪರಿಕ ಅರ್ಚಕರನ್ನು ಗೌರವಿಸುವ ಮೂಲಕ ಉದ್ಘಾಟಿಸಿ ವಿಜಯಕುಮಾರ್ ಮಾತನಾಡಿ ಭಾಷಣ ಜನರಿಗೆ ಬೇಡದ ವಿಷಯ. ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿದೆ. ಆದರೆ ಬೆಳದಿಂಗಳ ಕವಿ ಸಮ್ಮೇಳನದಂತಹ ವಿನೂತನ ಕಾರ್ಯಕ್ರಮಗಳು ಹೊಸ ಭರವಸೆಯನ್ನು ಉಂಟುಮಾಡುತ್ತವೆ ಎಂದೂ ವಿಜಯಕುಮಾರ್ ಅಭಿಪ್ರಾಯಪಟ್ಟರು.
ಹೊಸ ಜನಾಂಗದ ಕವಿಗಳು ವಿಭಿನ್ನ ಆಲೋಚನೆಯ, ಭಿನ್ನ ನೆಲೆಯ ಕವನಗಳನ್ನು ರಚಿಸುತ್ತಾ ಬರುತ್ತಿದ್ದಾರೆ. ಅದನ್ನು ಜಾಲತಾಣಗಳಲ್ಲಿ ವೀಕ್ಷಿಸ ಬಹುದಾಗಿದೆ ಎಂದು ಕಾವ್ಯಾಭಿಷಢಕ ಮಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತ್ನ ಕಾರ್ಕಳ ತಾಲೂಕು ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ಹೇಳಿದರು.
ಮಾತೃ ಭಾಷೆಯಿಂದ ವಂಚಿತರಾದ ಯಾರೂ ಕೂಡಾ ಬದುಕಿನಲ್ಲಿ ಮುಂದೆ ಬರುವುದು ಸಾಧ್ಯವಿಲ್ಲ, ಶ್ರೀಮಂತರಾಗುವುದು ಸಾಧ್ಯವಿಲ್ಲ ಕವಿಗಳ ರಚನೆಗಳು ಸಾರ್ವಕಾಲೀಕವಾದುವುಗಳಾಗಿರ ಬೇಕು ಎಂದು ಈ ಬೆಳದಿಂಗಳ ಕವಿಗೋಷ್ಠಿಯ ಸರ್ವಾಧ್ಯಕ್ಷೆ ಪೂರ್ಣಿಮಾ ಸುರೇಶ್ ಹೇಳಿದರು.
ಡಾ| ಸುರೇಶ ನೆಗಳಗುಳಿ, ರೇಮಂಡ್ ಡಿಕುನ್ಹಾ ತಾಕೋಡೆ, ಕಥಾಬಿಂಧು ಪಿ.ವಿ ಪ್ರದೀಪ್ ಕುಮಾರ್ ಮಂಗಳೂರು, ರಾಧಾಕೃಷ್ಣ ತೋಡಿಕಾನ, ಶಶಿಕಲಾ ಹೆಗ್ಡೆ, ಡಾ.ವಾಣಿ ಗಿರೀಶ್, ನಾಗಶ್ರೀ ನಾಗರಕಟ್ಟೆ, ಸಾಣೂರು ಅರುಣ್ ಶೆಟ್ಟಿಗಾರ್ ಮುಖ್ಯ ಅತಿಥಿಗಳಾಗಿದ್ದರು. ಮಂಗಳೂರು ವಿಮಾನ ನಿಲ್ದಾಣದ ಮಾಜಿ ಆಡಳಿತ ನಿರ್ದೇಶಕ ಎಂ.ಆರ್.ವಾಸುದೇವ್ ಅವರನ್ನು ಕರ್ನಾಟಕ ಆಡಳಿತಸೇವಾ ರತ್ನ ಗೌರವ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಟ್ಟದ ಪ್ರಧಾನ ಅರ್ಚಕ ಸಿದ್ಧಾರ್ಥ ಇಂದ್ರ, ಬಾಹುಬಲಿ ಇಂದ್ರ, ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಅಜೆಕಾರು, ಮಕ್ಕಳ ವಿಭಾಗದ ಸುನಿಧಿ ಮತ್ತು ಸುನಿಜ, ಕೃಷ್ಣಪ್ಪ ಸೊಪ್ಪಿನ ಲಿಂಗನಾಯಕನಹಳ್ಳಿ ಸಹಕರಿಸಿದರು. ದತ್ತಾತ್ರೇಯ ನೊಣವಿನಕೆರೆ ಅವರನ್ನು ಪ್ರೇಕ್ಷಕರ ಪರವಾಗಿ ಸನ್ಮಾನಿಸಲಾಯಿತು. ಡಾ| ಶೇಖರ ಅಜೆಕಾರು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ದೀಪಕ್ ಎನ್.ದುರ್ಗಾ ನಿರೂಪಿಸಿದರು. ವೀರಣ್ಣ ಕುರುವತ್ತಿ ಗೌಡರ್ ವಂದಿಸಿದರು.
ಪೂರ್ಣಿಮಾ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಡಾ| ಸುಮತಿ ಪ್ರಭು, ಡಾ| ಶೇಖರ ಅಜೆಕಾರು, ಡಾ| ವಾಣಿಶ್ರೀ, ಡಾ| ಸುರೇಶ ನೆಗಳಗುಳಿ, ಎಂ.ಆರ್ ವಾಸುದೇವ, ಕಾಂತಾವರ ಶಿವಾನಂದ ಶೆಣೈ, ನಾಗಶ್ರೀ ನಾಗರಕಟ್ಟೆ, ಕೃಷ್ಣಪ್ಪ ಸೊಪ್ಪಿನ, ಗುರುರಾಜ್ ಎಂ.ಆರ್, ವೀರಣ್ಣ ಕುರುವತ್ತಿಗೌಡರ್, ಸ್ವರ್ಣಲತಾ ನೆಲ್ಲಿಕಾರು, ಸೋಮಪ್ಪ ದೇವಾಡಿಗ ಪರ್ಕಳ, ಎಡ್ವರ್ಡ್ ಲೊಬೋ ತೊಕ್ಕೊಟ್ಟು, ರಾಧಾಕೃಷ್ಣ ತೋಡಿಕಾನ, ಮಿತ್ರಪ್ರಭಾ ಹೆಗ್ಡೆ, ಮನ್ಸೂರ್ ಮುಲ್ಕಿ ಸಹಿತ ಕವಿಗಳು ಕವಿತಾವಾಚನ ಮಾಡಿದರು.
