ಕೈಕಂಬ: ಮರ್ವಾಯಿ(ಚಿಪ್ಪು ಮೀನು) ಯ ಪದಾರ್ಥ ತಿಂದು ಹಲವರು ಅಸ್ವಸ್ಥಗೊಂಡ ಘಟನೆ ಪೊಳಲಿ, ಗಂಜಿಮಠ, ಕುಪ್ಪೆಪದವು, ಕುಲವೂರು ಮತ್ತು ಮುತ್ತೂರು ಪರಿಸರದಲ್ಲಿ ಶನಿವಾರ ನಡೆದಿದೆ.
ಮರ್ವಾಯಿ ಪದಾರ್ಥ ಮಾಡಿ ತಿಂದವರಿಗೆ ತಲೆಸುತ್ತು ಬಂದು ಹಲವರು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸ್ಥಳೀಯ ಮೀನು ಮಾರಾಟಗಾರರಿಂದ ಖರೀದಿಸಿದ್ದ ಮರ್ವಾಯಿ ತಿಂದ ಹೆಚ್ಚಿನವರು ಅಸ್ವಸ್ಥಗೊಂಡಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಓರ್ವರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಮರ್ವಾಯಿ ಪದಾರ್ಥ ಸೇವಿಸಿದ ಕೆಲವೇ ನಿಮಿಷಗಳಲ್ಲಿ ತಲೆಸುತ್ತು ಬರಲು ಆರಂಭಿಸಿದ್ದು ಎದ್ದು ನಿಲ್ಲಲು ಸಾಧ್ಯವಾಗದ ರೀತಿಯಾಗಿತ್ತು ಅಲ್ಲದೇ ಕಣ್ಣುಗಳು ಮಂಜಾಗಿ ಕಣ್ಣು ತೆರೆಯಲು ಅಸಾಧ್ಯವಾಗಿತ್ತು ಕೆಲವರಿಗೆ ಹೊಟ್ಟೆ ನೋವು ಕೂಡಾ ಕಾಣಿಸಿಕೊಂಡಿತ್ತು. ಶನಿವಾರ ಬೆಳಿಗ್ಗೆ ಖರೀದಿಸಿ ತಂದು ಮಧ್ಯಾಹ್ನ ಪದಾರ್ಥ ಮಾಡಿ ಊಟ ಮಾಡಿದೆವು ಮನೆಯಲ್ಲಿದ್ದ ನಾವು ಮೂವರಿಗೂ ಪದಾರ್ಥ ತಿಂದ ಕೆಲವೇ ನಿಮಿಷಗಳಲ್ಲಿ ವಿಪರೀತ ತಲೆ ಸುತ್ತು ಕಾಣಿಸಿಕೊಂಡು ಕಣ್ಣುಗಳು ಮಂಜಾಗಲಾರ0ಭಿಸಿದವು ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡೆವು ಎಂದು ಕುಲವೂರಿನ ರಜನಿ ಹೇಳಿದ್ದಾರೆ.
ಮರ್ವಾಯಿ ಪದಾರ್ಥ ಸೇವಿಸಿ ಅಸ್ವಸ್ಥ ಗೊಂಡ ಕೆಲವರು ಚಿಕಿತ್ಸೆ ಪಡೆದುಕೊಂಡಿರುವುದನ್ನು ಖಾಸಗಿ ಆಸ್ಪತ್ರೆಯ ಮೂಲಗಳು ದ್ರಡ ಪಡಿಸಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಾರೂ ಚಿಕಿತ್ಸೆ ಪಡೆದುಕೊಂಡಿಲ್ಲ ಎಂದು ಆರೋಗ್ಯಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಮರ್ವಾಯಿ ಪದಾರ್ಥ ಸೇವನೆಯಿಂದ ಅಸ್ವಸ್ಥಗೊಳ್ಳಲು ನಿರ್ದಿಷ್ಟ ಕಾರಣ ಏನು ಎಂದು ಸ್ಪಷ್ಟವಾಗಿಲ್ಲವಾದರೂ ಮೀನು ಕೆಡದಂತೆ ಸಂರಕ್ಷಿಸಲು ಬಳಸುವ ರಾಸಾಯನಿಕದಿಂದಾಗಿ ಅಸ್ವಸ್ಥತೆ ಕಂಡು ಬಂದಿರಬಹುದೆಂದು ಅಸ್ವಸ್ಥಗೊಂಡಿದ್ದ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಗಮನಹರಿಸಬೇಕಾಗಿದೆ.
