ಕೈಕಂಬ : ಗಂಜಿಮಠದ ಮರಾಠಿ ಸಮಾಜ ಸೇವಾ ಸಂಘ(ರಿ) ಇದರ ೪ನೇ ವರ್ಷದ ‘ಮರಾಠಿ ಸಮ್ಮಿಲನ-೨೦೨೨’ ಸಂಘದ ಅಧ್ಯಕ್ಷ, ದೈಹಿಕ ಶಿಕ್ಷಕ ಶೇಖರ ಕಡ್ತಲ ಅವರ ಅಧ್ಯಕ್ಷತೆಯಲ್ಲಿ ಜ.02ರಂದು ಭಾನುವಾರ ಎಡಪದವಿನ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ವಠಾರದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಎನ್ಎಚ್ಎಐ ಮಂಗಳೂರು ಇದರ ಮ್ಯಾನೇಜರ್ ಪರಮೇಶ್ವರ ನಾಯ್ಕ್, ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಎಜಿಎಂ(ಅಕೌಂಟ್ಸ್) ಸುಂದರ ನಾಯ್ಕ್, ಮೂಡಬಿದ್ರೆ ಮರಾಠಿ ಸಮಾಜ ಸೇವಾ ಸಂಘ(ರಿ) ಅಧ್ಯಕ್ಷ ರಾಮಚಂದ್ರ ಕೆಂಬಾರೆ, ಮರಾಠಿ ಸಮಾಜದಲ್ಲಿ ಗುರುತಿಸಿಕೊಂಡ ಇಬ್ಬರು ಕೊರೊನಾ ವಾರಿಯರ್ಸ್, ನಾಲ್ವರು ಅಂಗನವಾಡಿ ಕಾರ್ಯಕರ್ತೆಯರು, ನಾಲ್ವರು ಆಶಾ ಕಾರ್ಯಕರ್ತೆಯರು ಹಾಗೂ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಐವರು ವಿದ್ಯಾರ್ಥಿಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಪರಮೇಶ್ವರ ನಾಯ್ಕ್ ಮಾತನಾಡಿ, ನಮ್ಮ ಸಮಾಜಕ್ಕೆ ಸರ್ಕಾರ ಹಲವು ಯೋಜನೆ, ಮೀಸಲಾತಿ ಪ್ರಕಟಿಸಿದೆ. ಸರ್ಕಾರದ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ನಮ್ಮ ಸಮಾಜದವರು ಈ ವಿಷಯವನ್ನು ಸಮಾಜ ಬಾಂಧವರಿಗೆ ತಿಳಿಸಿ ಹೇಳಬೇಕು ಎಂದರು.
ಸುಂದರ್ ನಾಯ್ಕ್ ಮಾತನಾಡಿ, ಸಂಘದ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗೂಡಿ ಶ್ರಮಿಸಬೇಕು. ನಮ್ಮ ಸಂಸ್ಕೃತಿ, ಸಂಘದ ಧ್ಯೇಯೋದ್ದೇಶ ಸಮಾಜದ ಯುವ ಪೀಳಿಗೆಗೆ ತಲುಪುವಂತಾಗಬೇಕು ಎಂದರು.
ರಾಮಚಂದ್ರ ಕೆಂಬಾರೆ ಮಾತನಾಡಿ, ಗಂಜಿಮಠ ಸಂಘವು ಮರಾಠಿ ಸಮಾಜ ಬಾಂಧವರಿಗೆ ಒಂದು ಕುಟುಂಬವಿದ್ದಂತೆ. ರಾಜಕೀಯದಲ್ಲೂ ನಮ್ಮವರು ಬೆಳೆಯಬೇಕು. ಈ ನಿಟ್ಟಿನಲ್ಲಿ ಯುವಕರು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಸಂಘದ ಅಧ್ಯಕ್ಷ ಶೇಖರ ಕಡ್ತಲ ಅಧ್ಯಕ್ಷೀಯ ಸ್ಥಾನದಿಂದ ಮಾತನಾಡಿ, ನಮ್ಮ ಸಂಘದ ಕೆಲಸಗಳು ಇತರ ಸಂಘಗಳಿಗಿಂತ ಕಡಿಮೆಯಾಗಬಾರದು. ಸಂಘವು ಮರಾಠಿ ಸಮಾಜದ ಜನರ ಕಷ್ಟ-ಸುಖಗಳಲ್ಲಿ ಸದಾ ಭಾಗಿಯಾಗುತ್ತದೆ. ನಾವೆಲ್ಲರೂ ಒಂದು ಸಂಸಾರದಂತೆ ಕೆಲಸ ಮಾಡುತ್ತಿದ್ದೇವೆ ಎಂದರು.
ಸಂಘದ ಕೋಶಾಧಿಕಾರಿ ಸುಲತಾ ಎಸ್ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಅಶೋಕ್ ನಾಯ್ಕ್ ವರದಿ ವಾಚಿಸಿದರು. ಕ್ರೀಡಾ ಮತ್ತು ಸಂಸ್ಕೃತಿ ಕಾರ್ಯದರ್ಶಿ ನಿತೇಶ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಜೆ, ರಾಜೀವಿ ನಾಯ್ಕ್, ಸಂಘದ ಪದಾಧಿಕಾರಿಗಳಾದ ಪುರಂದರ ನಾಯ್ಕ್, ರಾಜೇಶ್ ನಾಯ್ಕ್, ವಿ ಪದ್ಮನಾಭ ನಾಯ್ಕ್, ಪದ್ಮನಾಭ ಡಿ. ನಾಯ್ಕ್, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಸಮಾಜ ಬಾಂಧವರು ಉಪಸ್ಥಿತಿದ್ದರು. ನಿವೇದಿತಾ ಮತ್ತು ಶ್ರಾವ್ಯಾ ಕಾರ್ಯಕ್ರಮ ನಿರೂಪಿಸಿದರೆ ಜೊತೆ ಕಾರ್ಯದರ್ಶಿ ನಾರಾಯಣ ನಾಯ್ಕ್ ವಂದಿಸಿದರು.
ಈ ಸಂದರ್ಭದಲ್ಲಿ ಸಂಘವು ಕ್ರೀಡಾಕೂಟ, ಸಂಘದ ಸದಸ್ಯರ ಸಹಕಾರದಲ್ಲಿ ತುಳುನಾಡಿನ ‘ಸಹಭೋಜನ’, ಬಹುಮಾನ ವಿತರಣೆ, ಸಂಘದ ಸದಸ್ಯರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿತು.
