ಕೈಕಂಬ : ಭಾರತ ಕಮ್ಯುನಿಸ್ಟ್ ಪಕ್ಷ(ಮಾಕ್ಸ್ವಾದಿ)-ಸಿಐಎಂ) ಇದರ ಎರಡು ದಿನಗಳ ೨೩ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನವು ಗುರುಪುರ ಕೈಕಂಬದ ಪ್ರೀಮಿಯರ್ ಸಭಾಗೃಹದಲ್ಲಿ ಸೋಮವಾರ ಉದ್ಘಾಟನೆ ಗೊಂಡಿತು. ಸಿಪಿಐಎಂ ಗುರುಪುರ ವಲಯ ಕಾರ್ಯದರ್ಶಿ ಸದಾಶಿವ ದಾಸ್ ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನದ ಗೌರವಾಧ್ಯಕ್ಷ ಸಿಪಿಐಎಂ ಹಿರಿಯ ಮುಖಂಡ ಯು.ಬಿ ಲೋಕಯ್ಯ ಧ್ವಜಾರೋಹಣಗೈದರು.
ಸಮ್ಮೇಳನ ಉದ್ಘಾಟಿಸಿದ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು ಬಸವರಾಜ್ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಎಡ ಪಕ್ಷ ಕಟ್ಟಿ, ಬೆಳೆಸಿರುವ ಹಿರಿಯ ಮುಖಂಡ ಪಿ ರಾಮಚಂದ್ರರ ಊರಲ್ಲಿ ಸಮ್ಮೇಳನ ಉದ್ಘಾಟಿಸಿ ಮಾತನಾಡಲು ಸಂತಸವಾಗುತ್ತಿದೆ. ದೇಶದಲ್ಲಿ `ಜನತಾ ಪ್ರಜಾಸತ್ತಾತ್ಮಕ ರಂಗ’ ಕಟ್ಟುವ ಉದ್ದೇಶವಿದ್ದು, ಇದಕ್ಕಿಂತ ಮುಂಚೆ `ಜನತಾ ಎಡ ಪ್ರಜಾಸತ್ತಾತ್ಮಕ ರಂಗ’ ಗಟ್ಟಿಗೊಳ್ಳಬೇಕು. ಈ ನಿಟ್ಟಿನಲ್ಲಿ ದುಡಿಯುವ ವರ್ಗ, ಶೋಷಿತರು, ದಲಿತರು, ರೈತರು, ಅಲ್ಪಸಂಖ್ಯಾತರ, ಅಸ್ಪೃಶ್ಯರು…ಇನ್ನುಳಿದ ಕಾರ್ಮಿಕ ವರ್ಗ ಒಗ್ಗೂಡಬೇಕು. ಆಗ ಮಾತ್ರ ಆಳುವ ವರ್ಗ ಅಥವಾ ಬಂಡವಾಳಶಾಹಿಗಳಿಗೆ ಉತ್ತೇಜನ ನೀಡುವವರಿಗೆ ದಿಟ್ಟ ಉತ್ತರ ಕೊಡಲು ಸಾಧ್ಯವಿದೆ ಎಂದರು.
ಪರಿಣಾಮವಾಗಿ ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಜನರು ಮತ್ತಷ್ಟು ಸಂಕಷ್ಟ ಎದುರಿಸುವಂತಾಯಿತು ಎಂದವರು, ಆರು ಕೋಟಿ ಜನರಲ್ಲಿ ೧.೨೦ ಕೋಟಿ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿವೆ. ಪರಿಸ್ಥಿತಿ ಇಷ್ಟೊಂದು ಗಂಭೀರವಾಗಿದ್ದರೂ, ರಾಜ್ಯ ಸರ್ಕಾರ ಅಪೌಷ್ಠಿಕತೆ ನೀಗಿಸಲು ಕಾರ್ಯಕ್ರಮ ರೂಪಿಸುವ ಬದಲಿಗೆ ಬಡವರ ರೇಶನ್ ಕಸಿದಿದೆ ಎಂದು ಆರೋಪಿಸಿದರು.
ಮೋದಿ ಸರ್ಕಾರದ
ವಿರುದ್ಧ ವಾಗ್ದಾಳಿ :
ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಬಡವರ ರಕ್ಷಿಸಲು ಮುಂದಾಗದೆ, ಬಂಡವಾಳಶಾಹಿಗಳಿಗೆ ನೆರವು ನೀಡುವಲ್ಲಿ ಕಾಲವ್ಯಯ ಮಾಡಿದೆ. ಒಂದರ್ಥದಲ್ಲಿ ಬಡವರ್ಗದ ಸರ್ವನಾಶಕ್ಕೆ ಮುಂದಾಗಿರುವ ಮೋದಿ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ, ಇಂಧನ ಬೆಲೆ ಏರಿಕೆ, ಕೃಷಿ ಸವಲತ್ತು ಬೆಲೆ ಗಗನಕ್ಕೇರಿಸುವುದಲ್ಲೇ ಕಾಳ ಕಳೆದಿದೆ. ಸಾರ್ವಜನಿಕ ರಂಗದ ಶಿಕ್ಷಣ ಸಂಸ್ಥೆಗಳನ್ನು ಖಾಸಗಿಯವರಿಗೆ ನೀಡಲು ಮುಂದಾಗಿರುವ ಸರ್ಕಾರ, ಶಿಕ್ಷಣದಲ್ಲಿ ಕ್ರಾಂತಿ ಮಾಡುವುದಾಗಿ ಬೊಗಳೆ ಬಿಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪಕ್ಷ ಸಂಘಟನೆಗಾಗಿ ಅವಿತರ ಶ್ರಮಿಸಿದ ಗುರುಪುರ ವಲಯದ ಕೃಷ್ಣಪ್ಪ ಪೂಜಾರಿ, ಗೋಪಾಲ ಮೂಲ್ಯ, ಮುಂಡಪ್ಪ ಪೂಜಾರಿ, ಬಾಬು ಪೂಜಾರಿ, ಗಂಗಯ್ಯ ಅಮೀನ್ ಮತ್ತು ಕ್ರೀಡಾರಂಗದಲ್ಲಿ ಮಿಂಚುತ್ತಿರುವ ಸಂದೇಶ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಮುನೀರ್ ಕಾಟಿಪಳ್ಳ ಸ್ವಾಗತಿಸಿ ಪ್ರಸ್ತಾವಿಸಿದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ರಾಜ್ಯ ಕೇಂದ್ರದ ಸಮಿತಿ ಸದಸ್ಯರಾದ ಕೆ. ಶಂಕರ್ ಮತ್ತು ಬಾಲಕೃಷ್ಣ ಶೆಟ್ಟಿ, ಹಿರಿಯ ಮುಖಂಡ ಕೆ ಆರ್ ಶ್ರೀಯಾನ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್, ಯಾದವ ಶೆಟ್ಟಿ, ಪದ್ಮಾವತಿ ಶೆಟ್ಟಿ ಮತ್ತು ಕೃಷ್ಣಪ್ಪ ಸಾಲ್ಯಾನ್ ಉಪಸ್ಥಿತರಿದ್ದರು. ಪಕ್ಷದ ಯುವ ಮುಖಂಡ ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರೆ, ನೋಣಯ್ಯ ಗೌಡ ವಂದಿಸಿದರು.
