ಮೂಡುಬಿದಿರೆ: ಪುತ್ತಿಗೆ ಗ್ರಾಮದ ಕಂಚಿಬೈಲಿನಲ್ಲಿ ಸೋಮವಾರ ಸಿಡಿಲಾಘಾತದಿಂದ ಮೃತಪಟ್ಟ ಯಶವಂತ್ ಹಾಗೂ ಮಣಿಪ್ರಸಾದ್ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಸಾಂತ್ವನ ಹೇಳಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಡಕುಟುಂಬದಲ್ಲಿರುವ ಯುವಕರಿಬ್ಬರು ಸಾವನ್ನಪ್ಪಿರುವುದು ದುಃಖಕರ. ಶಾಸಕರು ಘಟನೆ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ತಕ್ಷಣ ತಲಾ 5 ಲಕ್ಷ ರೂ. ಮಂಜೂರು ಆಗಿದೆ ಎಂದರು.
ಘಟನೆಯಲ್ಲಿ ಗಾಯಗೊಂಡ ಮೂವರನ್ನು ಅಲಂಗಾರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದರು. ಆಸ್ಪತ್ರೆಯ ವೆಚ್ಚ ಭರಿಸುವುದಾಗಿ ಭರವಸೆ ನೀಡಿದರು.
ಮೂಡ ಅಧ್ಯಕ್ಷ ಮೇಘನಾದ್ ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಪುತ್ತಿಗೆ ಗ್ರಾಪಂ ಸದಸ್ಯ ಚಂದ್ರಶೇಖರ್ ನಾಯ್ಕ್ ಪ್ರಮುಖರಾದ ಅಜಯ್ ರೈ, ಲಕ್ಷ್ಮಣ್ ಪೂಜಾರಿ, ಶಶಿಧರ್ ಅಂಚನ್, ಕಿಶೋರ್, ಪ್ರವೀಣ್ ಸಿಕ್ವೇರ, ನಾಗವರ್ಮ ಜೈನ್ ಮತ್ತಿತರರು ಉಪಸ್ಥಿತರಿದ್ದರು.
