ಮೂಡುಬಿದಿರೆ: ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಭಯೋತ್ಪಾದಕರು ಹತ್ಯೆ ನಡೆಸುತ್ತಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ-ದುರ್ಗಾವಾಹಿನಿ ಮೂಡುಬಿದಿರೆ ಪ್ರಖಂಡದ ವತಿಯಿಂದ ಬಸ್ ನಿಲ್ದಾಣದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಕಾಶ್ಮೀರ ಪಂಡಿತರನ್ನು ಮರಳಿ ಕಾಶ್ಮೀರಕ್ಕೆ ಬರುವುದನ್ನು ತಡೆಯಲು ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ಇಂತಹ ಪೈಶಾಚಿಕ ಹತ್ಯೆಯನ್ನು ನಡೆಸಿ ಬೆದರಿಸುತ್ತಿದೆ. ಕಾಶ್ಮೀರದಲ್ಲಿ ಹಿಂದೂಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು.ಕೇಂದ್ರ ಸರ್ಕಾರವು ಈ ಹತ್ಯಾ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಬಜರಂಗದಳದ ವಿಭಾಗ ಸಂಚಾಲಕ ಭುಜಂಗ ಕುಲಾಲ್, ಮೂಡುಬಿದಿರೆ ವಿಹಿಂಪ ಕಾರ್ಯಾಧ್ಯಕ್ಷ ಶ್ಯಾಮ್ ಹೆಗ್ಡೆ, ಉಪಾಧ್ಯಕ್ಷ ಶಾಂತಾರಾಮ್ ಕುಡ್ವ, ಕಾರ್ಯದರ್ಶಿ ಸುಚೇತನ್ ಜೈನ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಪುರಸಭೆ ಸದಸ್ಯ ರಾಜೇಶ್ ನಾಯ್ಕ್, ಜಿ.ಪಂ ಮಾಜಿ ಸದಸ್ಯ ಸುಚರಿತ ಶೆಟ್ಟಿ, ವಿಹಿಂಪ ಪ್ರಮುಖರಾದ ದೀಪಕ್ ಮರೋಳಿ, ಸೋಮನಾಥ ಕೋಟ್ಯಾನ್, ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.
