ಮೂಡುಬಿದಿರೆ: ಆರು ವರ್ಷಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಸ್ಮರಣಾರ್ಥ ವಿಹಿಂಪ, ಬಜರಂಗದಳ ಮೂಡುಬಿದಿರೆ ಘಟಕದ ವತಿಯಿಂದ ಅಲಂಗಾರು ಕಟ್ಟೆಯ ಬಳಿ ನಿರ್ಮಾಣಗೊಳ್ಳಲಿರುವ ನೂತನ ಬಸ್ ನಿಲ್ದಾಣಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಲಾಯಿತು.
ಶಾಸಕ ಉಮಾನಾಥ ಕೋಟ್ಯಾನ್ ಶಿಲಾನ್ಯಾಸ ನೆರವೇರಿಸಿದರು.ಹೋರಾಟದ ಮೂಲಕ ಸಮಾಜಸೇವೆ ಮಾಡುತ್ತಿದ್ದ ಯುವಕನೊಬ್ಬ ಕಿಡಿಕೇಡಿಗಳ ಕ್ರೂರ ದೃಷ್ಟಿಗೆ ಬಿದ್ದಿರುವುದು ದುರಂತ. ಗೋಮಾತೆ, ಸಮಾಜ, ಸಂಘಟನೆಗೋಸ್ಕರ ಪ್ರಶಾಂತ್ ಪೂಜಾರಿ ಬಲಿದಾನ ಸದಾ ನೆನಪಿರುವಂತದ್ದು. ಪ್ರಯಾಣಿಕರಿಗೆ ನೆರಳು ನೀಡಲು ಮಾತ್ರ ತಂಗುದಾಣ ಮಾಡಿರುವುದಲ್ಲ. ಹಿಂದೂ ಸಮಾಜದ ಏಳಿಗೆಗಾಗಿ ಪ್ರಾಣ ಅರ್ಪಣೆ ಮಾಡಿದ ಯುವಕನ ನೆನಪು ಸದಾ ಇರಬೇಕೆನ್ನುವ ಪ್ರಯತ್ನದಿಂದ ವಿಹಿಂಪ, ಬಜರಂಗದಳ ಮುಂದಡಿ ಇಟ್ಟಿರುವುದು ಉತ್ತಮ ಕೆಲಸ ಎಂದರು.
ವಿಹಿಂಪ ವಿಭಾಗ ಕಾಯದರ್ಶಿ ಶರಣ್ ಪಂಪ್ವೆಲ್, ಬಜರಂಗದಳದ ವಿಭಾಗ ಸಂಯೋಜಕ ಭುಜಂಗ ಕುಲಾಲ್, ವಿಹಿಂಪ ಮೂಡುಬಿದಿರೆ ಕಾರ್ಯಾಧ್ಯಕ್ಷ ಶ್ಯಾಮ್ ಹೆಗ್ಡೆ, ಪ್ರಶಾಂತ್ ಪೂಜಾರಿ ಅವರ ತಾಯಿ ಯಶೋಧಾ, ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ., ಮಂಡಲ ಅಧ್ಯಕ್ಷ ಸುನೀಲ್ ಆಳ್ವ, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಪಡುಮಾರ್ನಾಡು ಪಂಚಾಯಿತಿ ಮಾಜಿ ಅಧ್ಯಕ್ಷ ದಯಾನಂದ ಪೈ, ಪರಿವಾರ ಸಂಘಟನೆ ಹಾಗೂ ಬಿಜೆಪಿಯಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
