ಬಂಟ್ವಾಳ: ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ಆಶ್ರಯದಲ್ಲಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ರವರ ೧೬೧ ನೇ ಜನ್ಮ ದಿನಾಚರಣೆ, ಇಂಜಿನಿಯರ್ಸ್ ದಿನಾಚರಣೆ, ೨೦೨೦-೨೧ ನೇ ಸಾಲಿನ ಭಾರತ ರತ್ನ ಸರ್. ಎಂ. ವಿ. ಪ್ರಶಸ್ತಿ ಪ್ರದಾನ ಹಾಗೂ ಯುವ ತಾಂತ್ರಿಕ ಪ್ರತಿಭೆಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಬಿ.ಸಿ.ರೋಡಿನ ಪದ್ಮಕಾಂಪ್ಲೆಕ್ಸ್ನ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಸರಕಾರಿ ಪಾಲಿಟೆಕ್ನಿಕ್ ಬಂಟ್ವಾಳ ಇಲ್ಲಿನ ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಶಾಮರಾಜ್ ಎಸ್. ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ದೇಶದ ಆರ್ಥಿಕ ಸ್ಥಿತಿಗತಿ ಉತ್ತಮವಾಗಿ ಜಿಡಿಪಿ ಹೆಚ್ಚಳವಾಗುವಲ್ಲಿ ನಿರ್ಮಾಣ ಕೆಲಸಗಳ ಕೊಡುಗೆಯೂ ಇದೆ. ದೇಶ ಅಭಿವೃದ್ದಿಯಾದಾಗ ಉದ್ಯೋಗವಕಾಶಗಳು ಹೆಚ್ಚುತ್ತದೆ, ಈ ಮೂಲಕ ಯುವಕರಿಗೂ ಉತ್ತಮ ಅವಕಾಶಗಳು ಲಭ್ಯವಾಗುತ್ತದೆ ಎಂದು ತಿಳಿಸಿದರು.
ಇಂಜಿನಿಯರ್ಗಳು ತಮ್ಮ ವೃತ್ತಿಯಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರ ಆದರ್ಶವನ್ನು ಮುಂದಿಟ್ಟುಕೊಂಡು ಕರ್ತವ್ಯ ನಿರ್ವಹಿಸಿದಾಗ ಯಶಸ್ಸಿನೊಂದಿಗೆ ಗೌರವ ಸಂಪಾದಿಸಲು ಸಾಧ್ಯವಿದೆ ಎಂದರು. ಪಾಲಿಟೆಕ್ನಿಕ್ ಉಪನ್ಯಾಸಕ ಚಿತ್ರಕುಮಾರ್ ಅವರು ಜಲ ಸಂಪನ್ಮೂಲ ಇಲಾಖೆಯ ಅಭಿಯಂತರ ಡಾ. ಆನಂದ ಬಂಜನ್ ಅವರಿಗೆ ಭಾರತ ರತ್ನ ಸರ್ ಎಂ.ವಿ. ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆನಂದ ಬಂಜನ್ ಭೌಗೋಳಿಕವಾಗಿ ಜಿಲ್ಲೆಯ ಮಧ್ಯ ಭಾಗದಲ್ಲಿರುವ ಬಂಟ್ವಾಳ ತಾಲೂಕಿನ ತ್ರಿವಳಿ ಪಟ್ಟಣಗಳಾದ ಬಿ.ಸಿ.ರೋಡ್, ಬಂಟ್ವಾಳ ಹಾಗೂ ಪಾಣೆಮಂಗಳೂರಿನ ಆರ್ಥಿಕ ಬೆಳವಣಿಗೆಗೆ ನೀಲಿ ನಕಾಶೆಯನ್ನು ತಯಾರಿಸಿ ಸ್ಥಳೀಯ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಇಂಜಿನಿಯರ್ ಅಸೋಸಿಯೇಷನ್ನ್ನು ಆಗ್ರಹಿಸಿದರು.
ವಿಶ್ವ ವಿಖ್ಯಾತಿಯನ್ನು ಪಡೆದ ಕರ್ನಾಟಕದ ಹೆಮ್ಮೆಯ ಇಂಜಿನಿಯರ್ ವಿಶ್ವೇಶ್ವರಯ್ಯನವರ ಹೆಸರನ್ನು ತಾಲೂಕಿನ ಯಾವುದಾದರೊಂದು ವೃತ್ತಕ್ಕೆ ಅಥವಾ ರಸ್ತೆಗೆ ನಾಮಕರಣ ಮಾಡಬೇಕು, ನಗರದಲ್ಲಿ ಹೌಸಿಂಗ್ ಲೇ ಔಟ್ನ್ನು ಉತ್ತೇಜಿಸಲು ಸ್ಥಳೀಯ ಪ್ರಾಧಿಕಾರಕ್ಕೆ ಎಸೋಸಿಯನ್ ಮೂಲಕ ಒತ್ತಾಯಿಸಬೇಕೆಂದು ಅವರು ಸಲಹೆ ನೀಡಿದರು.
ಬಂಟ್ವಾಳ ತಾ| ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ಅಧ್ಯಕ್ಷ ಮ್ಯಾಥ್ಯೂ ಫ್ರಾನ್ಸಿಸ್ ಡಿಕುನ್ನಾ ಅಧ್ಯಕ್ಷತೆ ವಹಿಸಿ ಮಾತನಾಡಿ ಸರ್. ಎಂ. ವಿಶ್ವೇಶ್ವರಯ್ಯನವರು ಇಂಜಿನಿಯರ್ ಆಗಿದ್ದುಕೊಂಡು ತಮ್ಮ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ, ಹಾಗೂ ನೇರ ನಡೆನುಡಿಯಿಂದ ಉನ್ನತ ಸ್ಥಾನವನ್ನು ಅಲಂಕರಿಸಿದವರು, ಅಂತೆಯೇ ಪ್ರತಿಯೊಬ್ಬರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಕೆಲಸ ಮಾಡಿದಾಗ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲಿಟೆಕ್ನಿಕ್ ಉಪನ್ಯಾಸಕ ನಂದೀಶ್ ಎಂ.ಕೆ. ಭಾಗವಹಿಸಿದ್ದರು. ಈ ಸಂದರ್ಭ ಬಂಟ್ವಾಳ ಪಾಲಿಟೆಕ್ನಿಕ್ನ ಮೂರು ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯುವ ತಾಂತ್ರಿಕ ಪ್ರತಿಭೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ಅಧ್ಯಕ್ಷ ಮ್ಯಾಥ್ಯೂ ಫ್ರಾನ್ಸಿಸ್ ಡಿಕುನ್ನಾ ಸ್ವಾಗತಿಸಿದರು, ಕಾರ್ಯದರ್ಶಿ ರಾಜೇಶ್ ಭಂಡಾರಿ ವಂದಿಸಿದರು, ಕಿಶನ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ತಾರನಾಥ ಕೊಟ್ಟಾರಿ, ಜೊತೆ ಕಾರ್ಯದರ್ಶಿ ಶ್ರೀನಿಧಿ ಭಟ್ ಕೋಶಾಧಿಕಾರಿ ಸುಧೀರ್ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
