ಶ್ರೀನಿವಾಸಪುರ: ಕೊರೊನಾ ದಿಂದಾಗಿ ಗ್ರಾಮೀಣ ಪ್ರದೇಶದಲ್ಲೂ ನೆಮ್ಮದಿ ಹಾಳಾಗಿದೆ ಎಂದು ರವೀಂದ್ರಾಚಾರ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವೈ.ಆರ್.ರಾಮಾನುಜಾಚಾರ್ ಹೇಳಿದರು. ತಾಲ್ಲೂಕಿನ ರ್ರಂವಾರಿಪಲ್ಲಿ ಗ್ರಾಮದಲ್ಲಿ ರವೀಂದ್ರಾಚಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಶನಿವಾರ ಬಡವರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿ, ಕೊರೊನಾ ಸಂಕಷ್ಟದಿಂದ ಪಾರಾಗಲು ಸಾಂಘಿಕ ಪ್ರಯತ್ನ ಮಾಡಬೇಕಾಗಿದೆ. ಅದಕ್ಕೆ ನಗರ, ಹಳ್ಳಿ ಎಂಬ ಭೇದವಿಲ್ಲ. ಗ್ರಾಮೀಣ ಪ್ರದೇಶದ ಜನರೂ ಸಹ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಬೇಕು ಎಂದು ಹೇಳಿದರು.
ಎರಡನೇ ಅಲೆ ಗ್ರಾಮೀಣ ಪ್ರದೇಶವನ್ನು ಹೆಚ್ಚಾಗಿ ಕಾಡಿದೆ. ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸಿವೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಕೈ ಮೀರುತ್ತದೆ. ಅನಾಹುತಗಳಿಂದ ಸಾಮಾಜಿಕ ಹಾಗೂ ಕೌಟುಂಬಿಕ ವಿಘಟನೆ ನಡೆಯುತ್ತದೆ. ಅನಾಥ ಭಾವ ಕಾಡುತ್ತದೆ. ಇದೆಲ್ಲವನ್ನೂ ನಿಯಂತ್ರಿಸಲು ಪೂರಕವಾಗಿ ವರ್ತನೆ ಇರಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನರೇಶ್, ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ, ಪೊಲೀಸ್ ಇನ್ಸ್ಪೆಕ್ಟರ್ ಸಿ.ರವಿಕುಮಾರ್, ಮುಖಂಡರಾದ ವೈ.ಎನ್.ರಘುನಾಥರೆಡ್ಡಿ, ರವೀಂದ್ರರೆಡ್ಡಿ, ವೈ.ಆರ್.ಶ್ರೀನಾಥ್ ಇದ್ದರು.
