ಮೂಡುಬಿದಿರೆ: ಯುವಕರು ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಸಂಘಟಿತರಾಗಬೇಕು. ಯುವಸಂಘಟನೆಗಳು ಸಾಮಾಜಿಕ ಕಾಳಜಿಯ, ಸಾಮಾಜಿಕ ಬದ್ಧತೆಗಳೊಂದಿಗೆ ಸೇವೆ ಮಾಡಿದರೆ ಸಮಾಜ ಪರಿವರ್ತನೆಯಾಗುತ್ತದೆ. ಅಂತಹ ಸಂಘಟನೆಗಳು ಹೆಚ್ಚಾಗಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಆದಿದ್ರಾವಿಡ ಯುವಶಕ್ತಿ ಬೆದ್ರ ಇದರ ನೂತನ ಕಚೇರಿಯನ್ನು ಅಲಂಗಾರು ಶ್ರೀಸತ್ಯಸಾರಮಾನಿ ದೈವಸ್ಥಾನದ ಬಳಿ ಉದ್ಘಾಟಿಸಿ ಅವರು ಮಾತನಾಡಿದರು.
ಉಮಾನಾಥ ಕೋಟ್ಯಾನ್, ಮೂಡುಬಿದಿರೆ ಪುರಸಭೆ ನೂತನ ಅಧ್ಯಕ್ಷ ಪ್ರಸಾದ್ ಕುಮಾರ್ ಹಾಗೂ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಂತರಾಷ್ಟ್ರೀಯ ಕರಾಟೆಪಟು ಭಾಸ್ಕರ್ ಪಾಲಡ್ಕ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಜಿಪಂ ಸದಸ್ಯರಾದ ಕೆ.ಪಿ ಸುಚರಿತ ಶೆಟ್ಟಿ, ಸುಜಾತಾ ಕೆ.ಪಿ, ಮೂಡುಬಿದಿರೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಸಂತೋಷ್ ಬಿ., ಮೂಡಾ ಸದಸ್ಯ ಗೋಪಾಲ ಶೆಟ್ಟಿಗಾರ್, ಜವನೆರ್ ಬೆದ್ರ ಸ್ಥಾಪಕಾಧ್ಯಕ್ಷ ಅಮರ್ ಕೋಟೆ, ಮುಖಂಡರಾದ ಈಶ್ವರ್ ಕಟೀಲ್, ರತ್ನಾ ಅಲಂಗಾರು ಮುಖ್ಯ ಅತಿಥಿಯಾಗಿದ್ದರು. ಆದಿದ್ರಾವಿಡ ಯುವಶಕ್ತಿ ಬೆದ್ರದ ಅಧ್ಯಕ್ಷ ರಾಜು ದರೆಗುಡ್ಡೆ, ಸಂಚಾಲಕ ಭಾಸ್ಕರ್, ಪ್ರಧಾನ ಸಂಘಟನಾ ಕಾರ್ಯದರ್ಶಿ ಪುರುಷೋತ್ತಮ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
