ಬಂಟ್ವಾಳ : ಅಮ್ಮುಂಜೆ ಗ್ರಾಮದ ಬೆಂಜನಪದವುನಲ್ಲಿ ನಿರ್ಮಾಣವಾಗುತ್ತಿರುವ ಅಲ್ಪಸಂಖ್ಯಾತರ ಇಲಾಖೆಯ ಹಾಸ್ಟೆಲ್ ಕಟ್ಟಡ ಕಾಮಗಾರಿ ಅಪಾಯಕಾರಿ ಗುಡ್ಡದ ಪಕ್ಕದಲ್ಲಿರುವ ಹಿನ್ನೆಲೆಯಲ್ಲಿ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದ್ದು, ಆದರೆ ಕಾಮಗಾರಿ ಮಾತ್ರ ನಡೆಯುತ್ತಿದೆ ಎಂದು ಆರೋಪಿಸಿ ಬೆಂಜನಪದವು ಕದಂಬ ಮನೆ ನಿವಾಸಿ ಜಿ.ಶಂಕರ ಶೆಟ್ಟಿ ಅವರು ಬಂಟ್ವಾಳ ಶಾಸಕರು ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ತನ್ನ ವರ್ಗ ಭೂಮಿ ಹಾಗೂ ಅದಕ್ಕೆ ಸಂಬಂಧಿಸಿದ ರಸ್ತೆಯನ್ನು ಅಗೆದು ನಿರ್ಮಿಸುತ್ತಿರುವ ಅಲ್ಪಸಂಖ್ಯಾತರ ಇಲಾಖೆಯ ಹಾಸ್ಟೆಲ್ ಕಾಮಗಾರಿಯು ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ತಾನು ಲೋಕೋಪಯೋಗಿ ಇಲಾಖೆಗೆ ಮಾಡಿದ ಮನವಿಯಂತೆ ಗುಡ್ಡವನ್ನು ಅಗೆದ ಕಾರಣ ೧೦ ಮೀ. ಎತ್ತರದ ಗುಡ್ಡ ಕುಸಿಯುವ ಭೀತಿಯಲ್ಲಿದೆ ಎಂದು ಲೋಕೋಪಯೋಗಿ ಇಲಾಖೆಯು ಪತ್ರ ನೀಡಿದೆ.
ಬಂಟ್ವಾಳ ಲೋಕೋಪಯೋಗಿ ಇಲಾಖೆಯ ಬಂಟ್ವಾಳ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರು ಅವರು ಪರಿಶೀಲನೆ ನಡೆಸಿ ಗುಡ್ಡ ಕುಸಿಯುವ ಸ್ಥಿತಿಯಲ್ಲಿರುವ ಕುರಿತು ಮಂಗಳೂರು ಕಾರ್ಯನಿರ್ವಾಹಕ ಎಂಜಿನಿಯರ್ಗೆ ವರದಿ ನೀಡಿದ್ದರು.ಅದರಂತೆ ಅವರು, ಅಲ್ಪಸಂಖ್ಯಾತರ ಇಲಾಖೆಗೆ ಕೇಳಿದಾಗ ಕಾಮಗಾರಿ ಸ್ಥಗಿತಗೊಂಡಿರುವ ಮಾಹಿತಿ ನೀಡಿತ್ತು. ಆದರೂ ಪ್ರಸ್ತುತ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಪರಿಶೀಲನೆ ನಡೆಸುಂತೆ ಅವರು ಶಾಸಕರು ಹಾಗೂ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
