ಮಂಗಳೂರು: ಇಡೀ ರಾಜ್ಯಕ್ಕೆ ರಸಗೊಬ್ಬರವನ್ನು ಪೂರೈಸುತ್ತಿದ್ದ ಮಂಗಳೂರು ರಸಗೊಬ್ಬರ ಕಾರ್ಖಾನೆ ಲಾಕ್ ಔಟ್ ಆಗುತ್ತಾ ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಕಳೆದ 42 ವರ್ಷಗಳಿಂದ ರಾಜನಂತೆ ಮೆರೆದಿದ್ದ ಎಂಸಿಎಫ್ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಈ ಮೂಲಕ ಬರೋಬ್ಬರಿ ಐದು ಸಾವಿರ ಕಾರ್ಮಿಕರು ಬೀದಿಗೆ ಬೀಳುವಂತಾಗಿದ್ದು, ಎಂಸಿಎಫ್ ಇತಿಹಾಸದ ಪುಟ ಸೇರೋಕೆ ಕ್ಷಣಗಣನೆ ಆರಂಭವಾಗಿದೆ. ಅಲ್ಲದೇ ಮಲ್ಯ ಸಾಮ್ರಾಜ್ಯದ ಮತ್ತೊಂದು ಅಧ:ಪತನಕ್ಕೆ ತವರಲ್ಲೇ ವೇದಿಕೆ ಸಿದ್ಧಗೊಂಢಿದೆ.
1972ರಲ್ಲಿ ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಎಂಸಿಎಫ್ ಅನ್ನೋ ರಸಗೊಬ್ಬರ ಉತ್ಪಾದನಾ ಕಾರ್ಖಾನೆ ತಲೆಯೆತ್ತಿ ನಿಂತಿತ್ತು. ಈ ವೇಳೆ ನೇರವಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಒಡೆತನದಲ್ಲಿದ್ದ ಕಾರ್ಖಾನೆ 1990ರ ಹೊತ್ತಿಗೆ ಒಂದಷ್ಟು ನಷ್ಟದ ಸುಳಿಗೆ ಸಿಕ್ಕಿ ಹಾಕಿಕೊಂಡಿತ್ತು. ಈ ವೇಳೆ ಜಿಲ್ಲೆಯವರೇ ಆದ ಬಿಲಿಯನ್ ಡಾಲರ್ ಮದ್ಯದ ದೊರೆ ವಿಜಯ ಮಲ್ಯ ಒಡೆತನದ ಯುಬಿ ಗ್ರೂಫ್ ಎಂಸಿಎಫ್ ಕಂಪೆನಿಯನ್ನು ಖರೀದಿಸಿತ್ತು. ಈ ಮೂಲಕ ಶೇ.30ರಷ್ಟು ಪಾಲುದಾರಿಕೆಯನ್ನು ವಿಜಯ್ ಮಲ್ಯ ಹೊಂದಿದ್ರೆ ಉಳಿದವುಗಳು ಕೇಂದ್ರ ಸರ್ಕಾರದ ಪಾಲುದಾರಿಕೆಯಲ್ಲಿತ್ತು. ಆದ್ರೆ ಇದೀಗ ಎಂಸಿಎಫ್ ತನ್ನ ಉತ್ಪಾನೆಯನ್ನ ಸ್ಥಗಿತಗೊಳಿಸೋ ಮೂಲಕ ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ ಇತಿಹಾಸದ ಪುಟ ಸೇರಿದೆ.
ಉತ್ಪಾದನೆ ಸ್ಥಗಿತಕ್ಕೆ ಕಾರಣ ಏನು…?
2011ರಲ್ಲಿ ಅಂದಿನ ಯುಪಿಎ ಸರ್ಕಾರ ನಾಫ್ತಾ ಅನ್ನೋ ಇಂಧನವನ್ನ ಆಧರಿಸಿ ಯುರಿಯಾ ಉತ್ಪಾದಿಸೋ ಕಾರ್ಖಾನೆಗಳಿಗೆ ಒಂದು ಆದೇಶ ನೀಡಿತ್ತು. ಇದರಂತೆ ದೇಶದಲ್ಲಿ ನಾಫ್ತಾ ಆಧರಿಸಿ ಕೈಗಾರಿಕೆಗಳನ್ನ ನಡೆಸೋ ಎಲ್ಲಾ ಉದ್ಯಮಗಳನ್ನ ಗ್ಯಾಸ್ ಆಧರಿತ ಉತ್ಪಾದನಾ ಘಟಕಗಳಿಗೆ ಬದಲಿಸೋವಂತೆ ಸೂಚಿಸಿತ್ತು. ಇದೇ ಕಾರಣಕ್ಕೆ ನಾಫ್ತಾದ ಮೇಲೆ ನೀಡಲಾಗಿದ್ದ ಸಬ್ಸಿಡಿಯನ್ನ ಕೂಡ ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು. ಹೀಗಾಗಿ ದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರೋ ಒಟ್ಟು 40 ರಸಗೊಬ್ಬರ ಕಾರ್ಖಾನೆಗಳಲ್ಲಿ ಗ್ಯಾಸ್ ಆಧಾರಿತ ಉತ್ಪಾದನಾ ಘಟಕವನ್ನ ಸ್ಥಾಪಿಸೋಕೆ ಸರ್ಕಾರ ಸ್ಪಷ್ಟ ಸೂಚನೆಯನ್ನು ರವಾನಿಸಿತ್ತು. ಆದ್ರೆ ಈ ಯೋಜನೆ ಅನುಷ್ಠಾನವಾಗಬೇಕಾದ್ರೆ ಎಲ್ಲಾ ಕಾರ್ಖಾನೆಗಳಲ್ಲೂ ಗ್ಯಾಸ್ ಆಧರಿತ ಉತ್ಪಾದನಾ ಘಟಕಗಳನ್ನ ನಿರ್ಮಿಸಬೇಕು.
ಹೀಗಾಗಿ ಮಂಗಳೂರು ರಸಗೊಬ್ಬರ ಕಾರ್ಖಾನೆಯಲ್ಲೂ ಬರೋಬ್ಬರಿ 350 ಕೋಟಿ ರೂಪಾಯಿ ವೆಚ್ಚದಲ್ಲಿ ಈ ವ್ಯವಸ್ಥೆ ಕಲ್ಪಿಸಲಾಯಿತಾದರೂ ಇದರ ಅನುಷ್ಠಾನ ಮಾತ್ರ ಇಂದಿಗೂ ಆಗಿಲ್ಲ. ಗ್ಯಾಸ್ ಯೋಜನೆ ಜಾರಿಗೆ ಬರಬೇಕಾದ್ರೆ ಎಂಎಸಿಎಫ್ ಗೆ ಗ್ಯಾಸ್ಪೈ ಪ್ ಮೂಲಕ ಗ್ಯಾಸ್ ಪೂರೈಕೆಯಾಗಬೇಕು. ಇದೇ ಕಾರಣಕ್ಕೆ ಗೇಲ್ ಇಂಡಿಯಾ ಅನ್ನೋ ಸಂಸ್ಥೆ ಈಗಾಗಲೇ ಎಂಸಿಎಫ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಆದ್ರೆ ಗೇಲ್ ಪೈಪ್ ಲೈನ್ ಸದ್ಯ ಕೇರಳದ ಕೊಚ್ಚಿವರೆಗೆ ಮಾತ್ರ ತಲುಪಿದ್ದು, ಕೆಲವೊಂದು ಕಡೆ ಭೂಮಿ ಒತ್ತುವರಿಯಾಗದ ಕಾರಣ ಯೋಜನೆ ಅರ್ಧದಲ್ಲೇ ನಿಂತುಹೋಗಿದೆ. ಹೀಗಾಗಿ ಕೇಂದ್ರ ಸರ್ಕಾರ ಕೊಟ್ಟಿರೋ ಗಡುವು ಮುಕ್ತಾಯವಾಗಿದ್ದು, ಅನಿವಾರ್ಯವಾಗಿ ಉತ್ಪಾದನೆ ಸ್ಥಗಿತಗೊಳಿಸಬೇಕಾಗಿ ಬಂದಿದೆ.
ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ!
ಅಸಲಿಗೆ ಎಂಸಿಎಫ್ ಅನ್ನೋ ಈ ರಾಜ್ಯದ ಭಾರೀ ದೊಡ್ಡ ಕಾರ್ಖಾನೆಯೊಂದು ಬೀಗ ಜಡಿಸಿಕೊಳ್ತಾ ಇದೆ ಅಂದಾಗ ಸಹಜವಾಗಿಯೇ ಅಲ್ಲಿ ನಷ್ಟ ಅನ್ನೋ ಪೆಡಂಭೂತ ಅವರಿಸಿದೆ ಅಂತ ಎಲ್ಲರೂ ಅಂದುಕೊಳ್ಳಬಹುದು. ಇನ್ನು ವಿಜಯ ಮಲ್ಯರ 30ಶೇ. ಶೇರು ಹೊಂದಿರೋ ಎಂಸಿಎಫ್ ಬಾಗಿಲು ಮುಚ್ಚುತ್ತೆ ಅಂದಾಗ ಒಂದು ಹಂತಕ್ಕೆ ಎಲ್ಲರೂ ಇದ್ರ ಹಿಂದೆ ನಷ್ಟವೇ ಕಾರಣ ಅಂತ ಅಂದುಕೊಳ್ತಾರೆ. ಇದಕ್ಕೆ ಕಾರಣ ಮದ್ಯದ ದೊರೆ ಮಲ್ಯ ಈಗಾಗಲೇ ಕಿಂಗ್ ಫಿಶರ್ ಏರ್
ಲೈನ್ ಮೂಲಕ ದಿವಾಳಿ ಹಂತವನ್ನ ತಲುಪಿರೋದು. ಆದ್ರೆ ಮಂಗಳೂರು ರಸಗೊಬ್ಬರ ಕಾರ್ಖಾನೆ ಮುಚ್ಚೋಕೆ ಕಾರಣವಾಗಿರೋದು ಯಾವುದೇ ರೀತಿಯ ನಷ್ಟದ ಕಾರಣವಲ್ಲ. ಅಸಲಿಗೆ ಎಂಸಿಎಫ್ ವಾರ್ಷಿಕ 3.8ಲಕ್ಷ ಮೆಟ್ರಿಕ್ ಟನ್ ಯೂರಿಯಾವನ್ನ ಉತ್ಪಾದಿಸ್ತಾ ಇದ್ದು, ವರ್ಷಕ್ಕೆ 3500 ಸಾವಿರ ಕೋಟಿ ವಹಿವಾಟು ನಡೆಸ್ತಿದೆ. ಈಗಾಗಲೇ ದೇಶ-ವಿದೇಶಗಳಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ಪಡೆಯೋ ಮೂಲಕ ಭಾರತದ ಅತ್ಯಂತ ಶ್ರೇಷ್ಠ ಸಂಸ್ಥೆ ಅನ್ನೋ ಹೆಗ್ಗಳಿಕೆಗೂ ಎಂಸಿಎಫ್ ಪಾತ್ರವಾಗಿದೆ.
5000 ಸಾವಿರ ಕಾರ್ಮಿಕರು ಬೀದಿಗೆ ಬಿದ್ದರು!
ಎಂಸಿಎಫ್ ಕಾರ್ಖಾನೆಯನ್ನು ನಂಬಿಕೊಂಡು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಐದು ಸಾವಿರಕ್ಕೂ ಹೆಚ್ಚು ಮಂದಿ ಬದುಕುತ್ತಿದ್ದಾರೆ. ಇವರಲ್ಲಿ ಎರಡು ಸಾವಿರ ಮಂದಿ ಕಂಪನಿ ಉದ್ಯೋಗಿಗಳಾಗಿದ್ದರೆ ಉಳಿದವರು ಗುತ್ತಿಗೆ ಆಧಾರದಲ್ಲಿ ದುಡೀತಾ ಇರೋ ಜನ. ಮಂಗಳೂರಷ್ಟೇ ಅಲ್ಲದೇ ದೇಶದ ಮೂಲೆ ಮೂಲೆಗಳಿಂದ ಇಲ್ಲಿಗೆ ಬಂದಿರೋ ಬಹುತೇಕ ಜನರು ಈ ದೈತ್ಯ ಕಂಪೆನಿಯನ್ನ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ ಸದ್ಯ ಎಂಸಿಎಫ್ ಮುಚ್ಚಿ ಹೋಗುತ್ತೆ ಅಂಧಾಗ ಸಹಜವಾಗಿಯೇ ಇವ್ರಲ್ಲಿ ಆತಂಕ ಮನೆ ಮಾಡಿದೆ. ಕಂಪೆನಿ ಮುಚ್ಚದ್ರೆ ನಮ್ಮೆಲ್ಲರ ಜೀವನ ಬೀದಿಗೆ ಬೀಳುತ್ತೆ ಅಂತ ಆತಂಕ ವ್ಯಕ್ತಪಡಿಸ್ತಾರೆ. ಅಲ್ಲದೇ ಎಂಸಿಎಫ್ ಮುಚ್ಚೂಕೆ ನೇರವಾಗಿ ಸರ್ಕಾರವೇ ಕಾರಣ ಅನ್ನೋದು ಕೂಡ ಇಲ್ಲಿನ ಸಿಬ್ಬಂದಿಯ ಆರೋಪ. ಕಂಪೆನಿ ಎಲ್ಲಾ ರೀತಿಯ ಸೌಲಭ್ಯಗಳನ್ನ ಈ ಘಟಕದಲ್ಲಿ ಮಾಡಿಕೊಂಡಿದೆ. ನಾಫ್ತಾವನ್ನ ಬಿಟ್ಟು ಗ್ಯಾಸ್ ಸೌಲಭ್ಯಕ್ಕೂ ಕೋಟ್ಯಾಂತರ ರೂಪಾಯಿ ಸುರಿದಿದೆ. ಆದ್ರೆ ಕೇಂದ್ರ ಸರ್ಕಾರ ಗ್ಯಾಸ್ ಪೂರೈಸದಿದ್ರೆ ಏನು ಮಾಡೋದು ಅನ್ನೋದು ಸಿಬ್ಬಂದಿಯ ಆರೋಪ. ಹೀಗಾಗಿಯೇ ಸದ್ಯ ಜನ ಬೀದಿಗೆ ಬೀಳೋದಂತೂ ಗ್ಯಾರಂಟಿ.
ದೇಶಕ್ಕೆ ಎಂಸಿಎಫ್ ಎಷ್ಟು ಅಗತ್ಯ?
ಇನ್ನು ಈ ಮಧ್ಯೆ ಎಂಸಿಎಫ್ ಉತ್ಪಾದಿಸೋ ಯೂರಿಯಾ ರಸಗೊಬ್ಬರದ ವಿಚಾರಕ್ಕೆ ಬಂದ್ರೆ ಈ ದೇಶದ 90 ಶೇ. ರೈತ ತನ್ನ ಕೃಷಿ ಚಟುವಟಿಕೆಯಲ್ಲಿ ಬಳಸೋದು ಇದೇ ಯೂರಿಯಾವನ್ನ. ಹೀಗಾಗಿ ಇಡೀ ದೇಶಕ್ಕೆ ಸಾಕಷ್ಟು ಪ್ರಮಾಣದ ಯೂರಿಯಾದ ಅವಶ್ಯಕತೆಯಿದೆ. ಇದೇ ಕಾರಣಕ್ಕೆ ಅನ್ನದಾತನಿಗೆ ಅನುಕೂಲವಾಗಲೀ ಅಂತ ದೇಶಾದ್ಯಂತ 40ಕ್ಕೂ ಅಧಿಕ ಯೂರಿಯಾ ಉತ್ಪಾದನ ಕಾರ್ಖಾನೆಗಳು ಕಾರ್ಯಾಚರಿಸ್ತಿವೆ. ಕೇವಲ ದ.ಕ ಭಾರತದಲ್ಲಿ ಮೂರು ಕಾರ್ಖಾನೆಗಳಿದ್ದು, ಇದ್ರಲ್ಲಿ ಮಂಗಳೂರಿನ ಎಂಸಿಎಫ್ ಕೂಡ ಒಂದು. ಇನ್ನು ದುರಂತ ಅಂದರೆ ದೇಶದಲ್ಲಿ 40 ಕಾರ್ಖಾನೆಗಳಿದ್ರೂ ಇಡೀ ದೇಶಕ್ಕೆ ಬೇಕಾಗಿರೋ ಸಂಪೂರ್ಣ ಪ್ರಮಾಣದ ಯೂರಿಯಾವನ್ನ ಪೂರೈಕೆ ಮಾಡೋಕೆ ಸಾಧ್ಯವಾಗುತ್ತಿಲ್ಲ. ಸದ್ಯ ದೇಶದ ರೈತನಿಗೆ ಬೇಕಾಗಿರೋ 60ಶೇ. ಯೂರಿಯಾವಷ್ಟೇ ಈ ದೇಶದಲ್ಲಿ ಪೂರೈಕೆಯಾಗ್ತಿದ್ರೆ ಉಳಿದವುಗಳನ್ನ ಬೇರೆ ದೇಶಗಳಿಂದ ರಫ್ತು ಮಾಡಿಕೊಳ್ಳಲಾಗ್ತಿದೆ. ಇನ್ನು ಮಂಗಳೂರು ರಸಗೊಬ್ಬರ ಕಾರ್ಖಾನೆಯ ಬಗ್ಗೆ ಹೇಳೋದಾದ್ರೆ ಇದು ದೇಶದ ಐದು ರಾಜ್ಯಗಳಿಗೆ ಸದ್ಯ ಯೂರಿಯಾವನ್ನ ಪೂರೈಕೆ ಮಾಡ್ತಿದೆ. ಕೇರಳ, ತಮಿಳುನಾಡು, ಆಂದ್ರಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಯೂರಿಯಾವನ್ನ ಪೂರೈಕೆ ಮಾಡುತ್ತಿದೆ. ಹೀಗಾಗಿ ಎಂಸಿಎಫ್ ಕಾರ್ಖಾನೆ ಈ ದೇಶದ 15 ಶೇ.ದಷ್ಟು ಯೂರಿಯಾವನ್ನ ಪೂರೈಕೆ ಮಾಡ್ತಾ ಇರೋದು ಸ್ಪಷ್ಟ. ಇನ್ನು ಕೇವಲ ಕರ್ನಾಟಕವಷ್ಟೇ ಅಲ್ಲದೇ ಇಡೀ ದೇಶದ ರೈತರಿಗೆ ಯೂರಿಯಾದ ಅಗತ್ಯತೆ ಎಷ್ಟಿದೆ ಅನ್ನೋದು ಕೂಡ ಎಲ್ಲರಿಗೂ ಗೊತ್ತಿರೋ ವಿಚಾರವೇ ಬಿಡಿ. ಒಂದು ಕಾಲದಲ್ಲಿ ಇದೇ ರಸಗೊಬ್ಬರಕ್ಕಾಗಿ ಹಾವೇರಿಯಲ್ಲಿ ನಡೆದಿರೋ ಗೋಲಿಬಾರ್ ಪ್ರಕರಣವನ್ನ ಗಮನಿಸಿದ್ರೆ ಈ ರಾಜ್ಯಕ್ಕೆ ಇಂತಹ ರಸಗೊಬ್ಬರ ಕಾರ್ಖಾನೆಗಳ ಅನಿವಾರ್ಯತೆ ಎಷ್ಟಿದೆ ಅನ್ನೋದು ಗೊತ್ತಾಗುತ್ತೆ.
-ಶಶಿಧರ ಬಂಗೇರ, ಬೆಳ್ಳಾಯರು












