ಕೈಕಂಬ: ಪೊಳಲಿಗೆ ಹತ್ತಿರದ ಬಡಕಬೈಲು ಮಣಿಕಂಠಪರದಲ್ಲಿ ಶ್ರೀ ಮಣಿಕಂಠ ಭಜನಾ ಮಂದಿರದ 14ನೇ ವಾರ್ಷಿಕ ಭಜನಾ ಸಂಕೀರ್ತನೆ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಜ. 4 ಮತ್ತು 5ರಂದು ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮಿಯವರ ಆಶೀರ್ವಚನದೊಂದಿಗೆ ನಡೆಯಿತು.
ದುರ್ಗಾವಾಹಿನಿ, ವಿಹಿಂಪ ರಾಜ್ಯ ಸಂಯೋಜಕಿ ವಿದ್ಯಾ ಮಲ್ಯ ಭಜನಾ ಸಂಕೀರ್ತನೆ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿ, ಈಗ ಹಳೆಯ ಭಕ್ತಿ ಶ್ರದ್ಧೆ ಅಳಿಸಿ ಹೋಗಿದೆ. ಹೊಸತನ ಬಂದಿದೆ ಎಂದು ಹೇಳುತ್ತಿದ್ದರೂ, ಆ ಬಗ್ಗೆ ನಮ್ಮಲ್ಲಿ ಸ್ಪಷ್ಟತೆ ಇಲ್ಲ. ಈ ನೆಲದಲ್ಲಿ ಹಳೆಯ ಆಚಾರ-ವಿಚಾರ ಗಟ್ಟಿಯಾಗಿ ಉಳಿದಿರುವುದೇ ಇದಕ್ಕೆ ಮುಖ್ಯ ಕಾರಣ. ಭಜನೆಯ ಬದಲಿಗೆ ನಾಟಕವೋ ಅಥವಾ ಇತರ ಯಾವುದೋ ಒಂದು ಕಾರ್ಯಕ್ರಮ ನಡೆಯುತ್ತಿದ್ದರೆ ಜನ ತುಂಬಿ ಹೋಗುತ್ತಿತ್ತು. ವಾಸ್ತವ ಜಗತ್ತಿನಲ್ಲಿ ಎಲ್ಲ ಖರೀದಿಗೆ ನಾವು ಬೆಲೆ ನೀಡಬೇಕಿದ್ದರೂ, ಭಗವಂತ ನಮಗೆ ನೀಡಿರುವ ಸುಖ-ನೆಮ್ಮದಿಗೆ ಬೆಲೆ ನೀಡಬೇಕಾಗಿಲ್ಲ. ಭಜನೆ ಅಥವಾ ಶ್ರದ್ಧಾಭಕ್ತಿಯೇ ಭಗವಂತನಿಗೆ ನಾವು ನೀಡುವ ಬೆಲೆಯಾಗಿದೆ. ಭಗವಂತನ ಸಂಪರ್ಕಿಸಲು ಭಜನೆ ಸರಳ, ಸುಲಭ ಮಾರ್ಗವಾಗಿದೆ. ಇಂತಹ ಕಾರ್ಯಕ್ರಮ ಪ್ರತಿ ಮನೆಯಲ್ಲೂ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಅಡ್ಡೂರು ಮೂಖ್ಯಪ್ರಾಣ ದೇವಸ್ಥಾನದ ಅಧ್ಯಕ್ಷ ಬಾಲಕೃಷ್ಣ ರಾವ್ ನೂಯಿ, ಬೆಂಜನಪದವು ಭದ್ರಕಾಳಿ ದೇವಸ್ಥಾನದ ದೇವಿ ಪಾತ್ರಿ ರಮೇಶ್ ಪೊಳಲಿ ಶ್ರೀ ರಾಜರಾಜೇಶ್ವರೀ ಭಜನಾಮಂಡಳಿಯ ಸಂಚಾಲಕ ವೆಂಕಟೇಶ್ ನಾವಡ, ಬಾಬು ಗುರುಸ್ವಾಮಿ, ಮಣಿಕಂಠ ಭಜನಾ ಮಂಡಳಿ ಅಧ್ಯಕ್ಷ ಮಹಬಲ ಸುವರ್ಣ ,ಮಣಿಕಂಠ ಭಜನಾ ಮಂಡಳಿಯ ಸಂಚಾಲಕ ಜಯಂತ, ದಯಾನಂದ ಹಾಗೂ ಮಣಿಕಂಠ ಭಜನಾ ಮಂದಿರದ ಸದಸ್ಯರು ಉಪಸ್ಥಿತರಿದ್ದರು.
