ಬಂಟ್ವಾಳ: ಇಲ್ಲಿಗೆ ಸಮೀಪದ ಎಸ್ವಿಎಸ್ ಕಾಲೇಜ್ ವಿದ್ಯಾರ್ಥಿನಿಯೊಬ್ಬಳು ಮನೆಗೆ ತೆರಳುತ್ತಿದ್ದ ವೇಳೆ ಆಕೆಯನ್ನು ಹಿಂಬಾಲಿಸಿದ ಕಾಮುಕ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಬಂಟ್ವಾಳ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಜೈಲಿನ ದಾರಿ ತೋರಿಸಿದ್ದಾರೆ. ಸಂಗಬೆಟ್ಟು ಕೆರೆಬಳಿಯ ನಿವಾಸಿ ಸಿರಾಜ್ ಅಲಿಯಾಸ್ ಸಿರಾಜುದ್ದೀನ್(27) ಪ್ರಕರಣದ ಆರೋಪಿಯಾಗಿದ್ದಾನೆ.
ಬಂಟ್ವಾಳ ವೆಂಕಟರಮಣ ಕಾಲೇಜಿನ 18ರ ಹರೆಯದ ಪದವಿ ವಿದ್ಯಾರ್ಥಿನಿ ಕಳೆದ ಸೋಮವಾರ ಸಂಜೆ ಕಾಲೇಜ್ ಮುಗಿಸಿ ಸಂಗಬೆಟ್ಟು ಬಸ್ ನಿಲ್ದಾಣದಲ್ಲಿ ಇಳಿದು ಮನೆಗೆ ಹೋಗುವಾಗ ಪಂಜಳ ಕ್ರಾಸ್ ಎಂಬಲ್ಲಿ ಪಿಕ್ಅಪ್ ವಾಹನದಲ್ಲಿ ಬಂದ ಸ್ಥಳೀಯ ನಿವಾಸಿ ಸಿರಾಜ್ ಆಕೆಯನ್ನು ತಡೆದು ನಿಲ್ಲಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ವಿದ್ಯಾರ್ಥಿನಿ ಬೊಬ್ಬೆ ಹಾಕಿದ್ದು, ಅದನ್ನು ಕೇಳಿ ಆಕೆಯ ಸೋದರಮಾವ ಸ್ಥಳಕ್ಕೆ ಆಗಮಿಸಿದ್ದರು. ಅವರನ್ನು ಕಂಡು ಸಿರಾಜುದ್ದೀನ್ ಅಲ್ಲಿಂದ ಪರಾರಿ ಯಾಗಿದ್ದ.ಪರಾರಿಯಾಗುವಾಗ ತನ್ನ ಮೇಲೆ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿರುವುದಾಗಿ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾಳೆ. ಬಂಟ್ವಾಳ ಠಾಣಾಧಿಕಾರಿ ನಾಗರಾಜ್ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ

