ಗುರುಪುರ : ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಡಿ. 3ರಂದು ಗುರುಪುರ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ, ಸನ್ಮಾನ ಹಾಗೂ ಬಹುಮಾನ ವಿತರಣೆ ಸಮಾರಂಭ ಜರುಗಿತು. ಡಾ. ಭರತ್ ಶೆಟ್ಟಿ ಅಧ್ಯಕ್ಷೀಯ ಭಾಷಣ ಮಾಡುತ್ತ, ರ್ಯಾಂಕ್ ಗಳಿಸುವುದೊಂದೇ ವಿದ್ಯಾರ್ಥಿಗಳ ಗುರಿಯಾಗಿರದೆ, ವಿದ್ಯಾರ್ಥಿ ಜೀವನದಿಂದಲೇ ನಿಮ್ಮನ್ನು ಗುರುತಿಸಬಲ್ಲ ಪ್ರವೃತ್ತಿಯೊಂದು ಬೆಳೆಸಿಕೊಳ್ಳಿ. ಇತರ ಕೌಶಲ್ಯದೊಂದಿಗೆ `ಸಾಫ್ಟ್ ಸ್ಕಿಲ್’ ಬೆಳೆಸಿಕೊಳ್ಳಿ. ಜೊತೆಗೆ ನಿಮ್ಮ ಆಯ್ಕೆಯ ವಲಯದಲ್ಲಿ ಇನ್ನೋವೇಟಿವ್(ಹೊಸದರ ಅನ್ವೇಷಣೆ) ಆಲೋಚನೆಗಳಿಗೆ ಆದ್ಯತೆ ನೀಡಿ ಎಂದರು.
ಸನ್ಮಾನಿತ ನಿವೃತ್ತ ಪ್ರಾಂಶುಪಾಲ(ಶಿಕ್ಷಣ ಇಲಾಖೆ ಪ್ರಭಾರ ಉಪ-ನಿರ್ದೇಶಕ) ಡಾ. ವಾಸುದೇವ ಕಾಮತ್ರ ಮಾತಿಗೆ ಪ್ರತ್ಯುತ್ತರವಾಗಿ ಭ್ರಷ್ಟಾಚಾರದ ಬಗ್ಗೆ ಉತ್ತರಿಸಿದ ಶಾಸಕರು, ಭ್ರಷ್ಟಾಚಾರ ವಿಷಯದಲ್ಲಿ ಜನಪ್ರತಿನಿಧಿಗಳತ್ತ ಮಾತ್ರ ಬೊಟ್ಟು ಮಾಡಿ ತೋರಿಸಬೇಕಿಲ್ಲ. ಇಲಾಖಾ ಮಟ್ಟದಲ್ಲೂ(ಅಧಿಕಾರಿಗಳಿಂದ) ಭ್ರಷ್ಟಾಚಾರ ನಡೆಯುತ್ತಿದೆ. ಆದ್ದರಿಂದ ಎಲ್ಲ ಕಡೆಯಿಂದಲೂ ಇದನ್ನು ಹತ್ತಿಕ್ಕುವ ಕೆಲಸವಾಗಬೇಕು ಎಂದರು.
ಸನ್ಮಾನಕ್ಕುತ್ತವಾಗಿ ಡಾ. ವಾಸುದೇವ ಕಾಮತ್ ಮಾತನಾಡಿ, ಹಿಂದಿನ ಐದು ವರ್ಷದಲ್ಲಿ ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಗಾಗಿ ತಾನು ಕೈಗೊಂಡಿರುವ ಕೆಲಸಗಳಲ್ಲಿ ಸರ್ಕಾರ, ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ. ಶಾಲಾ ಅಭಿವೃದ್ಧಿ ನನ್ನ ಕನಸಾಗಿದ್ದು, ಕಂಪ್ಯೂಟರ್ ತರಗತಿಗೆ ಉಪನ್ಯಾಸಕರ ಹುದ್ದೆ ಹಾಗೂ ಕಾಲೇಜು ಸಭಾಂಗಣಕ್ಕೆ ದಿ. ಪದ್ಮನಾಭ ಆಳ್ವರ ಹೆಸರಿಟ್ಟು ಸದ್ಬಳಕೆ ಮಾಡುವ ಕನಸು ಕಂಡಿದ್ದೇನೆ ಎಂದರು.
ದಕ ಜಿಪಂ ಸದಸ್ಯ ಯು ಪಿ ಇಬ್ರಾಹಿಂ ಮಾತನಾಡಿ, ವಾಸುದೇವ ಕಾಮತರು ವಿದ್ಯಾರ್ಥಿಗಳ ಸಹಿತ ಜನಪ್ರತಿನಿಧಿಗಳಿಗೂ ಪ್ರಾಂಶುಪಾಲರಂತೆ ಇದ್ದರು. ಭ್ರಷ್ಟಾಚಾರ ರಾಜಕಾರಣಿಗಳಲ್ಲೇ ಉಳಿದುಕೊಂಡಿದೆ ಎಂದರೆ ತಪ್ಪಾಗುತ್ತದೆ. ಇಲಾಖಾ ಅಧಿಕಾರಿಗಳಲ್ಲೂ ಭ್ರಷ್ಟರಿದ್ದಾರೆ. ಭ್ರಷ್ಟರಿಂದ ಉತ್ತಮರಿಗೂ ಅಪವಾದ ತಪ್ಪಿದ್ದಲ್ಲ. ಉತ್ತಮರ ಗುರುತಿಸುವ ಸೂಕ್ಷ್ಮ ಕೆಲಸವಾಗಬೇಕು ಎಂದರು.
ವೇದಿಕೆಯಲ್ಲಿ ವಿಹಿಂಪ ಗುರುಪುರ ಪ್ರಖಂಡ ಅಧ್ಯಕ್ಷ ವಿಷ್ಣು ಕಾಮತ್, ತಾಪಂ ಸದಸ್ಯ ಸಚಿನ್ ಅಡಪ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಶವಂತ ಆಳ್ವ, ಪ್ರೌಢ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಕಾವ, ಗುರುಪುರ ಗ್ರಾಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ ಎಂ ಉದಯ ಭಟ್, ಸದಸ್ಯರಾದ ಸೇಸಮ್ಮ ಮತ್ತು ರಾಜೇಶ್ ಸುವರ್ಣ, ಸಮಿತಿ ಸದಸ್ಯರಾದ ಸೋಮಯ್ಯ, ಜಿ ಕೆ ನರಸಿಂಹ ಪೂಜಾರಿ, ಜಲಜಾ, ಕೂಸಪ್ಪ ಮಾಸ್ತರ್ ಮತ್ತಿತರರು ಇದ್ದರು.
ಉಪನ್ಯಾಸಕ ಕೇಶವ ಪೂಜಾರಿ ಸ್ವಾಗತಿಸಿದರು. ಉಪನ್ಯಾಸಕಿ ರಶ್ಮಿ ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ರೂಪಾ ಡಿ ಹಾಗೂ ಕಾಲೇಜು ಪ್ರಭಾರ ಪ್ರಾಂಶುಪಾಲೆ ವಯೋಲಾ ಸಿಕ್ವೇರ ವರದಿ ವಾಚಿಸಿದರು. ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ಸಮಾರಂಭದಲ್ಲಿ ಶಾಲಾ ಶಿಕ್ಷಕರು, ಸಿಬ್ಬಂದಿ, ಉಪನ್ಯಾಸಕರು, ವಿದ್ಯಾರ್ಥಿಗಳು, ಪಾಲಕರು ಇದ್ದರು.
———-





