ಮಂಗಳೂರು: ರೌಡಿಶೀಟರ್ ಒಬ್ಬ ತನ್ನ ತಂಡದೊಂದಿಗೆ ಗ್ರಾಮ ಪಂಚಾಯತ್ ಸದಸ್ಯರ ಮನೆಗೆ ನುಗ್ಗಿ ತಲವಾರ್ ದಾಳಿ ನಡೆಸಿದ ಪರಿಣಾಮ ಸದಸ್ಯ ಮತ್ತವರ ಪತ್ನಿ ಗಂಭೀರ ಗಾಯಗೊಂಡಿರುವ ಘಟನೆ ಇಂದು ನಸುಕಿನ ಜಾವ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಮೇರಮಜಲು ಎಂಬಲ್ಲಿ ನಡೆದಿದೆ.
ಮೇರಮಜಲು ನಿವಾಸಿ ಪಂಚಾಯತ್ ಸದಸ್ಯ ಯೋಗೀಶ್ ಪ್ರಭು ಮತ್ತು ಆತನ ಪತ್ನಿ ಶೋಭಾ ಗಾಯಗೊಂಡವರು. ನಸುಕಿನ 4 ಗಂಟೆಯ ವೇಳೆ ಈ ಘಟನೆ ನಡೆದಿದ್ದು ಗಂಭೀರ ಗಾಯಗೊಂಡ ಇಬ್ಬರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರೌಡಿಶೀಟರ್ ಪ್ರಸಾದ್ ಬೆಳ್ಚಾಡ ಮತ್ತು ಆತನ ಜೊತೆ ಇಬ್ಬರು ಸ್ನೇಹಿತರು ಸೇರಿ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಯೋಗೀಶ್ ಪ್ರಭು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಸಾದ್ ಬೆಳ್ಚಾಡ ಮತ್ತು ಅತನ ಇಬ್ಬರು ಸ್ನೇಹಿತರು ಯೋಗೀಶ್ ಪ್ರಭು ಮನೆಗೆ ಬಂದು ಬಾಗಿಲು ತೆರೆಯುವಂತೆ ಕೇಳಿಕೊಂಡಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆ ಮನೆಯೊಳಗೆ ನುಗ್ಗಿ ಏಕಾಏಕಿ ತಲವಾರಿನಿಂದ ಯೋಗೀಶ್ ಮೇಲೆ ಪ್ರಸಾದ್ ಹಲ್ಲೆ ನಡೆಸಿದ್ದಾನೆ. ಜೊತೆಯಲ್ಲಿದ್ದ ಪತ್ನಿ ಶೋಭಾ ಅವರಿಗೂ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಗ್ರಾಮಾಂತರ ಎಸ್.ಐ.ಪ್ರಸನ್ನ ಹಾಗೂ ಸಿಬ್ಬಂದಿ ಗಳು ಭೇಟಿ ನೀಡಿದ್ದು ಪರಿಶೀಲನೆಯನ್ನು ನಡೆಸಿದ್ದಾರೆ.
