ಮೂಡುಬಿದಿರೆ: ಜವನೆರ್ ಬೆದ್ರ, ಸಮುದಾಯ ಆರೋಗ್ಯ ಕೇಂದ್ರ, ಪುರಸಭೆ ಮೂಡುಬಿದಿರೆ, ತಾಲೂಕು ಪತ್ರಕರ್ತರ ಸಂಘ ಮೂಡುಬಿದಿರೆ ಹಾಗೂ ಆಳ್ವಾಸ್ ನರ್ಸಿಂಗ್ ವಿದ್ಯಾರ್ಥಿಗಳ ಸಂಯುಕ್ತ ಆಶ್ರಯದಲ್ಲಿ ಮಲೇರಿಯಾ ವಿರೋಧ ಮಾಸಾಚರಣೆಯ ಪ್ರಚಾರದ ಆರನೇ ಕಾರ್ಯಕ್ರಮವು ಚಾಮುಂಡಿಬೆಟ್ಟ ವ್ಯಾಪ್ತಿಯಲ್ಲಿ ಶುಕ್ರವಾರ ನಡೆಯಿತು.

ಪುರಸಭೆಯ ನೂತನ ಸದಸ್ಯ ನವೀನ್ ಶೆಟ್ಟಿ ಅವರು ಪ್ರಚಾರ ಜಾಥಾಕ್ಕೆ ಚಾಲನೆಯನ್ನು ನೀಡಿದರು. ಪುರಸಭೆಯ ಪರಿಸರ ಅಭಿಯಂತರೆ ಶಿಲ್ಪಾ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಕ ಕುಮಾರ್ ಉಪಸ್ಥಿತರಿದ್ದರು.
ಜವನೆರ್ ಬೆದ್ರ ತಂಡದ ಸದಸ್ಯರು ಚಾಮುಂಡಿಬೆಟ್ಟ ಪರಿಸರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ತೋಡುಗಳಲ್ಲಿ ತುಂಬಿರುವ ತ್ಯಾಜ್ಯಗಳನ್ನು ತೆಗೆದು ಸ್ವಚ್ಛಗೊಳಿಸಿದರು. ಆಳ್ವಾಸ್ ನರ್ಸಿಂಗ್ ವಿದ್ಯಾರ್ಥಿಗಳು ಮನೆ ಮನೆಗೆ ಭೇಟಿ ನೀಡಿ ಮಲೇರಿಯಾ, ಡೆಂಗ್ಯೂ ಬಗ್ಗೆ ಜಾಗೃತಿಯ ಮಾಹಿತಿಯನ್ನು ನೀಡಿದರು ಮತ್ತು ಲಾರ್ವಾ ಸಮೀಕ್ಷೆ ನಡೆಸಿದರು.
ಶಾಮಿಯಾನ ಅಂಗಡಿಯಲ್ಲಿ ರಾಶಿ ಹಾಕಲಾಗಿದ್ದ ಕಬ್ಬಿಣದ ವಸ್ತುಗಳನ್ನು, ನೀರು ತುಂಬಿಕೊಂಡಿದ್ದ ಟಯರುಗಳನ್ನು ಪುರಸಭೆಯ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ತ್ಯಾಜ್ಯಗಳನ್ನು ತೆರವು ಗೊಳಿಸುವಂತೆ ಸೂಚಿಸಿದರು. ಆರೋಗ್ಯ ಇಲಾಖೆಯ ಅಧಿಕಾರಿಗಳು ಆರೋಗ್ಯ ಶಿಕ್ಷಣವನ್ನು ನೀಡಿದರು. ನಂತರ ಮಲೇರಿಯಾದ ಬಗ್ಗೆ ಜಾಗೃತಿ ಮೂಡಿಸುವ ಬೀದಿ ನಾಟಕ ನಡೆಯಿತು.
