ಆಪರೇಶನ್ ಬ್ಲೂಸ್ಟಾರ್ಗೆ ಅಡ್ವಾಣಿ ಬೆಂಬಲವಿತ್ತು: ಅಮರಿಂದರ್ ಸಿಂಗ್ ಆರೋಪ
ಸುದ್ದಿ9ಚಂಡೀಗಡ: ಸಿಖರನ್ನು ಗುರಿಯಾಗಿಸಿ ನಡೆಸಿದ ಆಪರೇಶನ್ ಬ್ಲೂಸ್ಟಾರ್ ಕುರಿತು ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಜೊತೆ ನಡೆಯುತ್ತಿರುವ ವಾಕ್ಸಮರದ ಮಧ್ಯೆ ಈ ಕಾಯರ್ಾಚರಣೆಗೆ ಬಿಜೆಪಿ ಧುರೀಣ ಲಾಲ್ ಕೃಷ್ಣ ಅಡ್ವಾಣಿಯವರ ಬೆಂಬಲವೂ ಇತ್ತು ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡ ಅಮರಿಂದರ್ ಸಿಂಗ್ ಬಿಜೆಪಿಯನ್ನು ವಿವಾದಕ್ಕೆ ಎಳೆದಿದ್ದಾರೆ.
ಅಡ್ವಾಣಿಯವರು ಬರೆದಿರುವ ‘ಮೈ ಕಂಟ್ರಿ, ಮೈ ಲೈಫ್’ ಪುಸ್ತಕದಲ್ಲಿ ಆಪರೇಶನ್ ಬ್ಲೂಸ್ಟಾರ್ಗೆ ಸಂಪೂರ್ಣ ಬೆಂಬಲ ಸೂಚಿಸಿರುವುದಾಗಿ ಅಡ್ವಾಣಿಯವರು ಹೇಳಿಕೊಂಡಿದ್ದಾರೆ ಎಂದು ಸಿಂಗ್ ಆರೋಪಿಸಿದ್ದಾರೆ. 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆಯಲ್ಲಿ ಬಹಳಷ್ಟು ಬಿಜೆಪಿಗರು ಶಾಮೀಲಾಗಿದ್ದರು ಎಂದು ಅಮರಿಂದರ್ ಆರೋಪಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕಗೊಳಿಸಬೇಕು ಆಗ ನಿಜವಾದ ತಪ್ಪಿತಸ್ಥರು ಯಾರೆಂಬುದು ಜನರಿಗೆ ತಿಳಿಯುತ್ತದೆ ಎಂದು ಸಿಂಗ್ ಹೇಳಿದ್ದಾರೆ. ಸದ್ಯ ಈ ಬಗ್ಗೆ ಅಡ್ವಾಣಿ ಯಾವುದೇ ಪ್ರತಿಕ್ರಿಯೆಯನ್ನು ನೀಡಲು ಮುಂದಾಗಿಲ್ಲ ಆದರೆ ಬಿಜೆಪಿ ಮಾತ್ರ ಅಮರಿಂದರ್ ಸಿಂಗ್ ವಿರುದ್ಧ ಹರಿಹಾಯ್ದಿದೆ.

