ಹೆಬ್ರಿ: ಕರ್ನಾಟಕದ ಸಂಪೂರ್ಣ ಲಂಚ ಮುಕ್ತ ಹೆಬ್ರಿ ತಾಲೂಕು ಆಗ ಬೇಕು. ಸ್ವಚ್ಚ ಸುಂದರ, ನಿರ್ಮಲ, ಆಭಿವೃದ್ಧಿಶೀಲ ತಾಲೂಕು ಇದಾಗ ಬೇಕು ಎಂದು ಹೆಬ್ರಿಯ ಪುರದೊಡೆಯ ಶ್ರೀ ಅನಂತ ಪದ್ಮನಾಭ ದೇವರ ಎದುರು ಪ್ರಾರ್ಥನೆ ಮತ್ತು ಸಂಕಲ್ಪ ಮಾಡಿದ ವಿಶೇಷ ಘಟನೆ ಇತಿಹಾಸದಲ್ಲಿ ದಾಖಲಾಗಿದೆ.
ಹಿರಿಯ ಪತ್ರಕರ್ತ, ಹೆಬ್ರಿ ಕಾರ್ಯ ನಿರತ ಪತ್ರಕರ್ತರ ಸಂಘದ ಸಂಸ್ಥಾಪಕ, ಜಿಲ್ಲಾ ರಾಜ್ಯೋತ್ಸವ ಪುರಸ್ಕ್ರತ ಶೇಖರ ಅಜೆಕಾರು ಅವರ “ “ಹೆಬ್ಬೇರಿ…..ಹೆಬ್ರಿ ತಾಲೂಕು” ಕೃತಿ ಲೋಕಾರ್ಪಣೆ ಮತ್ತು ದೇವರಿಗೆ ಸಂಗೀತ ಸೇವಾರ್ಪಣೆ ಕಾರ್ಯಕ್ರಮದಲ್ಲಿ ದೇವರಿಗೆ ಈ ರೀತಿಯಾಗಿ ಅವರು ಪ್ರಾರ್ಥನೆ ಮತ್ತು ಸಂಕಲ್ಪವನ್ನು ಮಾಡಿದಾಗ ಹೆಬ್ರಿಯ ಗಣ್ಯರು ಉಪಸ್ಥಿತರಿದ್ದು ಸಾಕ್ಷಿಯಾದರು.
ಹೆಬ್ರಿ ತಾಲೂಕು ರಚನಾ ಸಮಿತಿಯ ಅಧ್ಯಕ್ಷ ಎಚ್.ಭಾಸ್ಕರ ಜೋಯಿಸ್ ಮತ್ತು ತಾಲೂಕು ರಚನಾ ಹೋರಾಟಗಾರ ನೀರೆ ಕೃಷ್ಣ ಶೆಟ್ಟಿ ಅವರು ಕೃತಿಯನ್ನು ಲೋಕಾರ್ಪಣೆಗೊಳಿಸಿದರು.
ಹೆಬ್ರಿಯ ಸಮೀಪದ ಅಜೆಕಾರಿನ ಶೇಖರ ಅವರು ಹೆಬ್ರಿಯ ಬಗ್ಗೆ ಮೊದಲೊಂದು ಕೃತಿಯನ್ನು ಪ್ರಕಟಿಸಿದ್ದರು. ತಾಲೂಕಾದ ಈ ಸಂದರ್ಭದಲ್ಲಿ ಈ ರೀತಿಯಾಗಿ ಹೆಬ್ರಿ ತಾಲೂಕಿನ ಬಗ್ಗೆ 150 ಪುಟದ ಈ ಕೃತಿಯನ್ನು ಪರಿಶ್ರಮದ ಮೂಲಕ ರಚಿಸಿದ್ದಾರೆ. ದಾಖಲೆಯ ದೃಷ್ಠಿಯಿಂದ ಇದೊಂದು ಅದ್ಭುತ ಪ್ರಯತ್ನ ಎಂದರು.
ಕೃತ ರಚನೆ, ಬರವಣಿಗೆಯಲ್ಲಿ ಪಳಗಿರುವ ಅಜೆಕಾರು ಅವರ ಲಂಚ ಮುಕ್ತ ಹೆಬ್ರಿ ಸಂಕಲ್ಪ ಅತ್ಯದ್ಭುತ ಕಲ್ಪನೆ. ಒಂದು ವರ್ಷದ ಒಳಗಾಗಿ ಹೆಬ್ರಿಯನ್ನು ರಾಜ್ಯದ ಅತ್ಯದ್ಭುತ ತಾಲೂಕಾಗಿಸೋಣ ಎಂದು ನೀರೆ ಕೃಷ್ಣ ಶೆಟ್ಟಿ ಹಾರೈಸಿದರು.
ಹೆಬ್ರಿ ತಾಲೂಕು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಚ್. ಯೋಗೀಶ್ ಭಟ್ ಅವರು ಉದಯ ಪಿ.ಅಜೆಕಾರು ಅವರ ಸಂಗೀತ ಸೇವಾರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಲಯನ್ಸ್ ಪ್ರಾಂತೀಯ ಅಧ್ಯಕ್ಷ ಟಿ.ಜಿ.ಆಚಾರ್, ಸೀತಾನದಿ ಸೌಖ್ಯ ಯೋಗ ಟ್ರಸ್ಟ್ನ ಅಧ್ಯಕ್ಷ ಸೀತಾನದಿ ವಿಠಲ ಶೆಟ್ಟಿ, ಹಿರಿಯ ಛಾಯಾಗ್ರಾಹಕ ದಿವಾಕರ ಶೆಟ್ಟಿ, ದೇವಾಲಯದ ಆಡಳಿತ ಮಂಡಳಿಯ ಸದಸ್ಯೆ ಪದ್ಮ.ಪಿ ನಾಯಕ್, ಸಂಘಟಕ ರವೀಂದ್ರ ಪುರೋಹಿತ್, ಛಾಯಾಗ್ರಾಹಕ ವಿ.ಆರ್ ಸತೀಶ ಆಚಾರ್ಯ, ರವಿಚಂದ್ರ ಹೆಗ್ಡೆ, ದೇವಾಲಯದ ಅರ್ಚಕರಾದ ರಾಮಕೃಷ್ಣ ಎನ್ ಆಚಾರ್ಯ, ನಾರಾಯಣ ಆಚಾರ್ಯ ಮತ್ತು ದೇವಾಲಯದ ಭಕ್ತ ಸಮೂಹ ಉಪಸ್ಥಿತಿಯಿತ್ತು.



