ಉಡುಪಿ: ಹಿರಿಯಡ್ಕ ಸಮೀಪದ ಪಂಚನಬೆಟ್ಟು ವ್ಯಾಪ್ತಿಯ ಸಾಣೆಕಲ್ಲಿನಲ್ಲಿ ಎರಡು ಶಾಲೆಗಳ ಸ್ಥಾಪಕ ಸದಸ್ಯರಾಗಿ ಸಜ್ಜನಿಕೆಯ ಸೇವೆಯನ್ನು ಮಾಡಿದ್ದ ರಾಮಕೃಷ್ಣ ನಾಯಕ್ ಅವರ ಜನ್ಮ ಶತಮಾನೋತ್ಸವವನ್ನು ಡಿಸೆಂಬರ್ ೨೪ ರಂದು ಆಚರಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ರಾಮಕೃಷ್ಣ ಅವರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಂಚನಬೆಟ್ಟು ಮತ್ತು ಪಂಚನಬೆಟ್ಟು ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯ ಸ್ಥಾಪನೆಯಲ್ಲಿ ಸ್ಥಾಪಕ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಎ. ನರಸಿಂಹ ಅವರ ಪ್ರಧಾನ ಸಂಪಾದಕತ್ವದಲ್ಲಿ ನಾಯಕರ ಕುರಿತ ” ರಾಮಕೃಷ್ಣ- ಶತಮಾನದ ಸವಿಸ್ಮರಣೆ ” ಕೃತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿನ ಕಾರ್ಯಕ್ರಮದಲ್ಲಿ ವಿಶ್ರಾಂತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಂತಿ ಬಾಯಿ ಮೊದಲಾದವರು ಅತಿಥಿಗಳಾಗಿರುವರು. ಸಂಜೆ ೫.೩೦ ಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಊರಿನ ಹಿರಿಯರಾದ ಲಕ್ಷ್ಮೀನಾರಾಯಣ ನಾಯಕ್ ಉದ್ಘಾಟಿಸಲಿರುವರು.

ರಾಜ್ಯ- ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಮಜಾಭಾರತ ತಂಡದ ಆರಾಧನಾ ಭಟ್ ನಿಡ್ಡೋಡಿ, ಅತೀಶ್ ಶೆಟ್ಟಿ ಮಂಗಳೂರು, ಸೌರವ್ ಸಾಲ್ಯಾನ್, ಶ್ರಜನ್ಯ ಜೆ. ಕೆ, ಹೋಮಲ್ಕೆ, ಸಂಕೇತ್ ಮರಿಯಾಡಿ, ಕಲಾಶ್ರೀ ಪ್ರವೀಣ್ ಎ. ಆಚಾರ್ಯ, ಅಮೋಘ ಹೆಗ್ಡೆ ಮತ್ತು ಅಥರ್ವ ಹೆಗ್ಡೆ ಇವರು ಶೇಖರ ಅಜೆಕಾರು ಅವರ ಸಂಯೋಜನೆಯಲ್ಲಿ ಬೆಳದಿಂಗಳ ವೈಭವ ಕಾರ್ಯಕ್ರಮವನ್ನು ನೀಡಲಿರುವರು.
ದಿನೇಶ ಅತ್ತಾವರ ಅವರ ನಿರ್ದೇಶನದಲ್ಲಿ ಉಡುಪಿಯ ಅಭಿನಯ ಕಲಾವಿದರು ” ಒಂಚಿ ತೂಪಿನಿ” ತುಳು ನಾಟಕವನ್ನು ಪ್ರದರ್ಶಿಸಲಿರುವರು.
ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಯಲ್ಲಿ ಮುಂಬಯಿ ಮತ್ತು ಪಂಚನಬೆಟ್ಟುಗಳಲ್ಲಿ ವಿಧಾಯಕ ಕೆಲಸವನ್ನು ಮಾಡುತ್ತಾ ಬಂದಿರುವ ರಾಮಕೃಷ್ಣ ನಾಯಕ್ ಚಾರಿಟೇಬಲ್ ಟ್ರಸ್ಟ್ ಈ ಕಾರ್ಯಕ್ರಮದ ಪ್ರಾಯೋಯಕತ್ವವನ್ನು ವಹಿಸಿ ಕೊಂಡಿದೆ. ಟ್ರಸ್ಟ್ನ ಆಡಳಿತ ಟ್ರಸ್ಟಿಗಳಾದ ಸುರೇಂದ್ರ ಆರ್.ನಾಯಕ್, ಆಸ್ಕರ್ ಕದತಟ್ಟಿದ್ದ ಮರಾಠಿ ಚಿತ್ರ ಶ್ವಾಸ್ನ ಓರ್ವ ನಿರ್ಮಾಪಕ ವಿಶ್ವನಾಥ ಆರ. ನಾಯಕ್, ಶಾಲಾ ಸಂಚಾಲಕ ಎಂ.ವಿಶ್ವನಾಥ ರೈ, ಎ.ನರಸಿಂಹ, ರಮೇಶ ಸೇರ್ವೆಗಾರ, ಬಿ.ಕರುಣಾಕರ ಶೆಟ್ಟಿ ಪಾಂಡುರಂಗ ನಾಯಕ್ ಅಲ್ಲದೆ ಅನೇಕ ಗಣ್ಯರು ಉಪಸ್ಥಿತರಿರುವರು.
