ಶ್ರೀನಗರ: ಪ್ರವಾಹ ಪೀಡತ ಜಮ್ಮುಕಾಧಶ್ಮೀರದಲ್ಲಿ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಮಳೆಯ ಅವಾಂತರ ಕಡಿಮೆಯಾಗಿದೆ. ಆದರೆ ಸ್ಥಳೀಯ ನಿವಾಸಿಗಳು ಸೈನಿಕರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದು, ಕಾರ್ಯಾಚರಣೆಗೆ ಹಿನ್ನೆಡೆ ಸಿಕ್ಕಂತಾಗುತ್ತಿದೆ. ಆದರೆ ಸೈನಿಕರು ಮಾತ್ರ ಸ್ಥಳೀಯರ ಪ್ರತಿರೋಧಕ್ಕೆ ಎದುರಾಡದೆ ತನ್ನ ಕಾರ್ಯದಲ್ಲಿ ಮಗ್ನರಾಗಿದ್ದು, ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ.
ಜನರು ಸ್ವಲ್ಪ ಸಹನೆ ಕಳೆದುಕೊಂಡಿರುವುದರಿಂದ ಇಂಥ ಕಲ್ಲು ತೂರಾಟದ ಘಟನೆಗಳು ನಡೆಯುತ್ತಿವೆ. ಇದರಿಂದ ತಮಗೆ ಯಾವುದೇ ನೋವು ಇಲ್ಲ. ಜನರ ಜೀವ ರಕ್ಷಣೆಯೇ ತಮ್ಮ ಧ್ಯೇಯೋದ್ದೇಶವಾಗಿದೆ ಎಂದು ಕಾರ್ಯಾಚರಣೆಯಲ್ಲಿ ತೊಡಗಿರುವ ಏರ್ ಕಮಾಂಡರ್ ಬಾಲಚಂದ್ರನ್ ಹೇಳಿದ್ದಾರೆ. ಈಗಾಗಲೇ ಸಾವಿರಾರು ಜನರನ್ನ ರಕ್ಷಿಸಿರುವ ಭಾರತೀಯ ಸೇನೆ ಮೇಲೆ ವಿಶ್ವಾಸ ಇಡಿ ಎಂದೂ ಸೇನಾಧಿಕಾರಿಗಳು ಕಾಶ್ಮೀರೀ ಜನರನ್ನ ಕೇಳಿಕೊಂಡಿದ್ದಾರೆ.


