ಮೂಡುಬಿದಿರೆ: ಮಂಗಳೂರು ತಾಲೂಕು ಗ್ರಾಮಾಂತರ ಪಿಯುಸಿ ಮಟ್ಟದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟವು ಶನಿವಾರ ಮಹಾವೀರ ಕಾಲೇಜಿನಲ್ಲಿ ನಡೆಯಿತು. ಉದ್ಯಮಿ ಅರುಣ್ ಮೆಂಡಿಸ್ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿ, ಮಾನಸಿಕ ಮತ್ತು ದೈಹಿಕ ದೃಢತೆಗೆ ಕ್ರೀಡೆ ಪೂರಕ. ತಂಡವಾಗಿ ಕ್ರೀಡಾ ಸ್ಫೂರ್ತಿಯಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ ಎಂದು ಕ್ರೀಡಾಪಟುಗಳನ್ನು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಮಾಜಿ ಶಾಸಕ ಕೆ. ಅಭಯಚಂದ್ರ ಜೈನ್ ಮಾತನಾಡಿ, ವಾಲಿಬಾಲ್ ಏಷ್ಯಾದಲ್ಲಿ ಐದನೇ ಸ್ಥಾನದಲ್ಲಿದ್ದು ಅದನ್ನು ಮೊದಲ ಸ್ಥಾನಕ್ಕೆ ತರುವಲ್ಲಿ ಕ್ರೀಡಾಪಟುಗಳ ಪ್ರಯತ್ನ ಅಗತ್ಯ ಎಂದರು.
ಉದ್ಯಮಿ ಲಾಲ್ ಗೋಯಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಕೋರಿದರು. ಮಹಾವೀರ ಕಾಲೇಜಿನ ಪ್ರಾಂಶುಪಾಲ ಪ್ರೋ. ಚಂದ್ರಶೇಖರ ದೀಕ್ಷಿತ್, ಕ್ರೀಡಾ ಸಂಯೋಜಕ ವಿಜಯಕುಮಾರ್, ಉದ್ಯಮಿ ರಾಮ್ಪ್ರಸಾದ್ ಭಟ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಮೇಶ್ ಭಟ್ ಸ್ವಾಗತಿಸಿದರು. ರಾಮ್ಪ್ರಸಾದ್ ವಂದಿಸಿದರು. ವಿದ್ಯಾರ್ಥಿನಿ ಗೌರವಿ ಪೈ ಕಾರ್ಯಕ್ರಮ ನಿರೂಪಿಸಿದರು.

