ಮೂಡುಬಿದಿರೆ: ಭ್ರಷ್ಟಾಚಾರ ರಹಿತವಾದ ವೃತ್ತಿಯಾಗಿರುವ ಶಿಕ್ಷಕ ವೃತ್ತಿ ಪುಣ್ಯದ ಕೆಲಸ. ಶಿಕ್ಷಕರು ಹೊಸತನದೊಂದಿಗೆ ವಿದ್ಯಾರ್ಥಿಗಳನ್ನು ಅರಿತು ಕ್ಷೇತ್ರದಲ್ಲಿ ಮುನ್ನಡೆದರೆ ಉತ್ತಮ ಶಿಕ್ಷಕನಾಗಲು ಸಾಧ್ಯ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ದ.ಕ ಜಿ. ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ ಮೂಡುಬಿದಿರೆ ವಲಯ ಹಾಗೂ ಶಿಕ್ಷಕರ ದಿನಾಚರಣಾ ಸಮಿತಿಯ ವತಿಯಿಂದ ಪದ್ಮಾವತಿ ಕಲಾ ಮಂದಿರದಲ್ಲಿ ಬುಧವಾರ ನಡೆದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂತ ಅಲೋಸಿಯಸ್ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಗಣೇಶ್ ಅಮೀನ್ ಸಂಕಮಾರ್ ದಿಕ್ಸೂಚಿ ಭಾಷಣ ಮಾಡಿ, ಜಾಗೃತ ಸಮಾಜವನ್ನು ಸೃಷ್ಟಿಸುವ ಕೆಲಸ ಶಿಕ್ಷಕರದ್ದು. ದೇಶದ ವ್ಯವಸ್ಥೆಯನ್ನು ರೂಪಿಸುವ ಶಕ್ತಿಯಿರುವ ಶಿಕ್ಷಕರು, ನಮ್ಮ ಸಂಸ್ಕøತಿ, ಇತಿಹಾಸ, ಪರಂಪರೆ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ಅಭಯಚಂದ್ರ ಜೈನ್, ತಹಸೀಲ್ದಾರ್ ರಶ್ಮಿ ಎಸ್. ಆರ್. ಶಿಕ್ಷಕರ ಸಮಿತಿ ಕೋಶಾಧಿಕಾರಿ ಕೆ. ಶ್ರೀಪತಿ ಭಟ್, ಜಿ. ಪಂ. ಸದಸ್ಯೆ ಸುಜಾತ ಕೆ.ಪಿ., ತಾ. ಪಂ. ಸದಸ್ಯರಾದ ಸಂತೋಷ ಬಿ., ಸುಕುಮಾರ ಸನಿಲ್, ಹಾಗೂ ಶಿಕ್ಷಕರ ಸಂಘದ ಅಧ್ಯಕ್ಷರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ ಪಡೆದ ಶಿಕ್ಷಕರನ್ನು ಗೌರವಿಸಲಾಯಿತು. 2017-18ನೇ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೂಡುಬಿದಿರೆ ವಲಯ ಸಮಿತಿಯ ವತಿಯಿಂದ `ನಮ್ಮ ದಿನ, ನಮ್ಮ ಶಾಲೆ, ನಮ್ಮ ಬೇಡಿಕೆ’ ಕಾರ್ಯಕ್ರಮದ ಅಂಗವಾಗಿ ವಿವಿಧ ಬೇಡಿಕೆಗಳುಳ್ಳ ಪತ್ರವನ್ನು ಮುಖ್ಯ ಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರಿಗೆ ಸಂಘದ ಅಧ್ಯಕ್ಷ ನಾಗೇಶ್ ಹಾಗೂ ಪದಾಧಿಕಾರಿಗಳು ಶಾಸಕ ಉಮಾನಾಥ ಕೋಟ್ಯಾನ್ ಅವರ ಮೂಲಕ ನೀಡಿದರು. ಶಿಕ್ಷಕ ವೃತ್ತಿನಿರತರಾಗಿದ್ದು ಅಗಲಿದ ಶಿಕ್ಷಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬೆಳುವಾಯಿ ಎಸ್ಎಂಪಿ ಹೈಸ್ಕೂಲಿನ ಮುಖ್ಯ ಶಿಕ್ಷಕ ಪುರುಷೋತ್ತಮ ರಾವ್ ಶಿಕ್ಷಕರ ಶೈಕ್ಷಣಿಕ ಸಾಧನೆ ಮತ್ತು ಸಂಘದ ಚಟುವಟಿಕೆಗಳ ವಿವರಣೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ ಸ್ವಾಗತಿಸಿದರು. ಶಿಕ್ಷಕ ವೆಂಕಟರಮಣ ಕೆರೆಗದ್ದೆ ಕಾರ್ಯಕ್ರಮ ನಿರೂಪಿಸಿದರು.
