ಮೂಡುಬಿದಿರೆ: ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಸೆ. 3 ರಿಂದ 5 ರವರೆಗೆ ರಾಜ್ಯಮಟ್ಟದ ಜ್ಯೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಕ್ರೀಡಾಕೂಟವು ಸ್ವರಾಜ್ಯ ಮೈದಾನದ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳ ಕ್ರೀಡಾ ಹಾಸ್ಟೆಲ್ಗಳು ಹಾಗೂ ಕ್ರೀಡಾ ಕ್ಲಬ್ಗಳಿಂದ ಸುಮಾರು 1800 ಕ್ರೀಡಾಪಟುಗಳು ಈ ಅಥ್ಲೆಟಿಕ್ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಬಾಲಕ ಹಾಗೂ ಬಾಲಕಿಯರ 14 ವರ್ಷ , 16 ವರ್ಷ, 18 ವರ್ಷ 20 ವರ್ಷ ಹಾಗೂ ಮುಕ್ತ ಪುರುಷ ಹಾಗೂ ಮಹಿಳೆಯರ ಒಟ್ಟು 10 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ. ಈ ಕ್ರೀಡಾ ಕೂಟದ ನಿರ್ವಹಣೆಯ ಆಧಾರದಲ್ಲಿ ದಕ್ಷಿಣವಲಯ ಜ್ಯೂನಿಯರ್ ಅಥ್ಲೆಟಿಕ್ಸ್ ಹಾಗೂ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟಗಳಿಗೆ ರಾಜ್ಯ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಸೆ. 3 ರಂದು ಬೆಳಿಗ್ಗೆ 9:30 ಕ್ಕೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಉದ್ಘಾಟಿಸಲಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಧ್ವಜಾರೋಹಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಾಭಿವೃದ್ಧಿ ಸಚಿವ ಯು. ಟಿ. ಖಾದರ್, ಸರ್ಕಾರದ ಅಡಿಷನಲ್ ಸೆಕ್ರೆಟರಿ ರಜನೀಶ್ ಗೋಯಲ್, ಮಂಗಳೂರು ವಿವಿ ಪ್ರಭಾರ ಉಪಕುಲಪತಿ ಡಾ. ಕಿಶೋರ್ಕುಮಾರ್, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಹಾಗೂ ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ಸುವರ್ಣ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷ ಸುನಿಲ್ ಶೆಟ್ಟಿ, ದ.ಕ ಜಿಲ್ಲಾ ಸಂಸ್ಥೆಯ ಕೋಶಾಧಿಕಾರಿ ಕೃಷ್ಣ ಶೆಣೈ ಉಪಸ್ಥಿತರಿದ್ದರು.

