ಮೂಡಬಿದಿರೆ: ಕ್ಯಾನ್ಸರ್ ರೋಗಕ್ಕೆ ಸಂಪೂರ್ಣ ಪರಿಣಾಮಕಾರಿಯಾದ ಚಿಕಿತ್ಸೆಯನ್ನು ಕಂಡು ಹಿಡಿಯುವಲ್ಲಿ ಮನುಷ್ಯ ಇನ್ನೂ ಸಫಲನಾಗಲಿಲ್ಲ. ಈ ರೋಗವನ್ನು ಮನುಷ್ಯನಿಂದ ಇನ್ನೂ ಗೆಲ್ಲಲಾಗಲಿಲ್ಲ ಎಂದು ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕಾಲಜಿಯ ನಿರ್ದೇಶಕ ಡಾ ವೈ ಸನತ್ ಹೆಗ್ಡೆ ತಿಳಿಸಿದರು.

ಅವರು ಮೂಡಬಿದಿರೆ ಆಳ್ವಾಸ್ ಕಾಲೇಜಿನ ಬಯೋಟೆಕ್ನಾಲಜಿ ವಿಭಾಗ ಹಾಗೂ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕಾಲಜಿಯ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ’ದಲ್ಲಿ ಮಾತನಾಡಿದರು.

ಕ್ಯಾನ್ಸರ್ ನಲ್ಲಿ ಸುಮಾರು 200 ತರಹದ ಕಾಯಿಲೆಗಳಿದ್ದು, ಅವುಗಳಲ್ಲಿ ಶೇಕಡಾ 35 ರಿಂದ 40 ರಷ್ಟು ರೋಗಗಳು ಮಾತ್ರ ಗುಣಪಡಿಸಲಾಗುವ ಕಾಯಿಲೆಗಳಾಗಿವೆ. ಭಾರತ ಒಂದರಲ್ಲೆ ಸುಮಾರು 2.5 ಮಿಲಿಯನ್ನಷ್ಟು ಕ್ಯಾನ್ಸರ್ ಭಾದಿತ ರೋಗಿಗಳಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗದ ರೋಗಿಗಳ ಚಿಕಿತ್ಸೆಗಾಗಿ ಆಳ್ವಾಸ್ ಆಸ್ಪತ್ರೆಯಲ್ಲಿ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕಾಲಜಿಯ ವತಿಯಿಂದ ಸಬ್ ಕ್ಲಿನಿಕ್ ಅನ್ನು ಪ್ರಾರಂಬಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ, ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕಾಲಜಿಯ ಸೀನಿಯರ್ ರೇಡಿಯೋಬಯೋಲಾಜಿಸ್ಟ್ ಡಾ ಎಂ ಶ್ರೀನಾಥ್ ಬಾಳಿಗ ಮಾತನಾಡಿ, ದಿನೇ ದಿನೇ ಕ್ಯಾನ್ಸರ್ ಪಾಶಕ್ಕೆ ತುತ್ತಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದ್ದು, ಇಂದು ಹೆಚ್ಚಾಗಿ ನಗರದಲ್ಲಿ ವಾಸಿಸುವವ ಜನರು ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಯುವಜನತೆ ಈ ರೋಗಕ್ಕೆ ಬಲಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಕ್ಯಾನ್ಸರ್ ರೋಗಕ್ಕೆ ಮೂಲ ಕಾರಣ ಜನರ ಬದಲಾದ ಜೀವನ ಶೈಲಿ ಹಾಗೂ ದುಶ್ಚಟಗಳಾದ ಅಲ್ಕೋಹಾಲ್, ತಂಬಾಕು ಸೇವನೆ, ರೇಡಿಯೆಶನ್. ಕ್ಯಾನ್ಸರ್ ರೋಗದ ವಿಧಗಳು ಮತ್ತು ಅವುಗಳ ಲಕ್ಷಣಗಳು ಹಾಗೂ ಅವುಗಳಿಂದ ದೂರವಿರಲು ಕೈಗೊಳ್ಳ ಬೇಕಾದ ಮುಂಜಾಗೃತೆಯ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಇದೇ ಸಂಧರ್ಭದಲ್ಲಿ ಮಹಿಳೆಯರಲ್ಲಿ ಕಂಡು ಬರುವ ಬ್ರೆಸ್ಟ್ ಕ್ಯಾನ್ಸರ್ ಬಗ್ಗೆ ಮಹಿಳಾ ಸಂಪನ್ಮೂಲ ವ್ಯಕ್ತಿಗಳಾದ ಮಿಂಟೂ ಹಾಗೂ ಪೂರ್ಣಿಮಾ ಮಾಹಿತಿ ನೀಡಿದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ ಕ್ಯಾನ್ಸರ್ ರೋಗಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ಕ್ಯಾನ್ಸರ್ ಪೀಡಿತ ರೋಗಿಗಳಿಗೆ ನಮ್ಮ ಸಮಾಜ, ಕುಟುಂಬ, ತಂದೆ-ತಾಯಿಗಳು ಮಾನಸಿಕ ಹಾಗೂ ಸಾಮಾಜಿಕ ಬೆಂಬಲ ನೀಡುವ ಅಗತ್ಯವಿದೆ ಎಂದರು.
ಸ್ನಾತಕೋತ್ತರ ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ.ರಾಮ್ ಭಟ್ ಪಿ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ನಿಖಿಲ್ರೈ ನಿರೂಪಿಸಿದರು.

