ಕಿನ್ನಿಗೋಳಿ: ಬಿಲ್ಲವರ ಅಸೋಸಿಯೇಶನ್ ಸಾಂಗ್ಲಿ ಇದರ ಸ್ಥಾಪಕ, ಅಧ್ಯಕ್ಷ ನಾರಾಯಣ ಟಿ.ಪೂಜಾರಿ (70.) ಕಳೆದ ಸೋಮವಾರ ಸಾಂಗ್ಲಿ ಅಲ್ಲಿನ ಸ್ವಗೃಹದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.

Narayana T.Poojary Sangli

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕಿನ್ನಿಗೋಳಿ ಗುತಕಾಡು ಗಿರಿಜ ಸದನ್ ನಿವಾಸಿ ಆಗಿದ್ದ ನಾರಾಯಣ ಪೂಜಾರಿ ಅವರು ಮಹಾರಾಷ್ಟ್ರ ರಾಜ್ಯದ ಸಾಂಗ್ಳಿ ಅಲ್ಲಿನ ಶಿರ್ಧೋನ್ ಕುಂಡ್ರಲ್ ಅಲ್ಲಿನ ಕ್ರಾಂತಿಅಗ್ರನಿ ಜಿ.ಡಿ ಬಾಬು ಲಾಡ್ ಮಹಾವಿದ್ಯಾಲಯ ಶಿಕ್ಷಣ ಸಂಸ್ಥೆಯ ಶಿಕ್ಷಕರಾಗಿ, ಮುಖ್ಯೋಪಾಧ್ಯಯರಾಗಿ ನಂತರ ಇಲ್ಲಿನ ಜೂನಿಯರ್ ಕಾಲೇಜ್‍ನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಂತರ ಹೊಟೇಲು ಉದ್ಯಮಿ ಆಗಿ ಸೇವಾ ನಿರತರಾಗಿದ್ದರು. ಮೃತರು ಪತ್ನಿ (ಪ್ರೇಮಾ ಪೂಜಾರಿ) ಮಗ(ಚೇತನ್), ಮಗಳು (ಧನಶ್ರೀ) ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಮಾಜಿ ಅಧ್ಯಕ್ಷ ಎಲ್.ವಿ ಅವಿೂನ್, ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್, ಭಾರತ್ ಬ್ಯಾಂಕ್‍ನ ನಿರ್ದೇಶಕರಾದ ವಾಸುದೇವ ಆರ್.ಕೋಟ್ಯಾನ್, ಸಿಎ| ಅಶ್ವಜಿತ್ ಹೆಜ್ಮಾಡಿ, ನ್ಯಾ| ಎಸ್.ಬಿ ಅವಿೂನ್, ಹರೀಶ್ ಡಿ.ಸಾಲ್ಯಾನ್ ಕಲ್ವಾ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಂಘದ ಅಧ್ಯಕ್ಷರನ್ನು ಕಳಕೊಂಡ ಬಿಲ್ಲವರ ಅಸೋಸಿಯೇಶನ್ ಸಾಂಗ್ಲಿ ಭಾರೀ ಸಂತಾಪ ವ್ಯಕ್ತಪಡಿಸಿದೆ. ಸಂಘದ ಉಪಾಧ್ಯಕ್ಷ ಸುಧಾಕರ ಎಸ್.ಪೂಜಾರಿ ನೆಲ್ಲಿಕಾರ್, ಗೌರವ ಕಾರ್ಯದರ್ಶಿ ರಘುರಾಮ ಪೂಜಾರಿ, ಗೌರವ ಕೋಶಾಧಿಕಾರಿ ದಿನೇಶ್ ಪೂಜಾರಿ, ಮಹಿಳಾಧ್ಯಕ್ಷೆ ಶಕುಂತಲಾ ಎಸ್.ಪೂಜಾರಿ, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಮತ್ತು ಸದಸ್ಯರನೇಕರು ಸೇರಿದಂತೆ ನೂರಾರು ಜನರು ಪಾಲ್ಗೊಂಡು ಅಂತಿಮ ದರ್ಶನ ಪಡೆದರು. ಬಳಿಕ ಮೃತರ ಪಾರ್ಥಿವ ಶರೀರವನ್ನು ತವರೂರಿಗೆ ರವಾನಿಸಿದ್ದು, ಮಂಗಳವಾರ ಸಂಜೆ ಕಿನ್ನಿಗೋಳಿಯ ಸ್ವನಿವಾಸದಲ್ಲಿ ಅಂತ್ಯಕ್ರಿಯೆ ನೆರವೇರಿಸಲ್ಪಟ್ಟಿತು.

 

By suddi9

Leave a Reply

Your email address will not be published. Required fields are marked *