ಉಡುಪಿ: ಕರ್ನಾಟಕ ವಿಧಾನ ಸಭೆ ಚುನಾವಣೆ ಈಗಾಗಲೇ ಮುಕ್ತಾಯ ಕಂಡಿದ್ದು, ಇದೀಗ ಜನರು ಯಾರು ಗೆಲ್ಲುತ್ತಾರೆಂಬ ನಿರೀಕ್ಷೆಯಲ್ಲಿ ನಾಳಿನ ಫಲಿತಾಂಶಕ್ಕೆ ಕಾದು ಕುಳಿತಿದ್ದಾರೆ. ಉಡುಪಿ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೇಸ್ ನಿಂದ ಪ್ರಮೋದ್ ಮಧ್ವರಾಜ್ ಮತ್ತು ಬಿಜೆಪಿಯಿಂದ ರಘುಪತಿ ಭಟ್ ರವರು ಸ್ಪರ್ಧಿಸಿದ್ದು, ಭಾರೀ ಕೂತುಹಲ ಮೂಡಿಸಿರುವ ಈ ಕ್ಷೇತ್ರದಲ್ಲಿ ಗೆಲ್ಲುವವರ್ಯಾರು ಎಂಬ ಪ್ರಶ್ನೆಗೆ ಮತದಾರರ ಅಭಿಪ್ರಾಯ ಸಂಗ್ರಹಿಸಿದಾಗ ಉಡುಪಿ ಕ್ಷೇತ್ರ ಈ ಬಾರಿ ಪ್ರಮೋದ್ ಗೆ ಒಲಿಯುವುದು ಬಹುತೇಕ ಖಚಿತವೆಂಬ ವಾತವರಣ ಸೃಷ್ಟಿಯಾಗಿದೆ.
ಪ್ರಮೋದೆರ್ ಎಂಕ್ಲೆಗ್ ರೇಷನ್ ಕಾರ್ಡ್ ಮಲ್ತ್ ಕೊರ್ಯರ್, ಎಂಕ್ಲೆಗ್ ಎತೋ ವರ್ಷಡ್ ಇಂಚಿ ರೋಡ್ ಇತ್ತಿಜಿ ಆರ್ ರೋಡ್ ಮಲ್ತ್ ಕೊರ್ಯರ್, ಎಂಕ್ಕೆನಾ ಕೆರೆಗ್ ಒಂಜಿ ಅವರಣಾ ಮಲ್ತೆರ್, ಕಡಲ್ದ ನೀರ್ ಮಿಂತ್ ಬರೋಂದ್ ಇತ್ತ್ಂಡ್ ಇತ್ತೆ ಆಯ್ಕ್ ಶಾಶ್ವತ ಪರಿಹಾರ ತಿಂಕ್ಡ್, ಅಂಚಾ ಆರ್ ಈ ಸಾರಿ ಯಾನ್ನ ಬೆಂಬಲ ಅಂತ ಬಹುತೇಕ ಮಂದಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸಿದ್ದರಾಮಯ್ಯ ಸರಕಾರ ಕೊಡುತ್ತಿದ್ದ ಉಚಿತ ಅಕ್ಕಿಯ ಬಗ್ಗೆಯೂ ಪ್ರಸ್ತಾಪಿಸಿದರು. ಈ ಬಾರಿ ಪ್ರಮೋದ್ ಮಧ್ವರಾಜ್ ಕ್ಷೇತ್ರದಲ್ಲಿ ನಡೆಸಿದ್ದರೆನ್ನಲಾದ ಅಭಿವೃದ್ದಿ ಕಾರ್ಯಗಳು ಅವರ ಸಾಥ್ ಸ್ವಲ್ಪ ಮಟ್ಟಿಗೆ ನೀಡಿದೆ ಎಂಬುದು ಗ್ರಾಮೀಣ ಪ್ರದೇಶದ ಜನರ ಮಾತಿನಲ್ಲಿ ಅರ್ಥವಾಗುತ್ತಿದೆ.
ಇನ್ನು ಉಡುಪಿಯಲ್ಲಿನ ಅಲ್ಪಸಂಖ್ಯಾತರ ಸುಮಾರು 90% ಕ್ಕಿಂತ ಹೆಚ್ಚು ಮತಗಳು ಕಾಂಗ್ರೆಸ್ ಪಾಲಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಮತಗಳು ನಿರ್ಣಯಕ ಮತಗಳಾಗಿರುವುದರಿಂದ ಕಾಂಗ್ರೆಸ್ ಗೆ ಇದು ಧನಾತ್ಮಕವಾಗಲಿದೆ.ಅವರಲ್ಲಿ ಈ ಬಗ್ಗೆ ವಿಚಾರಿಸಿದಾಗ ಪ್ರಮೋದ್ ಮಧ್ವರಾಜ್ ಯಾವುದೇ ಭೇದವಿಲ್ಲದೆ ನಮ್ಮ ಸ್ಥಳಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳಿಗೆ ಪ್ರಾಶಸ್ತ್ಯ ನೀಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಅತ್ಯಂತ ಕಿರಿದಾದ ರಸ್ತೆಗಳನ್ನು ಅಗಲೀಕರಣಗೊಳಿಸಿ ಹಲವು ವರ್ಷದ ಬೇಡಿಕೆ ಈಡೇರಿಸಿದ್ದಾರೆಂಬ ಮಾತುಗಳು ಕೂಡ ಕೇಳಿ ಬಂದಿದೆ.
ಉಡುಪಿ ಕ್ಷೇತ್ರದ ಸಮುದ್ರ ತೀರ ಪ್ರದೇಶಗಳಲ್ಲಿ ಸಂಘಪರಿವಾರದ ಪ್ರಭಾವ ಹೆಚ್ಚಾಗಿರುವುದರಿಂದ ಅಲ್ಲಿನ ಬಹುತೇಕ ಮತಗಳು ಬಿಜೆಪಿ ಪಾಲಿಗೆ ವರದಾನವಾಗಿದೆ. ಆದರೂ ಇಲ್ಲಿಯೂ ಕೂಡ ಸ್ವಲ್ಪ ಮಟ್ಟಿಗೆ ಕಾಂಗ್ರೇಸ್ ಮತಗಳನ್ನು ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.ಪ್ರಮೋದ್ ಮಧ್ವರಾಜ್ ಸ್ವತಃ ಮೋಗವೀರ ಸಮುದಾಯದವರಾಗಿರುವುದರಿಂದ ಅವರ ಮತಗಳು ಬಿಜೆಪಿ ಮತ್ತು ಕಾಂಗ್ರೇಸ್ ಗೆ ಸಮಪಾಲಾಗಿ ಹಂಚಿ ಹೋಗಿರುವುದು ಸ್ಪಷ್ಟ. ಉಡುಪಿ ಕ್ಷೇತ್ರದ ನಗರ ಪ್ರದೇಶಗಳಲ್ಲಿ ಮೋದಿ ಹವಾ ಕೆಲಸ ಮಾಡಿದೆ ಎನ್ನಲಾಗುತ್ತಿದ್ದರೂ ಜನರ ನೀಡಿದ ಅಭಿಪ್ರಾಯದ ಪ್ರಕಾರ ಯುವಕರು ಹೆಚ್ಚಾಗಿ ಪ್ರಮೋದ್ ಗೆ ಒಲವು ವ್ಯಕ್ತಪಡಿಸಿರುವುದು ಅವರ ಅಭಿಪ್ರಾಯದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ರಘುಪತಿ ಭಟ್ ಅವರು ಉತ್ತಮ ಅಭ್ಯರ್ಥಿ, ಆದರೆ ಈ ಬಾರಿ ನಾನು ಪ್ರಮೋದ್ ರನ್ನು ಬೆಂಬಲಿಸಿದ್ದೇನೆ. ಅವರ ಈ ಬಾರಿ ಮಾಡಿದ ಅಭಿವೃದ್ದಿ ಕಾರ್ಯಗಳು ನನ್ನ ಮೇಲೆ ಪ್ರಭಾವ ಬೀರಿದೆ ಎಂದು ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಯೊಬ್ಬರು ಹೇಳಿಕೊಳ್ಳುತ್ತಾರೆ. ಒಟ್ಟಿನಲ್ಲಿ ಜನಭಿಪ್ರಾಯ ಗಮನಿಸಿದಾಗ ಪ್ರಮೋದ್ ರವರು ಮುಂದಿದ್ದರು ಅವರು ಭಾವಿಸಿದಂತೆ ದೊಡ್ಡ ಅಂತರದಲ್ಲಿ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ರಘುಪತಿ ಭಟ್ ರವರು ತೀರಾ ಹತ್ತಿರದ ಸ್ಪರ್ಧೆ ಖಂಡಿತ ನೀಡಲಿದ್ದಾರೆಂಬುದು ಜನರ ಒಮ್ಮತಾಭಿಪ್ರಾಯ. ಆದರೆ ಬಿಜೆಪಿ ಬೆಂಬಲಿಗರ ಪ್ರಕಾರ ರಘುಪತಿ ಭಟ್ ಈ ಬಾರಿ ಗೆಲುವು ಖಂಡಿತ ಸಾಧಿಸುತ್ತಾರೆ. ಅವರು ಉಡುಪಿ ನಗರವನ್ನು ಅಗಲೀಕರಿಸಿ ಚತುಷ್ಪಥ ರಸ್ತೆಗಳನ್ನು ಮಾಡಿಸಿದರು. ಬಿಜೆಪಿ ಅವಧಿಯಲ್ಲಿ ಹೆಚ್ಚಿನ ಅಭಿವೃದ್ದಿ ಕಾರ್ಯಗಳು ನಡೆದಿದೆ. ಅದನ್ನು ಜನರು ಗಮನಿಸುತ್ತಾರೆ ಖಂಡಿತ ಭಟ್ ಗೆಲ್ಲುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಏನೇ ಇದ್ದರೂ ನಾಳೆ ಮೇ 15 ಕ್ಕೆ ಸ್ಪಷ್ಟವಾದ ಫಲಿತಾಂಶ ಹೊರಬಿದ್ದು ಎಲ್ಲ ಗೊಂದಲಕ್ಕೆ ತೆರೆ ಬೀಳಲಿದೆ.

