ಗುರುಪುರದ ಪ್ರತಿಭಾವಂತ ವಿದ್ಯಾರ್ಥಿನಿ ಕೃತಿಕಾ ಶೆಟ್ಟಿಗೆ ಶಾಸಕರಿಂದ ಗುರುಪುರ : ಇಲ್ಲಿನ ಕಾರಮೊಗರು ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಂಗಳವಾರ(ಮೇ ಒಂದು) ವಾರ್ಷಿಕ ಜಾತ್ರಾ ಮಹೋತ್ಸವ ವಿಜೃಂಬಣೆಯಿಂದ ಜರುಗಿತು. ಬೆಳಿಗ್ಗಿನಿಂದ ದೇವರಿಗೆ ವಿಶೇಷ ಪೂಜೆಗಳು ನಡೆದವು. ಬಳಿಕ ಗುರುಪುರದ ಹಿಂದೂ ಭಜನಾ ಮಂಡಳಿ ಸದಸ್ಯರಿಂದ ಭಕ್ತಿ ಸಂಭ್ರಮ ಜರುಗಿತು.
ಮಹಾಪೂಜೆಯ ಬಳಿಕ ಅನ್ನಪ್ರಸಾದ ವಿತರಣೆಯಾಯಿತು. ಮಧ್ಯಾಹ್ನ 2 ಗಂಟೆಗೆ ತೆಂಕು ಮತ್ತು ಬಡಗುತಿಟ್ಟು ಯಕ್ಷ ಕಲಾವಿದರಿಂದ `ಯಕ್ಷಗಾನ ವೈಭವ’ ನಡೆಯಿತು. ಯಕ್ಷ ವೈಭವದಲ್ಲಿ ಭಾಗವತರಾಗಿ ಜಾನ್ಸಲೆ ರಾಘವೇಂದ್ರ ಆಚಾರ್ಯ, ಪ್ರಸಾದ ಕುಮಾರ್ ಮೊಗಬೆಟ್ಟು, ಗಿರೀಶ ರೈ ಕಕ್ಕೆಪದವು ಹಾಗೂ ರವಿಚಂದ್ರ ಕನ್ನಡಿಕಟ್ಟೆ ಹಾಗೂ ಹಿರಿಯ ಯಕ್ಷ ಕಲಾವಿದರು ಪಾಲ್ಗೊಂಡಿದ್ದರು.
ಬಾಕ್ಸ್ :
ಜಾತ್ರೋತ್ಸವದಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದ ಸ್ಥಳೀಯ ಶಾಸಕ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊೈದಿನ್ ಬಾವ ಭಕ್ತಾದಿಗಳೊಂದಿಗೆ ಆತ್ಮೀಯ ಮಾತುಕತೆ ನಡೆಸಿದರು. ಜೊತೆಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 97 ಅಂಕ ಗಳಿಸಿದ ಗುರುಪುರ ತಾರಿಕರಿಯದ ಜಗದೀಶ ಶೆಟ್ಟಿ ಮತ್ತು ಸುಜಾತಾ ಜೆ ಶೆಟ್ಟಿಯ ಪುತ್ರಿ ಕೃತಿಕಾ ಜೆ ಶೆಟ್ಟಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಈಕೆ ಮಂಗಳೂರು ಪದವಿನಂಗಡಿ ವಿಕಾಸ್ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದು, 10ನೇ ತರಗತಿಯವರೆಗೆ ಗುರುಪುರ ಕೈಕಂಬದ ಪೊಂಪೈ ಶಾಲೆಯಲ್ಲಿ ವಿದ್ಯಾಭಾಸ ಪೂರೈಸಿದ್ದಾಳೆ.
ಸರಳ ಸನ್ಮಾನ ಸಮಾರಂಭದ ವೇದಿಕೆಯಲ್ಲಿ ಉದ್ಯಮಿ ಯತಿರಾಜ್ ಶೆಟ್ಟಿ, ದೇವಸ್ಥಾನದ ಮೊಕ್ತೇಸರ ಡಾ. ರವಿರಾಜ ಶೆಟ್ಟಿ, ಕಾಂಗ್ರೆಸ್ ಮುಖಂಡ ಗಿರೀಶ ಆಳ್ವ, ಜಗದೀಶ ಶೆಟ್ಟಿ, ಮಮತಾ ಜೆ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಬಾವ, “ಇಡೀ ಕರ್ನಾಟಕ ರಾಜ್ಯದಲ್ಲೇ ಶೇ 97 ಅಂಕ ಗಳಿಸಿ ಗುರುಪುರಕ್ಕೆ ಹೆಸರು ತಂದು ಕೊಟ್ಟಿದ್ದಾಳೆ. ನನ್ನ ಕ್ಷೇತ್ರ ಹಾಗೂ ಈ ಪವಿತ್ರ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಯೊಬ್ಬಳ ಸನ್ಮಾನಿಸಲು ನನಗೆ ಸಂತೋಷವಾಗುತ್ತದೆ. ಜೊತೆಗೆ, ಎಂಐಟಿಯ ಹಿರಿಯ ಪ್ರೊಫೆಸರ್ ಹಾಗೂ ನನ್ನ ಗೆಳೆಯ ಡಾ. ರವಿರಾಜ ಶೆಟ್ಟಿ ಸಾಧನೆ ಬಗ್ಗೆಯೂ ನನಗೆ ಅತೀವ ಸಂತೋಷವಾಗುತ್ತದೆ” ಎಂದರು. ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ತಾಪಂ ಸದಸ್ಯ ಸಚಿನ್ ಅಡಪ, ಗುರುಪುರ ಗ್ರಾಪಂ ಉಪಾಧ್ಯಕ್ಷ ಉದಯ ಭಟ್, ಸದಸ್ಯರಾದ ಸದಾಶಿವ ಶೆಟ್ಟಿ, ಶೋಭಾ, ಮೋಹಿನಿ, ವಲಯ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಮಲ್ಲಿ, ಬಾಷಾ ಮೊದಲಾದವರು ಬಾವರೊಂದಿಗೆ ಇದ್ದರು.
“ಉತ್ತಮ ಅಂಕ ಬರಬಹುದೆಂದು ನಿರೀಕ್ಷಿಸಿದ್ದೆ. ನಿರೀಕ್ಷೆ ಹುಸಿಯಾಗಲಿಲ್ಲ. ಮುಂದೆ ಚಾರ್ಟಟ್ಡ್ ಅಕೌಂಟೆಂಟ್ ಆಗಬೇಕೆಂದುಕೊಂಡಿದ್ದೇನೆ. ಕಲಿಕೆಯಲ್ಲಿ ಇನ್ನಿರುವುದು ಸಾಧನೆಯ ಮಜಲು” ಎಂದು ಸನ್ಮಾನಕ್ಕುತ್ತರವಾಗಿ ಕೃತಿಕಾ ಶೆಟ್ಟಿ ಹೇಳಿದರು.

