ಕಾಪು: ಕರಾವಳಿ ಜಿಲ್ಲೆಗಳು ಮತ್ತು ರಾಜ್ಯದಲ್ಲಿ ಬಿಜೆಪಿಯ ಗೆಲುವನ್ನು ತಡೆಯಲು ಯಾರಿದಂಲೂ ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಅವರ ಪರವಾಗಿ ಕಾಪು ಪೇಟೆಯಲ್ಲಿ ಮತಯಾಚನೆ ನಡೆಸಿ ಅವರು ಮಾತನಾಡಿದರು.
ಕೇಂದ್ರದ ಅನುದಾನವನ್ನು ಬಳಸಿಕೊಂಡು ನಡೆಸುವ ಎಲ್ಲಾ ಕಾರ್ಯಕ್ರಮಗಳನ್ನೂ ರಾಜ್ಯ ಸರಕಾರ ಮತ್ತು ಹಾಲಿ ಶಾಸಕರು ಕಾಂಗ್ರೆಸ್ ಸರಕಾರದ್ದೇ ಸಾಧನೆ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದವರು, ಕಳೆದ ವಿಧಾನ ಸಭೆಯ ಬಳಿಕದ ಪ್ರತೀ ಚುನಾವಣೆಯಲ್ಲೂ ನಾವು ನಮ್ಮ ಮತಗಳನ್ನು ಏರಿಸಿಕೊಂಡು ಹೋಗಿದ್ದೇವೆ ಎಂದರು.
ಬಿಜೆಪಿ ಅಭ್ಯರ್ಥಿ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಈ ಬಾರಿ ಬಿಜೆಪಿ ಎಂಬ ಘೋಷಣೆಯೊಂದಿಗೆ ನಾವು ಚುನಾವಣೆಯನ್ನು ಎದುರಿಸುತ್ತಿದ್ದು, ಕ್ಷೇತ್ರದ ಎಲ್ಲಾ ಕಡೆಗಳಲ್ಲೂ ಬಿಜೆಪಿಗೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿದೆ. ನಮ್ಮ ಜೊತೆಗೆ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಮಾತ್ರವಲ್ಲದೇ ಮತದಾರರು ಕೂಡಾ ಮತಯಾಚನೆಗೆ ಬರುತ್ತಿರುವುದು ನಮಗೆ ವಿಶೇಷ ಸ್ಫೂರ್ತಿಯನ್ನು ನೀಡುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಜಿ.ಪಂ.ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಎರ್ಮಾಳ್, ಜಿ.ಪಂ.ಸದಸ್ಯೆ ಗೀತಾಂಜಲಿ ಸುವರ್ಣ, ಪುರಸಭೆ ವಿಪಕ್ಷ ನಾಯಕ ಅರುಣ್ ಶೆಟ್ಟಿ ಪಾದೂರು, ಬಿಜೆಪಿ ಮುಖಂಡರಾದ ವಿಜಯ ಕರ್ಕೇರ, ವಿಜಯ್ ಕುಮಾರ್ ಉದ್ಯಾವರ, ಅನಿಲ್ ಕುಮಾರ್, ಕೇಸರಿ ಯುವರಾಜ್, ಪ್ರವೀಣ್ ಕುಮಾರ್, ಸತೀಶ್ ಉದ್ಯಾವರ, ಕಿರಣ್ ಆಳ್ವ, ರಮೇಶ್ ಶೆಟ್ಟಿ, ಪ್ರದೀಪ್.ಯು, ಸುಧಾಮ ಶೆಟ್ಟಿ, ರತ್ನಾಕರ ಶೆಟ್ಟಿ, ಸುಮಾ ಯು. ಶೆಟ್ಟಿ, ಸಂದೀಪ್ ಶೆಟ್ಟಿ, ಪವಿತ್ರಾ ಶೆಟ್ಟಿ, ಮಾಲಿನಿ ಶೆಟ್ಟಿ, ಸಶಿಪ್ರಬಾ ಶೆಟ್ಟಿ, ರಮಾ ಶೆಟ್ಟಿ, ಸುರೇಂದ್ರ ಪಣಿಯೂರು, ನವೀನ್ ಎಸ್.ಕೆ. ಮತ್ತಿತರರು ಉಪಸ್ಥಿತರಿದ್ದರು.

