ಉಡುಪಿ: ಬಿಜೆಪಿ ಕಾರ್ಯಕರ್ತರು ಮನೆಮನೆ ಭೇಟಿ ನೀಡಿ ಕರ್ನಾಟಕದ ಭವಿಷ್ಯದ ಬಗ್ಗೆ ಮತದಾರರಿಗೆ ಮನನ ಮಾಡಬೇಕು. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ಯನ್ನು ಅಧಿಕಾರಕ್ಕೆ ತಂದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಇಂದು ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಮಾವೇದಲ್ಲಿ ಅವರು ಮಾತನಾಡಿದರು.
ಈಗಾಗಲೇ ನಾವು ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಮುಕ್ತ ಮಾಡುವ ಮೂಲಕ ಗಾಂಧೀಜಿ ಇಚ್ಛೆಯನ್ನು ಪೂರೈಸಿದ್ದೇವೆ. ಈ ಬಾರಿ ಕರ್ನಾಟಕದ್ದು. ಈಗ ನಿಮಗೆ ಗಾಂಧೀಜಿಯ ಇಚ್ಛೆ ಪೂರೈಸುವ ಸೌಭಾಗ್ಯ ದೊರೆತಿದೆ. ಕರ್ನಾಟಕದಲ್ಲಿಯೂ ಕಾಂಗ್ರೆಸ್ ಮುಕ್ತ ಮಾಡಿದರೆ ಗಾಂಧೀಜಿಯ ಆಶೀರ್ವಾದ ನಿಮ್ಮ ಮೇಲೂ ಬರುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆ ಮಾಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಅವಕಾಶ ಇರಬಾರದು. ಇಂತಹ ಸರಕಾರವನ್ನು ಕೊನೆಗಾಣಿಸದಿದ್ದರೆ ರಾಜ್ಯದ ಯುವ ಜನತೆಯ ಭವಿಷ್ಯ ಉಜ್ವಲ ಆಗಲು ಸಾಧ್ಯವಿಲ್ಲ ಎಂದರು.
ಈ ಭೂಮಿಯ ಯುವ ಕ್ರೀಡಾಪಟು ಗುರುರಾಜ್ ಪೂಜಾರಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಪಾತಾಕೆ ಯನ್ನು ಜಗತ್ತಿನ್ನೆಲ್ಲೆಡೆ ಹಾರಿಸಿದರು. ಉಡುಪಿ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ. ಇಡೀ ಕರ್ನಾಟಕದಲ್ಲಿ ಉಡುಪಿಯವರಿಗೆ ಪೈಪೋಟಿ ನೀಡುವವರೇ ಇಲ್ಲವಾಗಿದೆ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನರೇಂದ್ರ ಮೋದಿಗೆ ಯಕ್ಷ ಗಾನದ ಕಿರೀಟ ತೋಡಿಸಿ, ಕೃಷ್ಣ ಮೂರ್ತಿಯನ್ನು ನೀಡಿ ಗೌರವಿಸಲಾಯಿತು. ಉತ್ತರ ಪ್ರದೇಶದ ಸಚಿವ ಮಹೇಂದ್ರ ಸಿಂಗ್, ಮುಖಂಡರಾದ ಓಂ ಪ್ರಕಾಶ್, ಸಂಸದರಾದ ನಳಿನ್ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಯಪ್ರಕಾಶ್ ಹೆಗ್ಡೆ, ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.


