ಮಡಿಕೇರಿ: ತುಳು ಸಮೃದ್ಧ ಭಾಷೆಯಾಗಿದ್ದು, ಅದನ್ನು ಅನುಭವಿಸುವ ಮನಸ್ಸು ನಮಗೆ ಇರಬೇಕು. ದೈವಾರಾಧನೆಯ ಮೂಲಕ ಪ್ರಕೃತಿಯನ್ನು ಪ್ರೀತಿಸುವ ತುಳು ಸಂಸ್ಕೃತಿ ಇತರ ಎಲ್ಲಾ ಸಂಸ್ಕೃತಿಗೆ ಮಾದರಿ ಎಂದು ಮಂಗಳೂರಿನ ಸಾಹಿತಿ ಹಾಗೂ ವಾಗ್ಮಿ ದಯಾನಂದ ಕತ್ತಲ್ ಸಾರ್ ಬಣ್ಣಿಸಿದ್ದಾರೆ.
ತುಳುವೆರ ಜನಪದ ಕೂಟದ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ನಗರದ ಕಾವೇರಿ ಹಾಲ್ ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪ್ರಥಮ ವರ್ಷದ ‘ಬಿಸು ಪರ್ಬ ಸಂತೋಷಕೂಟ’ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ತುಳುವರು ಹಾಗೂ ಪ್ರಕೃತಿಗಿರುವ ಸಂಬಂಧ, ನಾಗಾರಾಧನೆ ಮತ್ತು ದೈವಾರಾಧನೆಯ ಮುಖ್ಯ ಆಶಯಗಳ ಕುರಿತು ಯುವ ಪೀಳಿಗೆಗೆ ಮನದಟ್ಟಾಗುವಂತೆ ವಿವರಿಸಿದರಲ್ಲದೆ, ತುಳು ಭಾಷೆಯನ್ನು 8ನೇ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಮೂಲಕ ಅದಕ್ಕೆ ಸಾಂವಿಧಾನಿಕವಾದ ಮಾನ್ಯತೆ ನೀಡುವಂತಾಗಬೇಕು ಎಂದು ಆಶಿಸಿದರು.
ಆದಿ ಮತ್ತು ಅಂತ್ಯವಿಲ್ಲದ ಪ್ರಾಕೃತಿಕ ಶಕ್ತಿಯೇ ದೈವವಾಗಿದ್ದು, ದೈವಾರಾಧನೆಯ ಈ ಶಕ್ತಿಯಿಂದಾಗಿಯೇ ತುಳುನಾಡು ಕಡಲ ತಡಿಯಲ್ಲಿದ್ದರೂ, ಪ್ರಾಕೃತಿಕ ವಿಕೋಪಗಳನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ಪ್ರಪಂಚದ ಯಾವುದೇ ಭಾಗದಲ್ಲಿ ಸುನಾಮಿ, ಭೂಕಂಪನಗಳಾದರೂ ತುಳುನಾಡಿಗೆ ಅದರ ಪ್ರಭಾವ ತಟ್ಟದು ಎಂದು ಅವರು ವಿಶ್ಲೇಷಿಸಿದರು.
ತುಳುವರು ಬದುಕಿನಲ್ಲಿ ಕಷ್ಟವಿದ್ದರೂ, ಅದನ್ನು ಸಂತೋಷದಿಂದ ಅನುಭವಿಸುವವರಾಗಿದ್ದು, ವರ್ಷ 12 ತಿಂಗಳುಗಳು ಕೂಡಾ ಅವರಿಗೆ ಹಬ್ಬಗಳಿವೆ. ಇಂದು ತುಳುನಾಡು ಎಂದು ಕರೆಯಲಾಗುವ ಪ್ರದೇಶ ಹಿಂದೆ ತುಳು ರಾಜ್ಯವಾಗಿತ್ತು. ಇಲ್ಲಿ 16 ಜನಾಂಗಗಳು 48 ವಿಭಾಗಗಳಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು. ಅದಕ್ಕಾಗಿಯೇ ಇಂದು ಕೂಡ ತುಳುವರಲ್ಲಿ 16 ಸಂಖ್ಯೆಗೆ ಹೆಚ್ಚಿನ ಮಹತ್ವವಿದೆ ಎಂದು ವಿವರಿಸಿದರು.
ತುಳುನಾಡಿನ ನೆಲದಲ್ಲಿ 108 ಖಾಯಿಲೆಗಳನ್ನು ಗುಣಪಡಿಸುವ ಗುಣವುಳ್ಳ 1008ಕ್ಕೂ ಅಧಿಕ ಔಷಧೀಯ ಗಿಡ ಮರಗಳಿದ್ದು, ನಾಗ ಬನ ದೈವ ಬನಗಳ ಸಂರಕ್ಷಣೆಯ ಹಿಂದೆ ಈ ಔಷಧೀಯ ಗಿಡಮರಗಳನ್ನುಉಳಿಸಿ ಬೆಳೆಸುವ ಉದ್ದೇಶ ಅಡಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಕಳಸಿಗೆಗೆ ಭತ್ತ ಸುರಿದು ಹಿಂಗಾರ ಅರಳಿಸುವ ಮೂಲಕ ತುಳುವೆರ ಜನಪದ ಕೂಟದ ಜಿಲ್ಲಾಧ್ಯಕ್ಷ ಕಿಲ್ಪಾಡಿ ಶೇಖರ ಭಂಡಾರಿ ಉದ್ಘಾಟಿಸಿದರು.
ಕೂಟದ ಗೌರವ ಸಲಹೆಗಾರ ಬಾಲಕೃಷ್ಣ ರೈ, ಮುಖ್ಯ ಅತಿಥಿಯಾಗಿದ್ದ ‘ಅಪ್ಪೆ ಟೀಚರ್’ ತುಳು ಚಿತ್ರದ ನಾಯಕ ನಟ ಸುನಿಲ್ ಬಜೆಗುಂಡಿ, ಕೂಟದ ಉಪಾಧ್ಯಕ್ಷ ಬಿ.ವೈ.ಆನಂದ ರಘು ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಂಗಳೂರಿನ ಉದ್ಯಮಿ ಜಯಂತಿ ಆರ್. ಶೆಟ್ಟಿ, ಕೂಟದ ಸ್ಥಾಪಕ ಕಾರ್ಯದರ್ಶಿ ಹರೀಶ್ ಆಳ್ವ, ಸಂಚಾಲಕ ಶ್ರೀಧರ್ ನೆಲ್ಲಿತ್ತಾಯ ಮತ್ತಿತರರು ಮಾತನಾಡಿದರು.
ಬಿಸು ಪರ್ಬ ಆಚರಣಾ ಸಮಿತಿ ಕಾರ್ಯಾಧ್ಯಕ್ಷ ಬಿ.ಬಿ.ಐತಪ್ಪ ರೈ ಅವರು ಅಧ್ಯಕ್ಷತೆವಹಿಸಿ, ಪ್ರಥಮ ವರ್ಷದ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸುವ ಗುರಿ ಹೊಂದಲಾಗಿತ್ತಾದರೂ, ಚುನಾವಣಾ ನೀತಿ ಸಂಹಿತೆಯಿಂದಾಗಿ ಸಾಧ್ಯವಾಗಲಿಲ್ಲ ಎಂದು ವಿಷಾದಿಸಿದರಲ್ಲದೆ, ಮುಂದಿನ ದಿನಗಳಲ್ಲಿ ಅದ್ಧೂರಿಯ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.
ಸಮಾರಂಭದಲ್ಲಿ ಕೂಟದ ಉಪಾಧ್ಯಕ್ಷ ಬಿ.ಡಿ.ನಾರಾಯಣ ರೈ, ಸಲಹೆಗಾರ ಎಂ.ಡಿ.ನಾಣಯ್ಯ, ಮಡಿಕೇರಿ ತಾಲೂಕು ಅಧ್ಯಕ್ಷ ಪ್ರಭು ರಐ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ದಿನೇಶ್ ಕುಲಾಲ್,ವೀರಾಜಪೇಟೆ ತಾಲೂಕು ಅಧ್ಯಕ್ಷ ದಾಮೋದರ ಆಚಾರ್ಯ, ಮಡಿಕೇರಿ ನಗರ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ರವಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪುರುಷೋತ್ತಮ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ಸ್ವಾಗತಿಸಿದರು. ಬಿ.ಎಸ್. ಜಯಪ್ಪ ಕಾರ್ಯಕ್ರಮ ನಿರ್ವಹಿಸಿದರು.
ಅಪರಾಹ್ನ ಸಿನಿಮಾ ಮತ್ತು ಜನಪದ ನೃತ್ಯ, ಉಮೇಶ್ ಮಿಜಾರು ತಂಡದವರಿಂದ ತೆಲಿಕೆದ ಗೊಂಚಿಲ್ ತುಳು ಹಾಸ್ಯ ನಾಟಕ ಪ್ರದರ್ಶನಗೊಂಡಿತು.


