ಉಡುಪಿ: ನಮ್ಮ ವರ್ತನೆ ಮತ್ತು ಸಂವಹನವು ಮಾನವೀಯ ಸಂಬಂಧದ ಕೊಂಡಿಯಾಗಿದ್ದು, ಹೀಗಾಗಿ ಮಾನವೀಯ ಸಂಬಂಧವನ್ನು ಬೆಳೆಸಬೇಕಾದ ಅಗತ್ಯವಿದೆ ಎಂದು ಜೇಸಿ ತರಬೇತುದಾರ ರಾಘವೇಂದ್ರ. ಕೆ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಉಡುಪಿ ಮಿಷನ್ ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳಿಗೆ ಆಯೋಜಿಸಿದ್ದ ವಯಕ್ತಿತ್ವ ವಿಕಸನ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಸಂಬಂಧಗಳು ಹಾಳಾಗಲು ನಮ್ಮ ಮಾತೆ ಕಾರಣ. ನಗು ಮತ್ತು ಉತ್ತಮವಾದ ಮಾತಿನ ಮೂಲಕ ನಾವು ಜನರ ಪ್ರೀತಿಯನ್ನು ಸಂಪಾದಿಸಬಹುದು ಎಂದವರು, ಪರಿಸರದಲ್ಲಿರುವ ಅನೇಕ ರೀತಿಯ ವಿಚಾರಗಳಿಂದ ನಾವು ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ ಇದು ಸರಿಯಲ್ಲ. ನಾವು ಉತ್ತಮವಾದ ಸಾಮಾಜಿಕ ಬದ್ಧತೆಯನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಬದುಕಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಮೆನೆಜಸ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವೈದ್ಯ ಡಾ. ಗಣೇಶ್ ಕಾಮತ್, ನರ್ಸಿಂಗ್ ವಿಭಾಗದ ಅಲನ್ ಮಥಾಯಿಸ್, ಪಿಆರ್ ಒ ರೋಹಿ ರತ್ನಾಕರ್, ರೋಲಾಂಡ್ ಜೇಸಿಐ ವಲಯ ಉಪಾಧ್ಯಕ್ಷ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

