ಉಳ್ಳಾಲ: ಗೋಕಳ್ಳರನ್ನು ಪೊಲೀಸರು ಬಂಧಿಸಲು ಅಸಾಧ್ಯವಾದರೆ ಹಿಂದೂ ಸಂಘಟನೆಗಳಿಗೆ ಜವಾಬ್ದಾರಿ ಕೊಡಲಿ ಆರೋಪಿಗಳನ್ನು ಹಿಡಿದು ತರುತ್ತೇವೆ ಎಂದು ಕುಂಟಾರು ರವೀಶ ತಂತ್ರಿ ಸವಾಲು ಹಾಕಿದ್ದಾರೆ.
ಗೋ ಕಳ್ಳತನ ಖಂಡಿಸಿ ಟಿ.ಜಿ. ರಾಜಾರಾಮ ಭಟ್ ಕಳೆದ 5 ದಿನಗಳಿಂದ ಉಪವಾಸ ಸತ್ಯಾಗ್ರಹಕ್ಕೆ ನಡೆಸುತ್ತಿರುವ ಕೈರಂಗಳ ಪುಣ್ಯಕೋಟಿ ನಗರಕ್ಕೆ ಆಗಮಿಸಿ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾತನಾಡಿದರು.
ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ಗೋ ಕಳ್ಳರನ್ನು ಬಂಧಿಸಲಾಗದೇ ಇದ್ದಲ್ಲಿ ಪೊಲೀಸರು ಮತ್ತು ಸರಕಾರ ಸಮಾಜಕ್ಕೆ ಉತ್ತರ ಕೊಡಬೇಕು ಎಂದರು.
ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾದ ಫಝಲ್ ಅಸೈಗೋಳಿ ಮಾತನಾಡಿ, ಕಳವು ನಡೆಸುವಾತ ಇಸ್ಲಾಂ ಧರ್ಮದ ಪ್ರತಿಪಾದಕನಾಗಲು ಸಾಧ್ಯವಿಲ್ಲ. ಈ ಹೋರಾಟವನ್ನು ಮುಸ್ಲಿಂ ಸಮಾಜ ಬೆಂಬಲಿಸಲಿದೆ ಎಂದು ತಿಳಿಸಿದರು.
ಮಹಮ್ಮದ್ ಹನೀಫ್ ಅಸೈಗೋಳಿ ಮಾತನಾಡಿ, ಇಸ್ಲಾಂನಲ್ಲಿ ಕದ್ದು ತಿನ್ನಬಾರದು ಎಂಬ ಶಾಸ್ತ್ರವಿದೆ. ಈ ಅಪರಾಧ ಮಾಡಿದವರನ್ನು ಬಂಧಿಸಿ, ಶಿಕ್ಷಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯಬಾರದು ಎಂದು ನುಡಿದರು.
ಈ ಸಂದರ್ಭದಲ್ಲಿ ಸೂರ್ಯನಾರಾಯಣ ಭಟ್ ಕಶೆಕೋಡಿ, ಹಿಂಜಾವೇ ಸಂಚಾಲಕ ಗಣರಾಜ ಭಟ್ ಕೆದಿಲ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಭೇಟಿ ಮತ್ತಿತರರು ಉಪಸ್ಥಿತರಿದ್ದರು.


